LATEST NEWS
ಮಂಗಳೂರಿನ ಐಎಸ್ಪಿಆರ್ಎಲ್ ಉದ್ಯೋಗಿಗಳ ಸಮಸ್ಯೆ ಪರಿಹಾರಕ್ಕೆ ಸಂಸದ ಕ್ಯಾ. ಚೌಟ ಪೆಟ್ರೋಲಿಯಂ ಸಚಿವಾಲಯ ಕಾರ್ಯದರ್ಶಿ ಭೇಟಿ

ಮಂಗಳೂರು /ದೆಹಲಿ ಮಾರ್ಚ್ 10: ಮಂಗಳೂರಿನಲ್ಲಿರುವ ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ಐಎಸ್ಪಿಆರ್ಎಲ್)ನ ಕಚ್ಚಾ ತೈಲ ಸಂಗ್ರಹಾಗಾರ ಘಟಕದಲ್ಲಿ ದುಡಿಯುತ್ತಿರುವ ಉದ್ಯೋಗಿಗಳ ವೇತನ ತಾರತಮ್ಯ, ಭತ್ಯೆ-ಭಡ್ತಿ ಸಮಸ್ಯೆಗೆ ವ್ಯವಸ್ಥಿತ ಎಚ್ಆರ್ ನೀತಿ ಅನುಷ್ಠಾನಗೊಳಿಸುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಪಂಕಜ್ ಜೈನ್ ಅವರಲ್ಲಿ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಇಂದು ಪಂಕಜ್ ಅವರನ್ನು ಭೇಟಿ ಮಾಡಿದ ಸಂಸದರು, ಸುಮಾರು 8 ವರ್ಷಗಳಿಂದ ಬಗೆಹರಿಯದೆ ತೊಂದರೆ ಅನುಭವಿಸುತ್ತಿರುವ ಮಂಗಳೂರಿನ ಐಎಸ್ಪಿಆರ್ಎಲ್ ಘಟಕದ ಉದ್ಯೋಗಿಗಳ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸುವಂತೆ ಕೋರಿದ್ದಾರೆ. ಜತೆಗೆ, ಈ ಕಚ್ಚಾ ತೈಲ ಸಂಗ್ರಹಾಗಾರ ಘಟಕದಲ್ಲಿ ದುಡಿಯುವ ಉದ್ಯೋಗಿಗಳಿಗೆ ವ್ಯವಸ್ಥಿತ ಮಾನವ ಸಂಪನ್ಮೂಲ ನೀತಿಯಿಲ್ಲದೆ ಏನೆಲ್ಲ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದರ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ, ಇಲ್ಲಿನ ನೌಕರರು ಎದುರಿಸುತ್ತಿರುವ ಗಂಭೀರ ಔದ್ಯೋಗಿಕ ಸಮಸ್ಯೆಗಳನ್ನು ಕಾರ್ಯದರ್ಶಿಯವರಿಗೆ ಮನವರಿಕೆ ಮಾಡಿದ್ದಾರೆ.

ಸಾರ್ವಜನಿಕ ವಲಯದ ತೈಲ ಸಂಸ್ಥೆಗಳಿಂದ ನಿಯೋಜನೆಗೊಳ್ಳುವ ಅಧಿಕಾರಿಗಳಿಗೆ ಹೋಲಿಸಿದರೆ ಈ ಐಎಸ್ಪಿಆರ್ಎಲ್ ಘಟಕಕ್ಕೆ ನೇರ ನೇಮಕವಾಗುವ ಉದ್ಯೋಗಿಗಳ ವೇತನ ಪಾವತಿ ಹಾಗೂ ಭತ್ಯೆ ನೀಡುವಲ್ಲಿ ಸಾಕಷ್ಟು ತಾರತಮ್ಯ ಮಾಡಲಾಗುತ್ತಿದೆ. ಐಎಸ್ಪಿಆರ್ಎಲ್ನಲ್ಲಿ ಹಲವರು ಸುಮಾರು 5 ವರ್ಷಗಳಿಂದ ಯಾವುದೇ ಭಡ್ತಿ ದೊರೆಯದೆ ಒಂದೇ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ಅವಧಿಯಲ್ಲಿಯೂ ತಾರತಮ್ಯವಿದ್ದು, ಮಂಗಳೂರಿನ ಐಎಸ್ಪಿಆರ್ಎಲ್ನಲ್ಲಿರುವ ಉದ್ಯೋಗಿಗಳು ವಾರಕ್ಕೆ 6 ದಿನ ಕೆಲಸ ಮಾಡಬೇಕು. ಅದೇ ನೋಯ್ಡಾದ ಐಎಸ್ಪಿಆರ್ಎಲ್ ಕೇಂದ್ರ ಕಚೇರಿ ಅಧಿಕಾರಿಗಳಿಗೆ ವಾರಕ್ಕೆ ಐದು ದಿನ ಮಾತ್ರ ಕೆಲಸ ಮಾಡುವ ಸೌಲಭ್ಯವಿದೆ ಎಂದು ಕ್ಯಾ. ಚೌಟ ಅವರು ಕಾರ್ಯದರ್ಶಿಗಳ ಗಮನಸೆಳೆದಿದ್ದಾರೆ.
ಅತ್ಯಂತ ಅಪಾಯಕಾರಿ ಉದ್ಯೋಗದ ಸವಾಲುಗಳಿರುವ ಸ್ಥಳವಾಗಿದ್ದರೂ, ಇಲ್ಲಿನ ಉದ್ಯೋಗಿಗಳಿಗೆ ಸರಿಯಾದ ವೈದ್ಯ ಸೌಲಭ್ಯ, ವಿಮಾ ವ್ಯವಸ್ಥೆ, ಪಿಂಚಣಿ, ಗ್ರಾಚ್ಯುಟಿ, ಶಿಫ್ಟ್ ಭತ್ಯೆ, ಅಪಘಾತ ಪರಿಹಾರ ಸೇರಿ ಯಾವುದೇ ಕಾರ್ಮಿಕ ಸವಲತ್ತುಗಳಿಲ್ಲ. ಬೇರೆ ಕೈಗಾರಿಕೆಗಳಿಗೆ ಹೋಲಿಸಿದರೆ ಐಎಸ್ಪಿಆರ್ಎಲ್ನಲ್ಲಿ ಪಿಡಿಎಫ್ ತರಬೇತಿ ಅವಧಿಯು ಒಂದರ ಬದಲಿಗೆ 2 ವರ್ಷಗಳಾಗಿದೆ. ಇದರಿಂದ ಅವರ ವೃತ್ತಿ ಭವಿಷ್ಯಕ್ಕೂ ತೊಂದರೆಯಾಗುತ್ತಿದೆ ಎಂದು ಕ್ಯಾ. ಚೌಟ ಅವರು ಇದೇವೇಳೆ ಪಂಕಜ್ ಜೈನ್ ಅವರ ಗಮನಕ್ಕೆ ತಂದಿದ್ದಾರೆ.
ದೇಶದ ಇಂಧನ ರಕ್ಷಣೆ ಹಾಗೂ ಭವಿಷ್ಯದ ದೃಷ್ಟಿಯಿಂದ ಐಎಸ್ಪಿಆರ್ಎಲ್ನಲ್ಲಿ ದುಡಿಯುವ ಉದ್ಯೋಗಿಗಳು-ಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದೆ. ಹೀಗಿರುವಾಗ, ಈ ಐಎಸ್ಪಿಆರ್ಎಲ್ ಘಟಕದಲ್ಲಿ ದುಡಿಯುತ್ತಿರುವ ಉದ್ಯೋಗಿಗಳಿಗೆ ಸಮಗ್ರ ಎಚ್ಆರ್(ಮಾನವ ಸಂಪನ್ಮೂಲ) ನೀತಿ ರೂಪಿಸಬೇಕು. ಜತೆಗೆ ವೇತನ ಆದ್ಯತೆ, ಉತ್ತಮ ಸೌಲಭ್ಯ, ಸೇವಾ ಭದ್ರತೆಗಾಗಿ ಈ ಕೂಡಲೇ ಮಧ್ಯಂತರ ಪರಿಹಾರವನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಕ್ಯಾ. ಚೌಟ ಅವರು ಕೋರಿದ್ದಾರೆ.
ಸಂಸದರ ಮನವಿ ಆಲಿಸಿದ ಪಂಕಜ್ ಜೈನ್ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಆದಷ್ಟು ಬೇಗ ಮಂಗಳೂರಿನ ಐಎಸ್ಪಿಆರ್ಎಲ್ ಕಚ್ಚಾ ತೈಲ ಸಂಗ್ರಹಾಗಾರ ಘಟಕದ ಉದ್ಯೋಗಿಗಳ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ಪೆಟ್ರೋಲಿಯಂ ಸಚಿವಾಲಯ ಕಾರ್ಯದರ್ಶಿ ಪಂಕಜ್ ಜೈನ್ ಭೇಟಿ ಬಳಿಕ ಪ್ರತಿಕ್ರಿಯಿಸಿರುವ ಕ್ಯಾ. ಚೌಟ, “ಐಎಸ್ಪಿಆರ್ಎಲ್ನಂಥ ಆಯಕಟ್ಟಿನ ಔದ್ಯೋಗಿಕ ಸಂಸ್ಥೆಯಲ್ಲಿ ದುಡಿಯುವ ಉದ್ಯೋಗಿಗಳ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಬೇಕು. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸದಾ ಜನ ಕಲ್ಯಾಣಕ್ಕಾಗಿ ಹೆಚ್ಚಿನ ಒತ್ತು ನೀಡುತ್ತಿದೆ. ಹಲವು ವರ್ಷಗಳಿಂದ ಬಗೆಹರಿಯದೆ ಬಾಕಿಯಾಗಿದ್ದ ಮಂಗಳೂರಿನ ಜಿಎಂಪಿಎಲ್ ಸಮಸ್ಯೆಯನ್ನು ಕೂಡ ಕೆಲವು ತಿಂಗಳ ಹಿಂದೆಯಷ್ಟೇ ಶೀಘ್ರವಾಗಿ ಪರಿಶೀಲಿಸಿ ಬಗೆಹರಿಸಿದ್ದಾರೆ. ಹೀಗಿರುವಾಗ, 8 ವರ್ಷಗಳಿಂದ ಬಗೆಹರಿಯದೆ ಬಾಕಿಯಾಗಿರುವ ಐಎಸ್ಪಿಆರ್ಎಲ್ನ ಉದ್ಯೋಗಿಗಳ ಸಮಸ್ಯೆಗೂ ಶೀಘ್ರ ಪರಿಹಾರ ದೊರೆಯುವ ಪೂರ್ಣ ವಿಶ್ವಾಸವಿದೆ” ಎಂದು ಹೇಳಿದ್ದಾರೆ.