LATEST NEWS
ಕೋಟ ಶ್ರೀನಿವಾಸ ಪೂಜಾರಿ ಮೇಲೆ ಹಗರಣದ ಆರೋಪ – ವಾರದೊಳಗೆ ನಿಮ್ಮ ಹೇಳಿಕೆ ವಾಪಸ್ ಪಡೆಯಬೇಕು- ಸಿಎಂ ವಿರುದ್ಧ ಕೋಟ ಗರಂ
ಉಡುಪಿ ಜುಲೈ 20: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮೇಲೆ ಮಾಡಿರುವ ಆರೋಪವನ್ನು ವಾಪಾಸ್ ಪಡೆಯದಿದ್ದರೆ ವಿಧಾನಸೌಧದ ಎದುರು ಧರಣಿ ಕುಳಿತುಕೊಳ್ಳುತ್ತೇನೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆ ಅಧಿವೇಶನದಲ್ಲಿ ಮಾತನಾಡುವ ವೇಳೆ ಭೋವಿ ಅಭಿವೃದ್ಧಿ ನಿಗಮ ಹಾಗೂ ಗಂಗಾ ಕಲ್ಯಾಣ ಯೋಜನೆಯಲ್ಲಿ ಹಗರಣ ಆಗಿದೆ ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಸಿಐಡಿ ಅವರ ಕೈಯಲ್ಲಿಯೇ ಇದೆ. ಮುಖ್ಯಮಂತ್ರಿ ಆಗಿ ಒಂದು ವರ್ಷ ಕೂಡ ಕಳೆಯಿತು. ನಾನು ತಪ್ಪು ಮಾಡಿದರೆ ಜೈಲು ಶಿಕ್ಷೆ ಸೇರಿ ಏನನ್ನು ಕೊಡುವ ಅಧಿಕಾರ ಅವರಿಗೆ ಇತ್ತು.
ಕೋಟ ಶ್ರೀನಿವಾಸ ಪೂಜಾರಿ ಕೊಳವೆಬಾವಿ ಹಗರಣ ಮಾಡಿದ್ದಾನೆ ಎಂದಿದ್ದೀರಿ. ನಿಮಗೆ ನಾನು ಅಧಿಕೃತ ಪತ್ರ ಬರೆಯುತ್ತೇನೆ. ನಾನು ಮಂತ್ರಿಯಾಗಿದ್ದಾಗ ಟೆಂಡರಿನಲ್ಲಿ ಅಕ್ರಮವಾಗಿದೆ ಎಂಬ ದೂರು ಕೇಳಿ ಬಂತು. ಕಡತ ತರಿಸಿಕೊಂಡು ನಾನು ತಕ್ಷಣ ಸಿಐಡಿ ತನಿಖೆಗೆ ಆದೇಶಿಸಿದೆ. ರಾಜ್ಯದ ಇತಿಹಾಸದಲ್ಲಿ ಟೆಂಡರ್ ಬಿಟ್ಟರೆ ಬೇರೆ ವ್ಯವಸ್ಥೆ ಇರಲಿಲ್ಲ. ಪ್ರಥಮ ಬಾರಿಗೆ ಆದೇಶ ದೊರೆತ ರೈತರಿಗೆ ನೇರ ಕೊಳವೆಬಾವಿ ಖರೀದಿಗೆ ಅವಕಾಶ ಕಲ್ಪಿಸಿದೆ. ಖಾತೆಗೆ ನೇರ ಜಮಾ ಮಾಡುವ ವ್ಯವಸ್ಥೆ ಜಾರಿಗೆ ತಂದಿದ್ದೆ. ರೈತನಿಗೆ ಕೊಳವೆಬಾವಿ ಮಂಜೂರಾದರೆ ಯಾವ ಏಜೆನ್ಸಿ ಮೂಲಕ ತರಿಸಿಕೊಳ್ಳಬಹುದು ಈ ವ್ಯವಸ್ಥೆ ಮಾಡಿದ್ದೆ. ನಾನು ಮಾಡಿದ ವ್ಯವಸ್ಥೆ ಇವತ್ತಿಗೂ ನಡೆಯುತ್ತಿದೆ ಎಂದು ತಿಳಿಸಿದರು.
ವಾಲ್ಮೀಕಿ ಹಗರಣದ ಆರೋಪ ಅವರ ಮೇಲೆ ಬಂದಾಗ ಬೇರೆಯವರ ತಲೆ ಮೇಲೆ ಹಾಕಲು ಹೀಗೆ ಹೇಳುತ್ತಿದ್ದಾರೆ ಎಂದರು. ಆದುದರಿಂದ ನನ್ನ ಹೆಸರು ಉಲ್ಲೇಖಿಸಿರುವುದನ್ನು ಕೂಡಲೇ ವಾಪಸ್ ಪಡೆಯಬೇಕು. ಇಲ್ಲವಾದರೆ ತಕ್ಷಣ ಈ ಪ್ರಕರಣ ವನ್ನು ಸಿಬಿಐಗೆ ವಹಿಸಬೇಕು. ನಾನು ಒಂದು ರೂಪಾಯಿ ಅವ್ಯವಹಾರ ಮಾಡಿದ್ದರೆ ಸಿಬಿಐ ತನಿಖೆ ಮಾಡಿಸಿ, ವಾರದೊಳಗೆ ಮುಖ್ಯಮಂತ್ರಿಗಳು ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ನಾನು ಧರಣಿ ಕುಳಿತು ಸಿಬಿಐ ತನಿಖೆಗೆ ಒತ್ತಾಯಿ ಸುತ್ತೇನೆ. ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುವ ಬಗ್ಗೆಯೂ ಯೋಚನೆ ಮಾಡುತ್ತೇನೆ ಎಂದು ಹೇಳಿದರು.
You must be logged in to post a comment Login