ಹಸೆಮನೆ ಏರಲಿರುವ ಮಂಗಳೂರಿನ ಜೋಡಿಯೊಂದು ತಮ್ಮ ಮದುವೆ ಆಮಂತ್ರಣದ ಪತ್ರಿಕೆಯನ್ನು ಅಳಿವಿನಂಚಿನಲ್ಲಿರುವ ಕೊರಗ ಭಾಷೆಯಲ್ಲಿ(Koraga language )ಪ್ರಕಟಿಸಿ ಸುದ್ದಿ ಮಾಡಿದ್ದಾರೆ.
ಮಂಗಳೂರು : ಎರಡು ಕುಟುಂಬಗಳನ್ನು ಒಟ್ಟಾಗಿಸುವ ಮದುವೆ, ವಿವಾಹ ಎಂಬ ಮೂರು ಅಕ್ಷರಗಳ ಪದಕ್ಕೆ ವಿಶೇಷ ಮಹತ್ವದೊಂದಿಗೆ ಅಷ್ಟೇ ಪಾವಿತ್ರ್ಯತೆ ಕೂಡ ಇದೆ. ಸಹಜವಾಗಿ ವಧು ವರರ ಪಾಲಿಗೆ ಇದು ವಿಶೇಷ ದಿನ. ಹಸೆಮನೆ ಏರಲಿರುವ ಮಂಗಳೂರಿನ ಜೋಡಿಯೊಂದು ತಮ್ಮ ಮದುವೆ ಆಮಂತ್ರಣದ ಪತ್ರಿಕೆಯನ್ನು ಅಳಿವಿನಂಚಿನಲ್ಲಿರುವ ಕೊರಗ ಭಾಷೆಯಲ್ಲಿ(Koraga language )ಪ್ರಕಟಿಸಿ ಸುದ್ದಿ ಮಾಡಿದ್ದಾರೆ.

ಕರಾವಳಿಯ ಈ ತುಳುನಾಡಿನಲ್ಲಿ ತುಳು ಭಾಷೆಗೆ ಅದರದ್ದೇ ಆದ ಮಹತ್ವವಿದ್ದು ಇದು ಜನರನ್ನ ಬೆಸೆಯುವ ಕೊಂಡಿಯಂತಿದೆ.
ಆದರೆ ಇದೇ ಮಾದರಿಯ ಪ್ರಾಚೀನ ಭಾಷೆಗಳಲ್ಲಿ ಒಂದಾಗಿತ್ತು ಕೊರಗ ಭಾಷೆ. ಸಮಾಜದಲ್ಲಿ ಅತೀ ಹಿಂದುಳಿದ ಆದಿವಾಸಿ ಬುಡಕಟ್ಟು ಸಮುದಾಯ ಈ ಕೊರಗ ಭಾಷೆ ವಿನಾಶದ ಅಂಚಿನಲ್ಲಿದೆ.
ಮಾತಾಡುವವವರು ಮತ್ತು ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಭಾಷೆ ಸಹಜವಾಗಿ ಅವನತಿಯತ್ತ ಸಾಗುತ್ತಿರುತ್ತಿದೆ.
ಅಂತಹ ಕೊರಗ ಸಮುದಾಯದ ಮದುವೆಯ ಆಹ್ವಾನ ಪತ್ರಿಕೆಯೊಂದು ಕೊರಗ ಭಾಷೆಯಲ್ಲಿ ಪ್ರಕಟಗೊಂಡಿದೆ.
ಲಿಪಿ ಕನ್ನಡವಾದರೂ ಸಂಪೂರ್ಣ ಮದುವೆಯ ಆಮಂತ್ರಣ ವಿವರ ಕೊರಗ ಭಾಷೆಯ ಶೈಲಿಯಲ್ಲಿದೆ.
ಮಂಗಳೂರಿನ ಕೋಡಿಬೆಟ್ಟುವಿನ ಅಕ್ಷತಾ ಹಾಗೂ ಬಾರ್ಕೂರಿನ ಅಮಿತ್ ಕುಮಾರ್ ಅವರ ವಿವಾಹ ನವೆಂಬರ್ 19ರಂದು ಮಂಗಳೂರಿನಲ್ಲಿ ನಿಗದಿಯಾಗಿದ್ದು, ಈ ಮದುವೆಯ ವಿವರಗಳು ಕೊರಗ ಭಾಷೆಯಲ್ಲಿ ಪ್ರಕಟಗೊಂಡಿದೆ.
ಕನ್ನಡಪರ ಚಿಂತಕರು ಜೊತೆಗೆ ಉಪನ್ಯಾಸಕರಾಗಿರುವ ಅರುಣ್ ಜೋಳದ ಕೂಡ್ಲಿಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದು ಅಳಿಯುತ್ತಿರುವ ಪ್ರಾದೇಶಿಕ ಭಾಷೆಯಲ್ಲಿ ಆಹ್ವಾನ ಪತ್ರಿಕೆ ನೀಡಿ ಅಪರೂಪದ ಭಾಷೆಯನ್ನು ಉಳಿಸಲು ಶ್ರಮ ವಹಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಕಾಸರಗೋಡು ಜಿಲ್ಲೆಯಲ್ಲಿ ಈ ಸಮುದಾಯ ಹರಡಿಕೊಂಡಿದೆ.
1991ರಲ್ಲಿ ನಡೆದ ಜನಗಣತಿ ಪ್ರಕಾರ ರಾಜ್ಯದಲ್ಲಿ 22,000 ಮಂದಿ ಕೊರಗ ಸಮುದಾಯದವರಿದ್ದರೆ, 2001ರಲ್ಲಿ 18,000, 2011ರಲ್ಲಿ 6358, 2021ರಲ್ಲಿ 4400ಕ್ಕೆ ಇಳಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ತಿಳಿಸಿದೆ.
ಈ ಮೂಲಕ ರಾಜ್ಯದಲ್ಲಿರುವ 51 ಬುಡಕಟ್ಟು ಸಮುದಾಯದಲ್ಲಿ ಅತೀ ವೇಗವಾಗಿ ಕ್ಷೀಣಿಸುತ್ತಿರುವ ಏಕೈಕ ಸಮುದಾಯ ಕೊರಗರದ್ದಾಗಿದೆ.
ಪರಿಶಿಷ್ಟ ಪಂಗಡಕ್ಕೆ ಸೇರಿರುವ ಕೊರಗ ಸಮುದಾಯದಲ್ಲಿ ರಕ್ತಹೀನತೆ, ಅಪೌಷ್ಠಿಕತೆ, ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಮೃತರಾಗುವವರ ಸಂಖ್ಯೆ ಹೆಚ್ಚಳ, ಶಿಕ್ಷಣದ ಕೊರತೆ ಜನಸಂಖ್ಯೆ ಕ್ಷೀಣಕ್ಕೆ ಕಾರಣವೆನ್ನಲಾಗುತ್ತಿದೆ.