LATEST NEWS
ಕುಳೂರು ಹಳೆ ಸೇತುವೆ ಬಳಿ ರಿಪೇರಿ ಕಾರ್ಯ – ಗಂಟೆಗಟ್ಟಲೇ ಟ್ರಾಫಿಕ್ ಜಾಮ್

ಮಂಗಳೂರು ಜುಲೈ 23: ಮಳೆಯ ಕಾರಣದಿಂದ ಹದಗೆಟ್ಟಿರುವ ಕುಳೂರು ಹಳೆ ಸೇತುವೆಯ ಬಳಿಯ ರಿಪೇರಿ ಕಾರ್ಯ ನಡೆಸಲಾಗುತ್ತಿದ್ದು, ಈ ಹಿನ್ನಲೆ ವಾಹನ ಸಂಚಾರದಲ್ಲಿ ಮಾರ್ಪಾಡಾಗಿರುವ ಕಾರಣ ಬೆಳಗ್ಗೆಯಿಂದಲೇ ವಾಹನ ಸವಾರರಿಗೆ ಪರದಾಟದ ಪರಿಸ್ಥಿತಿ ಎದುರಾಗಿದ್ದು, ಬೈಕಂಪಾಡಿಯಿಂದ ನಂತೂರು ವರೆಗೆ ಭಾರೀ ಟ್ರಾಫಿಕ್ ಜಾಮ್ ಗೆ ಕಾರಣವಾಗಿದೆ.
ಮಂಗಳೂರು ನಗರದ ರಾಷ್ಟ್ರೀಯ ಹೆದ್ದಾರಿ-66 ರ ಕೂಳೂರು ಹಳೇ ಸೇತುವೆಯ ಬಳಿಯ ಕೆ.ಐ.ಓ.ಸಿ.ಎಲ್ ಜಂಕ್ಷನ್ನಿಂದ ಅಯ್ಯಪ್ಪ ಗುಡಿಯವರೆಗೆ ದಿನಾಂಕಃ 22-07-2025 ಮಂಗಳವಾರ ರಾತ್ರಿ 8-00 ಗಂಟೆಯಿಂದ ದಿನಾಂಕಃ 25-07-2025 ಗುರುವಾರ ಬೆಳಿಗ್ಗೆ 8-00 ರವರೆಗೆ ರಸ್ತೆ ದುರಸ್ಥಿ ಕಾಮಗಾರಿ ನಡೆಯಲಿದೆ. ಈ ಹಿನ್ನಲೆ ಪೊಲೀಸ್ ಇಲಾಖೆ ವಾಹನ ಸಂಚಾರದಲ್ಲಿ ಮಾರ್ಪಾಟು ಮಾಡಿ ಆದೇಶ ಹೊರಡಿಸಿದೆ. ಆದರೆ ಸಂಚಾರ ಬದಲಾವಣೆ ಆದರೂ ವಾಹನಗಳು ಟ್ರಾಫಿಕ್ ಬ್ಲಾಕ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ.

ಸಂಚಾರ ಬದಲಾವಣೆಯಂತೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುವ ಕೂಳೂರು ಹೊಸ ಸೇತುವೆಯಲ್ಲಿ ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ. ಇದು ಆದರಿಂದ ಕೋಡಿಕಲ್ ಕ್ರಾಸ್ನಿಂದ ಕೆ.ಐ.ಓ.ಸಿ.ಎಲ್. ಜಂಕ್ಷನ್ವರೆಗೆ ಹಾಗೂ ಪಣಂಬೂರು ಜಂಕ್ಷನ್ನಿಂದ ಕೆ.ಐ.ಓ.ಸಿ.ಎಲ್ ಜಂಕ್ಷನ್ವರೆಗೆ ಭಾರೀ ಸಂಚಾರ ದಟ್ಟಣೆಗೆ ಕಾರಣವಾಗಿದೆ. ಇಲ್ಲಿ ವಾಹನ ದಟ್ಟಣೆಯಾದಲ್ಲಿ ಬದಲಿ ಮಾರ್ಗವನ್ನು ಬಳಸುವಂತೆ ಈಗಾಗಲೇ ಸೂಚಿಸಿದ್ದಾರೆ. ಆದರೂ ಸಂಚಾರ ಬದಲಾವಣೆ ಭಾರೀ ಟ್ರಾಫಿಕ್ ಜಾಮ್ ಗೆ ಕಾರಣವಾಗಿದೆ. ಮಂಗಳೂರಿಗೆ ಆಗಮಿಸುವವರು ಹಾಗೂ ಮಂಗಳೂರಿನಿಂದ ಹೊರಗೆ ಹೊಗುವವರು ಬೇರೆ ಮಾರ್ಗವನ್ನು ಬಳಸಬೇಕಾಗಿ ವಿನಂತಿ.
- ವಾಹನ ಚಾಲಕರು ಮತ್ತು ಸಾರ್ವಜನಿಕರು ಉಪಯೋಗಿಸಬಹುದಾದ ಇತರ ಮಾರ್ಗಗಳು
- ಉಡುಪಿ ಕಡೆಯಿಂದ ಬೆಂಗಳೂರು, ಮೈಸೂರು ಕಡೆಗೆ ಚಲಿಸುವ ಎಲ್ಲಾ ವಿಧದ ಲಘು ವಾಹನ ಹಾಗೂ ಲಾರಿಗಳು ಪಡುಬಿದ್ರೆ ಕಡೆಯಿಂದ ಕಾರ್ಕಳ ಮೂಡಬಿದ್ರೆ ಮಾರ್ಗವಾಗಿ ಸಂಚರಿಸುವುದು.
- ಉಡುಪಿ/ಮುಲ್ಕಿ ಕಡೆಯಿಂದ ಮಂಗಳೂರು ನಗರ ಕಡೆಗೆ ಸಂಚರಿಸುವ ಎಲ್ಲಾ ಲಘು ವಾಹನಗಳು ಮುಲ್ಕಿ ವಿಜಯ ಸನ್ನಿಧಿ ಬಳಿ ಎಡಕ್ಕೆ ತಿರುವು ತೆಗೆದುಕೊಂಡು ಕಿನ್ನಿಗೋಳಿ – ಕಟೀಲು – ಬಜಪೆ – ಮರವೂರು – ಕಾವೂರು ಮೂಲಕ ಮಂಗಳೂರು ಕಡೆಗೆ ಸಂಚರಿಸುವುದು.
- ಮಂಗಳೂರು ನಗರ / ಕೊಟ್ಟಾರ ಚೌಕಿ ಕಡೆಯಿಂದ ಉಡುಪಿ ಕಡೆಗೆ ಸಂಚರಿಸುವ ಎಲ್ಲಾ ಲಘು ವಾಹನಗಳು ಕಾವೂರು – ಮರವೂರು – ಬಜಪೆ – ಕಟೀಲು – ಕಿನ್ನಿಗೋಳಿ – ಮುಲ್ಕಿ ವಿಜಯ ಸನ್ನಿಧಿ ಮೂಲಕ ಉಡುಪಿ ಕಡೆಗೆ ಸಂಚರಿಸುವುದು.
- ಬಿ.ಸಿ.ರೋಡ್, ಬೆಂಗಳೂರು ಹಾಗೂ ಮೈಸೂರು ಕಡೆಯಿಂದ ಉಡುಪಿ ಕಡೆಗೆ ಸಂಚರಿಸುವ ಲಾರಿ ಹಾಗೂ ಲಘು ವಾಹನಗಳು ಬೀಕರ್ನಕಟ್ಟೆ- ಕುಲಶೇಖರ – ವಾಮಂಜೂರು – ಕೈಕಂಬ – ಬಜಪೆ – ಕಟೀಲು – ಕಿನ್ನಿಗೋಳಿ – ಮುಲ್ಕಿ ವಿಜಯ ಸನ್ನಿಧಿ ಮೂಲಕ ಉಡುಪಿ ಕಡೆಗೆ ಸಂಚರಿಸುವುದು.
- MCF, ONGC, HPCL, BPCL, IOCL, Total Gas, BASF, ರಫ್ತಾರ್, ಏಜಿಸ್ ಇತ್ಯಾದಿ ಕಂಪೆನಿಗಳಿಗೆ ಬರುವ ಹಾಗೂ ಕಂಪೆನಿಯಿಂದ ಹೊರಡುವ ಎಲ್ಲಾ ರೀತಿಯ ಗ್ಯಾಸ್ ಟ್ಯಾಂಕರ್, ಡಿಸೇಲ್/ಪೆಟ್ರೋಲ್ ಟ್ಯಾಂಕರ್ ಹಾಗೂ ಇತರ ಘನ ವಾಹನಗಳು ಕೂಳೂರು ಹೊಸ ಸೇತುವೆಯಲ್ಲಿ ಸಂಚಾರ ದಟ್ಟಣೆಯ ಸಮಯವನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಸಂಚರಿಸಲು ಕೋರಿದೆ.