ಎರುಮಲೈ, ಜನವರಿ 13: ಕರ್ನಾಟಕದಿಂದ ಶಬರಿಮಲೆಗೆ ತೆರಳುತ್ತಿರುವ ವಾಹನಗಳಿಗೆ ಇದೀಗ ಕೇರಳ ಪೊಲೀಸರು ಶಬರಿಮಲೆಗಿಂತ 100 ಕಿಲೋ ಮೀಟರ್ ದೂರದಲ್ಲೇ ತಡೆದು ನಿಲ್ಲಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಕರ್ನಾಟಕದ ಅಯ್ಯಪ್ಪ ಮಾಲಾಧಾರಿಗಳು ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದ್ದಾರೆ.

ಕರ್ನಾಟಕದ ಅಯ್ಯಪ್ಪ ಭಕ್ತ ವಾಹನಗಳನ್ನು ಶಬರಿಮಲೆಯಿಂದ 60 ಕಿಮೀ ದೂರದಲ್ಲೇ ಅಂದರೆ ಎರುಮಲೈಯಲ್ಲಿ ಕೇರಳ ಪೊಲಿಸರು ತಡೆಯುತ್ತಿದ್ದು, ವಾಹನಗಳನ್ನು ಇಲ್ಲೇ ನಿಲ್ಲಿಸಿ ಶಬರಿಮಲೆಗೆ ಕೇರಳ ಬಸ್ನಲ್ಲೇ ತೆರಳುವಂತೆ ತಾಕೀತು ಮಾಡಿದ್ದಾರೆ. ಚಿಕ್ಕಮಗಳೂರು, ಬಾಗಲಕೋಟೆ, ಶಿವಮೊಗ್ಗ, ಸೇರಿದಂತೆ ವಿವಿಧ ಜಿಲ್ಲೆಯಿಂದ ತೆರಳಿದ ಅಯ್ಯಪ್ಪ ಮಾಲಾಧಾರಿಗಳು ಕಂಗಾಲಾಗಿದ್ದು, ಟಿಪಿ ಕಟ್ಟಿ ಬಂದರೂ ಸಹ ನಮ್ಮ ವಾಹನಗಳನ್ನು ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಕೇರಳ ಪೊಲೀಸರ ವಿರುದ್ಧ ಅಯ್ಯಪ್ಪ ಭಕ್ತರು ರಸ್ತೆಯಲ್ಲೇ ಪ್ರತಿಭಟನೆ ನಡೆಸಿದ್ದು, ಕೇರಳ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಕರ್ನಾಟಕದ ವಾಹನಗಳಿಗೆ ಸೂಕ್ತ ಸ್ಪಂದನೆ ನೀಡದ ಕೇರಳ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬಾಡಿಗೆ ವಾಹನ ಮಾಡಿಕೊಂಡು ಹೋಗಿರುವ ತರೀಕೆರೆಯ ಭಕ್ತರು ಈಗ ಅತ್ತ ಹೋಗಲಾಗದೆ, ಇತ್ತ ಮರಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ತುಂಬಾ ಜನ ಇದ್ದಾರೆ. ಇನ್ನೂ 2 ದಿನ ನಿಮ್ಮನ್ನ ಕಳಿಸಲ್ಲ ಎಂದು ಜನರಿಗೆ ಸಬೂಬು ನೀಡುತ್ತಿದ್ದಾರಂತೆ. ಕರ್ನಾಟಕ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸುವಂತೆ ಅಯ್ಯಪ್ಪ ಮಾಲಾಧಾರಿಗಳು ಆಗ್ರಹಿಸಿದ್ದಾರೆ.