Connect with us

DAKSHINA KANNADA

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿಯಲ್ಲಿ ಮಲೆ ಕುಡಿಯರ ಸೇರ್ಪಡೆಯಾಗಬೇಕು .. ರಾಜ್ಯಾಧ್ಯಕ್ಷ ಶ್ರೀಧರ ಗೌಡ ಈದು

ಪುತ್ತೂರು ಮಾರ್ಚ್ 23: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಪ್ರಸಿದ್ಧ ಕ್ಷೇತ್ರ ವಾಗಿ ನಾಡಿನಲ್ಲೆಡೆ ಚಿರಪರಿಚಿತವಾಗಿದೆ. ನಾಗದೇವರ ಮೂಲ ಆರಾಧನಾ ಸ್ಥಳವಾಗಿದ್ದು ಇಲ್ಲಿನ ಮೂಲ ನಿವಾಸಿಗಳಾಗಿರುವ ಮಲೆಕುಡಿಯ ಸಮುದಾಯಕ್ಕೆ ಸೇರಿರುವ ದೇವಸ್ಥಾನವೆಂಬ ಹಿನ್ನೆಲೆಯನ್ನು ಹೊಂದಿದೆ ನಮ್ಮ ಮಲೆಕುಡಿ ಯ ವಂಶಸ್ಥರಾದ ಕುಕ್ಕೆ ಮತ್ತು ಲಿಂಗ ಅನ್ನುವ ಇಬ್ಬರು ದೈವೀ ಪುರುಷರು ಶ್ರೀ ಕ್ಷೇತ್ರದ ಸ್ಥಾಪನೆಗೆ ಕಾರಣಕರ್ತರಾಗಿದ್ದಾರೆ.


ಕಾಲ ನಂತರದಲ್ಲಿ ದೇವಸ್ಥಾನವು ಸರಕಾರದ ಆಡಳಿತ ಕೊಳಪಟ್ಟು ಉತ್ತಮ ರೀತಿಯಲ್ಲಿ ನಿರ್ವಹಣೆಗೊಂಡು ಮುನ್ನಡೆಯುತ್ತಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೂ ಮಲೆಕುಡಿಯ ಸಮುದಾಯಕ್ಕೂ ಅವಿನಾಭಾವ ನಂಟು ಇರುವುದನ್ನು ನಾವು ಕಾಣಬಹುದು. ಪೂಜಾ ಕೈಂಕರಗಳು ನೆರವೇರುವಲ್ಲಿ ಮಲೆಕುಡಿಯರ ಪಾತ್ರ ಮಹತ್ವದ್ದಾಗಿದೆ. ಶ್ರೀ ಕ್ಷೇತ್ರದ ದೇವರ ಪರಿಚಾರಕ ವೃತ್ತಿಯಿಂದ (ಬುಟ್ಟಿಚಾಕರಿ) ಉತ್ಸವ ಕಾರ್ಯಗಳು, ಸಾಂಗೋಪವಾಗಿ ನೆರವೇರಲು ಮಲೆಕುಡಿಯರು ನಾನಾ ರೀತಿಯಲ್ಲಿ ಶ್ರಮಪಡುತ್ತಾರೆ.

ದೈವದ ನೇಮೋತ್ಸವ ಕಾರ್ಯಕ್ರಮದಲ್ಲಿ ಮಲೆಕುಡಿಯರ ಪಾತ್ರ ಪ್ರಮುಖವಾಗಿದೆ. ಅಷ್ಟಮಿಯಂದು ಶ್ರೀ ದೇವಳದಲ್ಲಿ ನಡೆಯುವ ಪಲ್ಲಕ್ಕಿ ಉತ್ಸವವನ್ನು ನೆರವೇರಿಸುವುದೇ ನಮ್ಮ ಸಮುದಾಯದವರು. ಮುಖ್ಯವಾಗಿ ಶ್ರೀ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಸಂದರ್ಭದಲ್ಲಿ ದೇವರ ಬ್ರಹ್ಮ ರಥವನ್ನು ಕಟ್ಟುವ ಕಾರ್ಯವನ್ನು ಮಲೆ ಕುಡಿಯರೆ ನಿರ್ವಹಿಸುತ್ತಿದ್ದು ಈ ಕುರಿತಾದ ಕಟ್ಟು ಕಟ್ಟಲೆಗಳನ್ನು ಅನೂ ಚಾ ನವಾಗಿ ನಮ್ಮ ಸಮುದಾಯದವರು ಪಾಲಿಸಿಕೊಂಡು ಬಂದಿರುತ್ತಾರೆ. ಧಾರ್ಮಿಕ ವಿಧಿ ವಿಧಾನವಾದ ಅಷ್ಟಮಂಗಳದಲ್ಲಿಯೂ ಈ ಸಂಬಂಧವಾಗಿ ಅನೇಕ ವಿಚಾರಗಳು ಪ್ರಸ್ತಾಪವಾಗಿದ್ದು ಮೂಲ ನಿವಾಸಿಗಳಾದ ಮಲೆಕುಡಿಯರು ಮತ್ತು ದೇವಸ್ಥಾನಕ್ಕೆ ಪರಂಪರಾಗತವಾಗಿ ಇರುವ ಭಾಂದವ್ಯವನ್ನು ತಿಳಿಸುತ್ತದೆ. ಶ್ರೀದೇವರ ಸೇವೆ ಅಲ್ಲದೆ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಮಲೆಕುಡಿಯರು ದುಡಿಯುತ್ತಿದ್ದಾರೆ. ಈ ಎಲ್ಲಾ ಕಾರಣದ ಹಿನ್ನೆಲೆಯಿಂದಾಗಿ ಇದುವರೆಗಿನ ಕಾರ್ಯ ನಿರ್ವಹಿಸುತ್ತಿದ್ದ ಸಮಿತಿಗಳಲ್ಲಿ ಮಲೆ ಕುಡಿಯರಿಗೆ ಕನಿಷ್ಠ ಒಂದು ಸದಸ್ಯತ್ವ ಸ್ಥಾನವನ್ನು ಕಾಯ್ದಿರಿಸುವುದರ ಜೊತೆಗೆ ಮೀಸಲಾಗಿಡ ಲಾಗಿತ್ತು ಎಂಬುದು ಗಮನಿಸಬೇಕಾದ ಅಂಶ. ಆದರೆ ಈ ಸಾಲಿನ ಹೊಸ ಸಮಿತಿಯಲ್ಲಿ ಸಮುದಾಯದ ಮಂದಿಯ ಹೆಸರನ್ನು ಕೈ ಬಿಡಲಾಗಿದೆ ಎಂಬ ಮಾಹಿತಿ ಇದ್ದು. ಸರ್ಕಾರ ಮತ್ತೊಮ್ಮೆ ಮರು ಪರಿಶೀಲನೆ ಮಾಡಿ ಮಲೆಕುಡಿಯರ ಹೆಸರನ್ನು ಸೇರ್ಪಡೆ ಮಾಡಿ ಪಟ್ಟಿ ಅಂತಿಮಗೊಳಿಸಿ ವ್ಯವಸ್ಥಾಪನ ಸಮಿತಿಯನ್ನು ಘೋಷಣೆ ಮಾಡಬೇಕು.

 

ಸರಕಾರ ಪದೇ ಪದೇ ಅರಣ್ಯಾಧಾರಿತ ಬುಡಕಟ್ಟು ಜನರ, ಆದಿವಾಸಿಗಳ ಪರ ಎಂಬುದಾಗಿ ಹೇಳುತ್ತಿರುವಾಗ ಈ ವಿಚಾರದಲ್ಲಿ ಕೂಡ ಅರಣ್ಯ ಮೂಲ ಬುಡಕಟ್ಟು ಜನಾಂಗವಾದ ಮಲೆಕುಡಿಯರಿಗೆ ವ್ಯವಸ್ಥಾಪನ ಸಮಿತಿಯಲ್ಲಿ ಒಂದು ಸ್ಥಾನವನ್ನು ಕೊಟ್ಟು ನ್ಯಾಯವನ್ನು ಒದಗಿಸಿ ಕೊಡಬೇಕಾಗಿದೆ. ಪ್ರಮುಖವಾಗಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮಲೆಕುಡಿಯರಿಲ್ಲದ ಸಮಿತಿಯು ಪೂರ್ಣ ಪ್ರಮಾಣದ ಸಮಿತಿಯಾಗಿರಲು ಸಾಧ್ಯವಿಲ್ಲ. ಹಾಗಾಗಿ ಕಾನೂನು ಹೋರಾಟಕ್ಕೆ ಅವಕಾಶ ಮಾಡಿಕೊಡದೆ ದೊಡ್ಡ ಮಟ್ಟದಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಮ್ಮ ಜನಾಂಗದವರಿಗೆ ಅವಕಾಶ ಮಾಡಿಕೊಟ್ಟು ಗೊಂದಲಕ್ಕೆ ತೆರೆ ಎಳೆಯಬೇಕಾಗಿ ಸಮಸ್ತ ಮಲೆ ಕುಡಿಯರ ಪರವಾಗಿ ಸರಕಾರವನ್ನು ಒತ್ತಾಯಿಸುತ್ತೇನೆ ಎಂದು ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಈದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *