DAKSHINA KANNADA
ಕೆವಿಜಿ ಪಾಲಿಟೆಕ್ನಿಟ್ ಪ್ರೊ.ಎ.ಎಸ್.ರಾಮಕೃಷ್ಣ ಕೊಲೆ ಪ್ರಕರಣ – ಸುಪ್ರೀಂ ಕೋರ್ಟ್ ನಲ್ಲಿ ಎಲ್ಲಾ ಆರೋಪಿಗಳು ಖುಲಾಸೆ

ಸುಳ್ಯ ಮೇ 10; ಕೆವಿಜಿ ಪಾಲಿಟೆಕ್ನಿಟ್ ಪ್ರಾಂಶುಪಾಲರಾಗಿದ್ದ ಪ್ರೊ.ಎ.ಎಸ್.ರಾಮಕೃಷ್ಣ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಆರೋಪಿಗಳಿಗೆ ಇದೀಗ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ಕೊಟ್ಟಿದ್ದು, ಎಲ್ಲಾ ಆರೋಪಿಗಳನ್ನೂ ಪ್ರಕರಣದಿಂದ ಖುಲಾಸೆಗೊಳಿಸಿ ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿರುವುದಾಗಿ ತಿಳಿದುಬಂದಿದೆ.
2011 ರಲ್ಲಿ ಪ್ರೊ.ರಾಮಕೃಷ್ಣರ ಹತ್ಯೆ ನಡೆದಿತ್ತು. ಸ್ಥಳೀಯ ಜಿಲ್ಲಾ ಸೆಶೆನ್ಸ್ ನ್ಯಾಯಾಲಯದಲ್ಲಿ ಈ ವಿಚಾರಣೆ ನಡೆದು ಈ ಪ್ರಕರಣ ಸರಿಯಾದ ಸಾಕ್ಷಾಧರಗಳಿಗೆ ಬಿದ್ದು ಹೋಗಿತ್ತು, ಬಳಿಕ ಈ ತೀರ್ಪಿನ ವಿರುದ್ಧ ಸರಕಾರ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿ, ವಿಚಾರಣೆ ನಡೆದು 2023 ರಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಇದರ ವಿರುದ್ಧ ಶಿಕ್ಷೆಗೊಳಗಾದವರು ಸುಪ್ರೀಂಕೋರ್ಟಿನ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟು ಹೈಕೋರ್ಟು ವಿಧಿಸಿದ ಶಿಕ್ಷೆಯನ್ನು ಅಮಾನತಿನಲ್ಲಿರಿಸಿ, ಆರೋಪಿಗಳಿಗೆ ಜಾಮೀನು ನೀಡಿತ್ತು. ಬಳಿಕ ವಿಚಾರಣೆ ನಡೆದು ಶುಕ್ರವಾರ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಪ್ರಕರಣದ ಆರೋಪಿಗಳಾದ ಡಾ.ರೇಣುಕಾಪ್ರಸಾದ್, ಮನೋಜ್ ರೈ, ನಾಗೇಶ್ ಎಚ್.ಆರ್., ವಾಮನ ಪೂಜಾರಿ, ಶರಣ್ ಮಂಗಳೂರು, ಭವಾನಿಶಂಕರ ಎಲ್ಲರನ್ನೂ ಸುಪ್ರೀಂಕೋರ್ಟ್ ದೋಷಮುಕ್ತಗೊಳಿಸಿ ಪ್ರಕರಣದಿಂದ ಖುಲಾಸೆಗೊಳಿಸಿದೆ. ಸುಪ್ರೀಂಕೋರ್ಟಿನಲ್ಲಿ ಖ್ಯಾತ ವಕೀಲರುಗಳಾದ ಸಿದ್ಧಾರ್ಥ್ ಲೂತ್ರಾ ಹಾಗೂ ಗಿರೀಶ್ ಅನಂತಮೂರ್ತಿ ಡಾ.ರೇಣುಕಾಪ್ರಸಾದರ ಪರವಾಗಿ ವಾದಿಸಿದ್ದರು.
