LATEST NEWS
ಪೊಲೀಸ್ ಮಾಹಿತಿದಾರನ ಹುಡುಕಿ ಬಂದ ನಕ್ಸಲರು

ಪೊಲೀಸ್ ಮಾಹಿತಿದಾರನ ಹುಡುಕಿ ಬಂದ ನಕ್ಸಲರು
ಪುತ್ತೂರು ಜನವರಿ 16: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ನಕ್ಸಲ ಚಟುವಟಿಕೆ ಪ್ರಾರಂಭವಾಗಿದೆ. ಪುತ್ತೂರು ತಾಲೂಕಿನ ಶಿರಾಡಿ ರಕ್ಷಿತಾರಣ್ಯದ ಅಡ್ಡಹೊಳೆ ಸಮೀಪದ ಮಿತ್ತಮಜಲು ಪ್ರದೇಶಕ್ಕೆ ಆಗಮಿಸಿದ್ದಾರೆ. ಒರ್ವ ಮಹಿಳೆ ಹಾಗೂ ಇಬ್ಬರು ಪುರುಷರಿದ್ದ ಶಸ್ತ್ರಸಜ್ಜಿತ ತಂಡ ಮಿತ್ತಮಜಲು ಪ್ರದೇಶದ ಮೂರು ಮನೆಗಳಿಗೆ ಭೇಟಿ ನೀಡಿದೆ.
ದಕ್ಷಿಣಕನ್ನಡ ಜಿಲ್ಲೆಯ ಪಶ್ಚಿಮಘಟ್ಟದ ಅಂಚಿನಲ್ಲಿ ಮತ್ತೆ ನಕ್ಸಲ ಚಟುವಟಿಕೆ ಪ್ರಾರಂಭವಾಗಿದೆ. ಜಿಲ್ಲೆಯ 10-12 ಗ್ರಾಮಗಳು ಇತ್ತೀಚೆಗೂ ನಕ್ಸಲ್ ಬಾಧಿತ ಗ್ರಾಮಗಳಾಗಿಯೇ ಗುರುತಿಸಿಕೊಂಡಿದೆ. ನಕ್ಸಲ್ ಬಾದಿತ ಗ್ರಾಮಗಳನ್ನು ಬಿಟ್ಟು ಇದೀಗ ನಕ್ಸಲ್ ತಂಡ ಬೆಳ್ತಂಗಡಿ ತಾಲೂಕಿನ ಶಿಬಾಜೆ, ಪುತ್ತೂರು ತಾಲೂಕಿನ ಶಿರಾಡಿ, ಗುಂಡ್ಯಾ ಪ್ರದೇಶಗಳಲ್ಲಿ ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸಿದ್ದಾರೆ.

ಕಳೆದ ಭಾನುವಾರ ಮೂವರು ಸದಸ್ಯರಿದ್ದ ನಕ್ಸಲರ ತಂಡ ಇಲ್ಲಿನ ಲೀಲಾ, ಸುರೇಶ್ ಹಾಗೂ ಮೋಹನ್ ಎಂಬವರ ಮನೆಗೆ ಬಂದು ಮನೆ ಮಂದಿಯಲ್ಲಿ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದೆ. ಅಲ್ಲದೆ ತಮ್ಮ ಬಳಿಯಿದ್ದ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಗಳನ್ನು ಚಾರ್ಜ್ ಮಾಡಲು ಅನುಮತಿಯನ್ನೂ ಕೇಳಿದೆ.
ಕಳೆದ ಎರಡು ಮೂರು ವರ್ಷಗಳಿಂದ ನಕ್ಸಲರ ಚಟುವಟಿಕೆಗಳು ಶಿರಾಡಿ ಅರಣ್ಯಕ್ಕೆ ಶಿಫ್ಟ್ ಆದ ಬಗ್ಗೆ ಸುಳಿವು ಲಭ್ಯವಾಗಿದೆ. ನಾಲ್ಕೈದು ವರ್ಷಗಳ ಹಿಂದೆ ಗುಂಡ್ಯಾ ವ್ಯಾಪ್ತಿಯ ಭಾಗ್ಯ ಅರಣ್ಯದಲ್ಲಿ ಇದೇ ರೀತಿಯಲ್ಲಿ ನಕ್ಸಲರು ಕ್ಯಾಂಪ್ ಮಾಡಿಕೊಂಡಿದ್ದರು.
ಇದರ ಮಾಹಿತಿ ಪಡೆದ ನಕ್ಸಲ್ ನಿಗ್ರಹದಳ ತನ್ನ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಎಲ್ಲಪ್ಪ ಎನ್ನುವ ನಕ್ಸಲ್ ನನ್ನು ಹತ್ಯೆ ಮಾಡಿತ್ತು. ಬಳಿಕದ ಸಮಯದಲ್ಲಿ ಕಳೆದ ಎರಡು ವರ್ಷಗಳಿಂದ ಶಿರಾಡಿ ಪರಿಸರದಲ್ಲಿ ನಕ್ಸಲರು ತನ್ನ ಬಾಹುಳ್ಯವನ್ನು ಸಾಧಿಸಲು ಪ್ರಯತ್ನಿಸುತ್ತಿರುವುದು ತಿಳಿದು ಬಂದಿದೆ.
ಅಡ್ಡಹೊಳೆಯ ಮಿತ್ತಮಜಲು ಪರಿಸರಕ್ಕೆ ನಕ್ಸಲ್ ಭೇಟಿ ಹಿನ್ನಲೆಯಲ್ಲಿ ನಕ್ಸಲ್ ನಿಗ್ರಹದಳ ಈಗಾಗಲೇ ತನ್ನ ಕೂಂಬಿಂಕ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಈ ಸಂದರ್ಭದಲ್ಲಿ ಮನೆ ಮಂದಿ ರಾಜೇಶ್ ಎನ್ನುವ ನಕ್ಸಲ್ ತಮ್ಮ ಮನೆಗೆ ಬಂದ ತಂಡದಲ್ಲಿ ಇದ್ದ ಎನ್ನುವುದನ್ನು ಖಚಿತಪಡಿಸಿದೆ. ಅಲ್ಲದೆ ಉಳಿದ ಇಬ್ಬರು ತಮ್ಮನ್ನು ಪುರುಷೋತ್ತಮ ಹಾಗೂ ಲತಾ ಎಂದು ಪರಿಚಯಿಸಿಕೊಂಡಿದೆ.
ಸ್ಥಳೀಯ ನಿವಾಸಿ ಸುರೇಶ್ ಎನ್ನುವವರು ಹೇಳುವ ಪ್ರಕಾರ ಮಿತ್ತಮಜಲಿಗೆ ಆಗಮಿಸಿದ ತಂಡ ಬಿಜು ಎನ್ನುವ ವ್ಯಕ್ತಿಯ ವಿರುದ್ಧ ಸೇಡು ತೀರಿಸಲು ಬಂದಿರುವುದಾಗಿ ಹೇಳಿಕೊಂಡಿದೆ. ಬಿಜು ಎನ್ನುವ ವ್ಯಕ್ತಿ ತಮ್ಮ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡುತ್ತಿದ್ದು, ಅವನೇ ತಮ್ಮ ಟಾರ್ಗೆಟ್ ಎಂದೂ ಹೇಳಿದೆ. ಆದರೆ ಈ ಮಾಹಿತಿಯನ್ನು ಪೋಲೀಸರು ಒಪ್ಪಿಕೊಳ್ಳುತ್ತಿಲ್ಲವಾದರೂ, ಸ್ಥಳೀಯರು ನೀಡಿದ ಮಾಹಿತಿಯ ಹಿನ್ನಲೆಯಲ್ಲಿ ತನಿಖೆಯನ್ನು ಕೈಗೊಂಡಿದ್ದಾರೆ.