LATEST NEWS
ಕೇರಳ – ನೈತಿಕ ಪೊಲೀಸ್ ಗಿರಿಗೆ ಮಹಿಳೆ ಬಲಿ – ಮೂವರು ಎಸ್ ಡಿಪಿಐ ಕಾರ್ಯಕರ್ತರು ಅರೆಸ್ಟ್

ಕಣ್ಣೂರು ಜೂನ್ 20: ನೈತಿಕ ಪೊಲೀಸ್ ಗಿರಿಯಿಂದ ಬೇಸತ್ತ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದ ಪಿಣರಾಯಿ ಪೊಲೀಸ್ ಠಾಣೆಯ ವ್ಯಾಪ್ತಿಯ ಕಾಯಲೋಡ್ ಎಂಬಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಸ್ ಡಿಪಿಐ ಕಾರ್ಯಕರ್ತರನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ಪರಂಬಾಯಿ ನಿವಾಸಿಗಳಾದ ವಿಸಿ ಮಂಜಿಲ್ನ ಎಂಸಿ ಮುಬ್ಶೀರ್ (28), ಕಣಿಯನ್ ವಳಪ್ಪಿಲ್ನ ಕೆಎ ಫೈಸಲ್ (34) ಮತ್ತು ಕೂಡಥನ್ ಕಂಡಿ ಹೌಸ್ನ ವಿಕೆ ರಫ್ನಾಸ್ (24) ಎಂದು ತಿಳಿದುಬಂದಿದೆ. ಸ್ಥಳೀಯ ನಿವಾಸಿಗಳ ಗುಂಪೊಂದು ನಡೆಸಿದ ನೈತಿಕ ಪೊಲೀಸ್ ಗಿರಿಯಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಂಬಲಾಗಿದೆ. ಬಂಧಿತ ವ್ಯಕ್ತಿಗಳು ಅವರನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ಭಾನುವಾರ ಸಂಜೆ ಅಚ್ಚಂಕರ ಮಸೀದಿಯ ಬಳಿ ಈ ಘಟನೆ ನಡೆದಿದ್ದು, ರಸೀನಾ ತನ್ನ ಪುರುಷ ಸ್ನೇಹಿತನೊಂದಿಗೆ ಕಾರಿನಲ್ಲಿ ಕುಳಿತಿದ್ದರು. ಈ ವೇಳೆ ಆರೋಪಿಗಳು ಯುವಕನನ್ನು ವಾಹನದಿಂದ ಹೊರಗೆಳೆದು, ಹತ್ತಿರದ ಮೈದಾನದಲ್ಲಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಐದು ಗಂಟೆಗಳ ಕಾಲ ಕೂಡಿ ಹಾಕಿ ಹಲ್ಲೆಗೈದು ರಾತ್ರಿ ಎಂಟು ಗಂಟೆ ವೇಳೆಗೆ ಯುವಕನನ್ನು ಪರಿಸರದ ಎಸ್ಟಿಪಿಐ ಕಚೇರಿಗೆ ಒಯ್ದಿದ್ದರು. ಅಲ್ಲಿಗೆ ಮಹಿಳೆ ರಜಿನಾ ಮತ್ತು ಆಕೆಯ ಮನೆಯವರನ್ನು ಕರೆಸಿ ವಾರ್ನಿಂಗ್ ಮಾಡಿ ರಾತ್ರಿ ವೇಳೆ ಬಿಟ್ಟು ಕಳಿಸಿದ್ದರು. ಯುವಕನ ಮನೆಯವರನ್ನೂ ಕರೆಸಿ ಎಚ್ಚರಿಕೆ ನೀಡಿದ್ದರು. ಈ ವೇಳೆ, ಎಸ್ಟಿಪಿಐ ಕಾರ್ಯಕರ್ತರು ಮಹಿಳೆಯನ್ನು ಅವಾಚ್ಯ ಪದಗಳಿಂದ ನಿಂದಿಸಿ ಅವಮಾನಿಸಿದ್ದರು ಎನ್ನಲಾಗಿದೆ.
ಇದರಿಂದ ನೊಂದ ಮಹಿಳೆ ಜೂನ್ 17ರ ಮಂಗಳವಾರ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದು ಈ ವೇಳೆ ಮೂವರು ಯುವಕರ ಹೆಸರನ್ನು ಉಲ್ಲೇಖಿಸಿ ಡೆತ್ ನೋಟ್ ಬರೆದಿಟ್ಟಿದ್ದರು. ಅದನ್ನು ಆಧರಿಸಿ ಪೊಲೀಸರು ರಫ್ತಾಸ್, ಮುಬಾಶಿರ್ ಮತ್ತು ಫೈಸಲ್ ಎಂಬವರನ್ನು ಬಂಧಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತವರೂರಿನಲ್ಲಿ ಸಂಭವಿಸಿದ ಯುವತಿಯ ಸಾವು ಎಸ್ಡಿಪಿಐ ಸಂಬಂಧಿತ ಭಯೋತ್ಪಾದಕ ಚಟುವಟಿಕೆಯ ನೇರ ಪರಿಣಾಮ ಎಂದು ಬಿಜೆಪಿಯ ಕಣ್ಣೂರು ಜಿಲ್ಲಾಧ್ಯಕ್ಷ ಕೆ.ಕೆ. ವಿನೋದ್ ಕುಮಾರ್ ಆರೋಪಿಸಿದ್ದಾರೆ.