ಮಂಗಳೂರು ಅಗಸ್ಟ್ 14: ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಮತ್ತು ಯುವಕನೊಬ್ಬ ನಗರದ ಸ್ಟೇಟ್ಬ್ಯಾಂಕ್ ಸಮೀಪದ ಸರ್ವಿಸ್ ಬಸ್ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಗಳು ತಡೆದು ಅಡ್ಡಿಪಡಿಸಿ ಜೀವಬೆದರಿಕೆ ಹಾಕಿದ್ದ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ನಗರದ ಪಾಂಡೇಶ್ವರದ ದಕ್ಷಿಣ ಠಾಣೆಯ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬಂಧಿತರನ್ನು ಗಣೇಶ, ಶ್ರೇಯಸ್, ಚಿಂಟು, ಚಂದನ್, ನಾಗರಾಜ್ ಹಾಗೂ ರಾಮಚಂದ್ರ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಬೇರೆ ಬೇರೆ ಧರ್ಮಕ್ಕೆ ಸೇರಿದ ಯುವಕ ಹಾಗೂ ವಿದ್ಯಾರ್ಥಿನಿ ಸೋಮವಾರ (ಆ 11) ಸಂಜೆ ಒಟ್ಟಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳು ತಡೆದು ನಿಲ್ಲಿಸಿದ್ದು, ವಿದ್ಯಾರ್ಥಿನಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ವಿದ್ಯಾರ್ಥಿನಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
ನಗರದ ಪದವಿ ಪೂರ್ವ ಕಾಲೇಜೊಂದರ ವಿದ್ಯಾರ್ಥಿನಿಯು ತರಗತಿಗಳು ಮುಗಿದ ಬಳಿಕ ಸರ್ವಿಸ್ ಬಸ್ ನಿಲ್ದಾಣಕ್ಕೆ ತನ್ನ ಗೆಳೆಯನ ಜೊತೆ ತೆರಳಿದ್ದಳು. ಆಕೆಯ ಗೆಳೆಯ ಮಧ್ಯಾಹ್ನ 3.30ರ ಸುಮಾರಿಗೆ ಬಸ್ನಲ್ಲಿ ಮನೆಗೆ ಹೋಗಿದ್ದ. ಆ ಗೆಳೆಯನ ಬಂಧುವೊಬ್ಬರ ಜೊತೆಗೆ ವಿದ್ಯಾರ್ಥಿನಿ ಮಾತನಾಡುತ್ತಾ ಒಟ್ಟಿಗೆ ನಡೆದುಕೊಂಡು ಹೋಗುತ್ತಿರುವಾಗ ಏಳೆಂಟು ಮಂದಿಯ ಗುಂಪು ಅವರನ್ನು ತಡೆದು ಜಗಳವಾಡಿತ್ತು‘ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.