LATEST NEWS
ಕೊರೊನಾದಿಂದ ಮೃತಪಟ್ಟ ಮಹಿಳೆ ಶವಸಂಸ್ಕಾರದಲ್ಲಾದ ಗೊಂದಲದ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ಸ್ಪಷ್ಟನೆ

ಕೊರೊನಾದಿಂದ ಮೃತಪಟ್ಟ ಮಹಿಳೆ ಶವಸಂಸ್ಕಾರದಲ್ಲಾದ ಗೊಂದಲದ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ಸ್ಪಷ್ಟನೆ
ಮಂಗಳೂರು ಎಪ್ರಿಲ್ 24: ಮಂಗಳೂರಿಗರು ತುಂಬ ಹೃದಯವಂತರು ಶವ ಸಂಸ್ಕಾರದ ವಿಚಾರದಲ್ಲಿ ಗುರುವಾರ ರಾತ್ರಿ ಒಂದು ಘಟನೆ ನಡೆಯಿತು. ಪರಿಸರದ ನಾಗರಿಕರಲ್ಲಿ ಕೊರೊನಾ ವೈರಸ್ ಬಗ್ಗೆ ಇರುವ ತಪ್ಪು ತಿಳುವಳಿಕೆಯಿಂದ ಈ ಘಟನೆ ನಡೆದಿದೆ ಬಿಟ್ಟರೆ ಜನತೆ ಉದ್ದೇಶಪೂರ್ವಕವಾಗಿ ಖಂಡಿತ ತಪ್ಪು ಮಾಡಿಲ್ಲ ಅಂತ ನನಗೆ ಗೊತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಮಹಮಾರಿ ಮೊದಲ ಬಲಿ ಪಡೆದಾಗ ಇಂತಹದ್ದೆ ಘಟನೆ ನಗರದ ಬೋಳೂರು ಪರಿಸರದಲ್ಲಿ ನಡೆದಿತ್ತು.ಈ ಸಂಧರ್ಭದಲ್ಲಿ ಈ ಕ್ಷೇತ್ರದ ಶಾಸಕನಾಗಿ ನಾನು ಮತ್ತು ಸ್ಥಳೀಯ ಪಾಲಿಕೆ ಸದಸ್ಯರಾದ ಜಗದೀಶ ಶೆಟ್ಟಿಯವರು ಸ್ಮಶಾನದ ಸುತ್ತ ಮುತ್ತಲಿರುವ ನಾಗರಿಕರಲ್ಲಿ ಇರುವ ತಪ್ಪು ಗೃಹಿಕೆ ದೂರ ಮಾಡಿ ಈ ಸೋಂಕಿತ ವ್ಯಕ್ತಿಯ ಮೃತದೇಹ ಸುಡುವುದರಿಂದ ಹತ್ತಿರದ ನಾಗರಿಕರಿಗೆ ಯಾವುದೇ ತೊಂದರೆ ಇಲ್ಲ, ಈ ವೈರಸ್ ಶವ ದಹನದಿಂದ ಹರಡುವುದಿಲ್ಲ ಎಂಬ ವೈಜ್ಞಾನಿಕ ಪ್ರಕಾರ ಧೃಢಪಟ್ಟ ಮಾಹಿತಿ ನೀಡಿ ಅವರ ಮನ ಒಲಿಸಲು ಯಶಸ್ವಿಯಾಗಿದ್ದೆವು.

ಇದೇ ರೀತಿ ಪ್ರತಿಯೊಬ್ಬರೂ ವಾಸ್ತವ ಅರಿತುಕೊಂಡು ಹೃದಯವಂತಿಕೆ, ಮಾನವೀಯತೆ, ಮನುಷ್ಯತ್ವ ತೋರುವ ಮೂಲಕ ತೀರಿ ಹೋದ ಆ ಮಹಿಳೆಯ ಮನೆಯವರಿಗೆ ಆಗುವ ದುಃಖವನ್ನು ಅರಿಯಬೇಕಾಗಿದೆ. ಈ ವೈರಸ್ ಶವ ದಹನದ ಮೂಲಕ ಪರಿಸರದಲ್ಲಿ ಹರಡುತ್ತದೆ ಎಂಬ ಮಾನಸಿಕತೆಯಿಂದ ಹೊರ ಬರಬೇಕು. ಮುಂದಿನ ದಿನಗಳಲ್ಲಿ ತಾವೆಲ್ಲರೂ ತಪ್ಪು ಮಾಹಿತಿಯಿಂದ ದೂರವಿದ್ದು ಜಿಲ್ಲಾಢಳಿತದೊಂದಿಗೆ ಸಂಪೂರ್ಣ ಕೈ ಜೋಡಿಸಬೇಕು. ಎಲ್ಲಿಯಾದರೂ ತಮಗೆ ಈ ಬಗ್ಗೆ ತಪ್ಪು ಮಾಹಿತಿ ಬಂದಾಗ ತಾವು ವಿಚಲಿತರಾಗದೇ ಸಂಯಮ ಕಾಪಾಡಿಕೊಳ್ಳಬೇಕು.
ಸ್ಮಶಾನ ಇರುವ ಪರಿಸರದಲ್ಲಿ ವೈರಸ್ ಪಸರಿಸದ ಹಾಗೆ ಜಿಲ್ಲಾಢಳಿತ ಸೆನಿಟೈಜ್ಹ್ ಮಾಡುವ ಮೂಲಕ ಮುಂಜಾಗ್ರತೆ ವಹಿಸುತ್ತದೆ. ನಾನು ಮತ್ತು ನಮ್ಮ ಎಲ್ಲ ಶಾಸಕರು ಜಿಲ್ಲಾಢಳಿತದೊಂದಿಗೆ ಸಂಪೂರ್ಣ ಕೈ ಜೋಡಿಸಿ ಈ ಜಿಲ್ಲೆ ಕೊರೊನಾ ಮುಕ್ತವಾಗಬೇಕೆಂದು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ.
ಆದ್ದರಿಂದ ದಯವಿಟ್ಟು ಸುಳ್ಳು ಸುದ್ದಿಗಳಿಗೆ ಕಿವಿಕೊಡದೆ ತಾವೆಲ್ಲರೂ ಜಿಲ್ಲಾಢಳಿತದೊಂದಿಗೆ ಸಹಕರಿಸಬೇಕು.ನಮ್ಮ ನಾಡು ಹೃದಯ ವೈಶಾಲ್ಯತೆಯ ಪ್ರತೀಕ.ಆದ್ದರಿಂದ ತಾವೆಲ್ಲರೂ ಮುಂದಿನ ದಿನಗಳಲ್ಲಿ ಹೃದಯವಂತಿಕೆ ಮೆರೆಯಬೇಕು. ಜವಾಬ್ದಾರಿಯುತ ಶಾಸಕನಾಗಿ ನಮ್ಮ ಜನರಿಗೆ ಅನ್ಯಾಯ ಮಾಡುವುದಿಲ್ಲ, ತಪ್ಪು ಮಾಹಿತಿ ಕೊಡುವುದಿಲ್ಲ.ಹಾಗಾಗಿ ತಾವೆಲ್ಲರೂ ಸಹಕರಿಸಬೇಕಾಗಿ ಮನವಿ ಮಾಡುತ್ತೇನೆ.