ಕಾರವಾರ :ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನ ಆ್ಯಕ್ಸಿಲ್ ಏಕಾಏಕಿ ತುಂಡಾಗಿ ಬಸ್ ನೆಲಕ್ಕೊರಗಿದ ಪರಿಣಾಮ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಹಬ್ಬುವಾಡ ರಸ್ತೆಯಲ್ಲಿ ಮಂಗಳವಾರ ನಡೆದಿದೆ.

ಸುಮಾರು ಐವತ್ತಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದ ಕಾರವಾರ ನಗರದಿಂದ ಕೆರವಡಿ ಗ್ರಾಮಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನ ಹಿಂಬಂದಿಯ ಆ್ಯಕ್ಸಿಲ್ ಪ್ಲೇಟ್ ತುಂಡಾಗಿ, ರಸ್ತೆಯಲ್ಲಿಯೇ ಬಸ್ ಪಲ್ಟಿಯಾಗುವ ಹಂತಕ್ಕೆ ತಲುಪಿತ್ತು. ಆದರೆ ಘಟನೆ ನೋಡಿ ಧಾವಿಸಿ ಬಂದಸಾರ್ವಜನಿಕರು ಉರುಳುತ್ತಿದ್ದ ಬಸ್ಸನ್ನು ತಡೆದು ನಿಲ್ಲಿಸಿ ಸಂಭವನೀಯ ಅವಘಡಗಳನ್ನು ತಪ್ಪಿಸಿದ್ದಾರೆ. ಬಸ್ಸಿನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು, ಕೆಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಭಾಗದಲ್ಲಿ ದುರಸ್ಥಿಯೇ ಕಾಣದ ಬಸ್ ಗಳನ್ನು ಅಧಿಕಾರಿಗಳೂ ಓಡಿಸುತ್ತಿದ್ದು ಜನ ಜೀವ ಕೈಯಲ್ಲೇ ಹಿಡಿದು ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯಿಂದಾಗಿ ಕಾರವಾರ- ಕೈಗಾ ರಸ್ತೆ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತ್ತು.