DAKSHINA KANNADA
ದಕ್ಷಿಣಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲು 36 ಜನರ ಲಿಸ್ಟ್ ತಯಾರು…!!

ಪುತ್ತೂರು ಜೂನ್ 02: ದಕ್ಷಿಣಕನ್ನಡ ಜಿಲ್ಲೆಗೆ ನೂತನ ಅಧಿಕಾರ ಸ್ವೀಕರಿಸಿರುವ ಎಸ್ಪಿ ಹಾಗೂ ಮಂಗಳೂರು ಪೊಲೀಸ್ ಕಮಿಷನರ್ ಇದೀಗ ಜಿಲ್ಲೆಯಲ್ಲಿರುವ ಅಪರಾಧ ಕೃತ್ಯ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸೇರಿಕೊಂಡಿರುವ ವ್ಯಕ್ತಿಗಳ ಲಿಸ್ಟ್ ತಯಾರಿಸಿ ಅವರ ಗಡಿಪಾರು ಮಾಡಲು ಮುಂದಿನ ಕ್ರಮಕೈಗೊಂಡಿದ್ದಾರೆ. ಸದ್ಯ ಪೊಲೀಸರು ಬಿಡುಗಡೆ ಮಾಡಿರುವ ಲಿಸ್ಟ್ ಇಡೀ ಜಿಲ್ಲೆಯಲ್ಲಿ ಸುದ್ದಿಗೆ ಗ್ರಾಸವಾಗಿದೆ.
ಹೊಸದಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಈಗಾಗಲೇ ಇಬ್ಬರು ಐಪಿಎಸ್ ಅಧಿಕಾರಿಗಳು, ಜಿಲ್ಲೆಯ ಕಾನೂನು ಸುವ್ಯವಸ್ಥೆ ಸರಿದಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ 36 ಮಂದಿ ಲಿಸ್ಟ್ ನ್ನು ಪೋಲಿಸರು ತಯಾರು ಮಾಡಿ ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಒಟ್ಟು 36 ಮಂದಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಪೊಲೀಸ್ ಲಿಸ್ಟ್ ರೆಡಿಯಾಗಿದೆ. ರೌಡಿ ಹಿನ್ನೆಲೆಯಿರುವ ವ್ಯಕ್ತಿಗಳು, ಸೌಜನ್ಯಾ ಪರ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ, ಪ್ರಬಲ ಹಿಂದುತ್ವ ಹೋರಾಟಗಾರ ಅರುಣ್ ಪುತ್ತಿಲ ಸೇರಿದಂತೆ ಬಂಟ್ವಾಳ, ಪುತ್ತೂರು ವ್ಯಾಪ್ತಿಯ 36 ಮಂದಿಯನ್ನು ಜಿಲ್ಲೆಯಿಂದ ಗಡೀಪಾರು ಮಾಡಲು ಕ್ರಮ ಕೈಗೊಂಡಿದ್ದಾರೆ.

ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಬೆಳ್ತಂಗಡಿ, ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ಸುಳ್ಯ ಬೆಳ್ಳಾರೆ ವಿಟ್ಲ ಠಾಣೆ ವ್ಯಾಪ್ತಿಯ ಹಳೆ ಪ್ರಕರಣಗಳಲ್ಲಿರುವ ಹಿಂದು ಮತ್ತು ಮುಸ್ಲಿಂ ಸಂಘಟನೆ ಕಾರ್ಯಕರ್ತರು, ಬಿಜೆಪಿಯಲ್ಲಿ ಗುರುತಿಸಿಕೊಂಡವರ ಪಟ್ಟಿ ರೆಡಿ ಮಾಡಿದ್ದು ಗಡೀಪಾರು ಮಾಡಲು ಕಾನೂನು ಪ್ರಕ್ರಿಯೆ ಆರಂಭಿಸಿದೆ. ಈ ಪಟ್ಟಿಯಲ್ಲಿ ಒಟ್ಟು 36 ಮಂದಿ ಇದ್ದರೆ, ಈ ಪೈಕಿ 15 ಮುಸ್ಲಿಮರಿದ್ದಾರೆ.
ವಿಶ್ವ ಹಿಂದೂ ಪರಿಷತ್ ಮುಖಂಡ ಭರತ್ ಕುಮ್ಡೇಲು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಹಲವರ ಹೆಸರು ಈ ಪಟ್ಟಿಯಲ್ಲಿದೆ. ಗಡಿಪಾರಿಗೆ ಪೋಲೀಸರು ಸಿದ್ಧಪಡಿಸಿದ ಪಟ್ಟಿಯನ್ನು ಪೋಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಸಹಾಯಕ ಆಯುಕ್ತರ ಮೂಲಕ ಈಗಾಗಲೇ ಪಟ್ಟಿಯಲ್ಲಿರುವವರಿಗೆ ನೋಟೀಸ್ ನೀಡಲಾಗಿದೆ.