Connect with us

    DAKSHINA KANNADA

    ಜನಸಾಮಾನ್ಯನ ನಿದ್ದೆಗೆಡಿಸಿದ ಎಂ.ಎನ್. ರಾಜೇಂದ್ರ ಕುಮಾರರ ನವೋದಯ ಸಂಭ್ರಮ

    ಜನಸಾಮಾನ್ಯನ ನಿದ್ದೆಗೆಡಿಸಿದ ಎಂ.ಎನ್. ರಾಜೇಂದ್ರ ಕುಮಾರರ ನವೋದಯ ಸಂಭ್ರಮ

    ಮಂಗಳೂರು, ಜನವರಿ 19: ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾಗಿ ಆಯ್ಕೆಯಾಗಿ ಬರೋಬ್ಬರಿ ಇಪ್ಪತ್ತೈದು ವರ್ಷ ಪೂರೈಸಿದ ಎಂ.ಎನ್.ರಾಜೇಂದ್ರ ಕುಮಾರ್ ಅವರ ಅಧ್ಯಕ್ಷತೆಯ ರಜತ ಸಂಭ್ರಮ ಹಾಗೂ ನವೋದಯ ಸ್ವಸಹಾಯ ಗುಂಪುಗಳ ವಿಂಶತಿ ಸಮಾವೇಶ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಿತು.

    ಜನಪ್ರತಿನಿಧಿಗಳು, ವಿವಿಧ ಭಾಗಗಳಿಂದ ಬಂದ ಸ್ವ ಸಹಾಯ ಗುಂಪುಗಳ ಸುಮಾರು 80 ಸಾವಿರಕ್ಕೂ ಮಿಕ್ಕಿದ ಜನ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

    ರಜಾ ದಿನಗಳಲ್ಲಿ ಇಂಥಹ ಬೃಹತ್ ಸಮಾವೇಶಗಳನ್ನು ಹಮ್ಮಿಕೊಳ್ಳುವ ಬದಲು ಎಲ್ಲರಿಗೂ ತನ್ನ ಅಧ್ಯಕ್ಷತೆಯ ವಿಚಾರ ತಿಳಿಯಲಿ ಎನ್ನುವ ಕಾರಣಕ್ಕೆ ಕೆಲಸದ ದಿನವನ್ನೇ ಈ ಸಮಾವೇಶ ನಡೆಸಲು ಆಯ್ಕೆ ಮಾಡಲಾಗಿತ್ತು.

    ಬಸ್ಸು, ಕಾರು ಹೀಗೆ ಎಲ್ಲಾ ವಾಹನಗಳಲ್ಲಿ ಬಂದ ಜನರಿಂದಾಗಿ ಇಡೀ ಮಂಗಳೂರೇ ಅಲ್ಲೋಲ ಕಲ್ಲೋಲವಾಗಿತ್ತು.

    ಅಂಬ್ಯುಲೆನ್ಸ್ ಗಳಿಗೆ ಸರಿಯಾದ ಸಮಯದಲ್ಲಿ ರೋಗಿಯನ್ನು ಆಸ್ಪತ್ರೆಗೆ ಮುಟ್ಟಿಸಲಾಗದ, ಮಕ್ಕಳು ಸರಿಯಾಗಿ ಶಾಲೆ, ಕಾಲೇಜು, ಮನೆಗಳಿಗೆ ತಲುಪಲಾರದಂತಹ, ದುಡಿಯುವ ಜನ ತಮ್ಮ ಆಫೀಸ್ ಗಳಿಗೆ ಸರಿಯಾದ ಸಮಯದಲ್ಲಿ ತಲುಪದಾಗದಂತಹ ಸ್ಥಿತಿಯನ್ನು ಈ ಸಮಾವೇಶ ನಿರ್ಮಾಣ ಮಾಡಿದೆ.

    ಅಲ್ಲದೆ ಪ್ರತಿ ದಿನ ನಿಗದಿತ ರೂಟ್ ಗಳಲ್ಲಿ ಸಂಚರಿಸುವ ಬಸ್ ಗಳನ್ನೂ ಈ ಸಮಾವೇಶಕ್ಕೆ ಬಳಸಿಕೊಂಡ ಪರಿಣಾಮ ಮಕ್ಕಳು ಹಾಗೂ ದುಡಿಯುವ ವರ್ಗ ಬಸ್ ಗಾಗಿ ಬಸ್ ನಿಲ್ದಾಣಗಳಲ್ಲೇ ಕಾಯುವಂತಹ ಸ್ಥಿತಿ ನಿರ್ಮಾಣಗೊಂಡಿದೆ.

    ಕೆಲವು ಖಾಸಗಿ ಬಸ್ ಗಳು ತಮ್ಮ ಎಲ್ಲಾ ಟ್ರಿಪ್ ಕಟ್ ಮಾಡಿ ಸಮಾವೇಶಕ್ಕೆ ಹೋಗಿದ್ದರೆ, ಗ್ರಾಮೀಣ ಭಾಗದ ಜನರ ಸಂಪರ್ಕ ನಾಡಿಯಾದ ಕೆ.ಎಸ್.ಆರ್.ಟಿ.ಸಿ ಬಸ್ ಗಳೂ ಟ್ರಿಪ್ ಕಟ್ ಮಾಡುವ ಮೂಲಕ ಜನರಿಗೆ ಭಾರೀ ತೊಂದರೆಯನ್ನು ನೀಡಿದೆ.

    ಪುತ್ತೂರು ಕೆ.ಎಸ್.ಆರ್.ಟಿ.ಸಿ ಘಟಕವೊಂದರಿಂದಲೇ ನೂರಾರು ಬಸ್ ಗಳನ್ನು ಸಮಾವೇಶಕ್ಕಾಗಿ ಮೀಸಲಿಡಲಾಗಿದ್ದು, ಈ ಸಂಬಂಧ ಅಧಿಕಾರಿಗಳನ್ನು ವಿಚಾರಿಸಲೆಂದು ಮಾಡಿದ ಕರೆಯನ್ನೂ ಸ್ವೀಕರಿಸದೆ ಭಂಢತನವನ್ನೂ ಮೆರೆದಿದ್ದಾರೆ.

    ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಇಪ್ಪತ್ತೈದು ವರ್ಷಗಳಿಂದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಂ.ಎನ್.ರಾಜೇಂದ್ರ ಕುಮಾರ್ ಅವರು ಜನಸಾಮಾನ್ಯನಿಗೆ ನೀಡಿದ ಕೊಡುಗೆ ಏನು ಎನ್ನುವುದರ ಚರ್ಚೆ ಚಾಲ್ತಿಯಲ್ಲಿರುವ ಈ ಸಮಯದಲ್ಲೇ ಇಷ್ಟೊಂದು ದೊಡ್ಡ ಮಟ್ಟದ ಸಮಾವೇಶ ನಡೆಸಿ ಜನಸಾಮಾನ್ಯನಿಗೆ ತೊಂದರೆ ನೀಡುವ ಅಗತ್ಯವೇನಿತ್ತು ಎನ್ನುವ ಪ್ರಶ್ನೆ ದಕ್ಷಿಣಕನ್ನಡ ಜಿಲ್ಲೆಯ ಪ್ರತಿಯೊಬ್ಬ ಜನತೆಯಲ್ಲಿ ಮೂಡುತ್ತಿದೆ.

    ಸಮಾವೇಶ ಮಾಡಬೇಕೇ ಎಂದಿದ್ದಲ್ಲಿ, ನಗರದಿಂದ ಕೊಂಚ ದೂರ ಗ್ರಾಮೀಣ ಭಾಗದಲ್ಲಿ ಸಮಾವೇಶವನ್ನು ಮಾಡುತ್ತಿದ್ದಲ್ಲಿ ಜಿಲ್ಲೆಯ ಜನ ಇಂದು ಅನುಭವಿಸಿದ ತೊಂದರೆಯನ್ನು ತಪ್ಪಿಸಬಹುದಿತ್ತೇನೋ.

    ಎಸ್.ಕೆ.ಎಸ್.ಎಮ್.ಎಸ್ ಸಂಸ್ಥೆಯ ಮಂಗಳೂರಿನಲ್ಲಿರುವ ಆಸ್ತಿಯನ್ನು ಗುಳುಂ ಮಾಡಿದ ಆರೋಪ ಎದುರಿಸುತ್ತಿರುವ ಅಧ್ಯಕ್ಷರು ಇಂಥ ಸಮಾವೇಶವನ್ನು ನಡೆಸಿ ಯಾರನ್ನು ಮೆಚ್ಚಿಸಲು ಹೊರಟಿದ್ದಾರೋ ಎನ್ನುವ ಪ್ರಶ್ನೆ ಮಾತ್ರ ಇಂದಿಗೂ ಕಗ್ಗಂಟಾಗಿಯೇ ಉಳಿದಿದೆ.

    ರಾಜೇಂದ್ರ ಕುಮಾರಿಗೆ ಜನಸಾಮಾನ್ಯರಿಂದ ಮಂಗಳಾತಿ ವಿಡಿಯೋ..

    Share Information
    Advertisement
    Click to comment

    You must be logged in to post a comment Login

    Leave a Reply