KARNATAKA
ಕಾಂತಾರಕ್ಕೆ ಸಂಕಷ್ಟಗಳ ಸರಮಾಲೆ – ರಾಕೇಶ್ ಪೂಜಾರಿ ಬಳಿಕ ಮತ್ತೊಬ್ಬ ಕಲಾವಿದ ಹೃದಯಾಘಾತದಿಂದ ಸಾವು

ತೀರ್ಥಹಳ್ಳಿ ಜೂನ್ 12: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ಕಾಂತಾರ ಚಾಪ್ಟರ್ 1 ಸಿನೆಮಾಕ್ಕೆ ವಿಘ್ನಗಳೇ ಹೆಚ್ಚಾಗಿವೆ. ಚಿತ್ರ ಹಲವು ವಿವಾದಗಳಿಂದಾಗಿ ಸುದ್ದಿಯಾಗುತ್ತಿದೆ. ಈ ಚಿತ್ರದಲ್ಲಿ ನಟಿಸಿದ ಇಬ್ಬರು ಕಲಾವಿದರು ಈ ಹಿಂದೆ ಮೃತಪಟ್ಟಿದ್ದರು. ಇದೀಗ ಮತ್ತೊಬ್ಬ ಕಲಾವಿದ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಕಾಂತಾರ ಚಾಪ್ಟರ್ 1 ಸಿನಿಮಾ ಕಲಾವಿದ ಹೃದಯಾಘಾತದಿಂದ ತೀರ್ಥಹಳ್ಳಿಯ ಆಗುಂಬೆ ಹೋಂಸ್ಟೇಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದ್ದು ಅವರನ್ನು ಕೇರಳದ ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದ ವಿಜು ವಿ ಕೆ ಎಂದು ಗುರುತಿಸಲಾಗಿದೆ. ಅವರು ಕಾಂತಾರ ಚಾಪ್ಟರ್ 1 ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲು ಆಗುಂಬೆ ಹೋಂ ಸ್ಟೇಯಲ್ಲಿ ಕಳೆದ ರಾತ್ರಿ ತಂಗಿದ್ದ ವೇಳೆ ದುರ್ಘಟನೆ ನಡೆದಿದೆ.

ನಿನ್ನೆ ರಾತ್ರಿ ಎದೆನೋವು ಕಾಣಿಸಿಕೊಂಡ ಕೂಡಲೇ ಅವರನ್ನು ತೀರ್ಥಹಳ್ಳಿಯ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಾಂತಾರ ಚಾಪ್ಟರ್ 1 ಸಿನಿಮಾ ಚಿತ್ರೀಕರಣ ಆರಂಭವಾದ ನಂತರ ಇದು ಮೂರನೇ ಸಾವಾಗಿದೆ.
ಕಾಮಿಡಿ ಕಿಲಾಡಿಗಳು ಸೀಸನ್ 3′ ವಿನ್ನರ್ ಆಗಿದ್ದ ರಾಕೇಶ್ ಪೂಜಾರಿ ‘ಕಾಂತಾರ: ಚಾಪ್ಟರ್ 1′ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ಮೇ 12 ರಂದು ಮಧ್ಯರಾತ್ರಿ ಹೃದಯಾಘಾತದಿಂದ ರಾಕೇಶ್ ಪೂಜಾರಿ ವಿಧಿವಶರಾದರು. ಚೆನ್ನಾಗಿಯೇ ಓಡಾಡಿಕೊಂಡು, ನಗಾಡಿಕೊಂಡು ಇದ್ದ ರಾಕೇಶ್ ಪೂಜಾರಿ ಹಠಾತ್ ಸಾವನ್ನಪ್ಪಿದರು. ಅದೂ ಜಸ್ಟ್ 34ನೇ ವಯಸ್ಸಿನಲ್ಲಿ ಅನ್ನೋದು ದುರಂತ ಮತ್ತು ದುರಾದೃಷ್ಟಕರ.
ಈ ಹಿಂದೆ ‘ಕಾಂತಾರ’ ಸಿನಿಮಾ ತಂಡ ಸಾಗುತ್ತಿದ್ದ ಬಸ್ ಕೊಲ್ಲೂರಿನಲ್ಲಿ ಅಪಘಾತಕ್ಕೀಡಾಗಿತ್ತು. ಬಸ್ನಲ್ಲಿದ್ದ ಜ್ಯೂನಿಯರ್ ಆರ್ಟಿಸ್ಟ್ಗಳು ಗಾಯಗೊಂಡಿದ್ದರು. ಕೆಲ ತಿಂಗಳ ಹಿಂದೆ ‘ಕಾಂತಾರ’ ಸಿನಿಮಾದ ಜ್ಯೂನಿಯರ್ ಆರ್ಟಿಸ್ಟ್ ಕಪಿಲ್ ಕೊಲ್ಲೂರು ಬಳಿಯ ಸೌಪರ್ಣಿಕಾ ನದಿಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದರು. ಕಾಂತಾರ ಚಿತ್ರದಲ್ಲಿ ನಟಿಸುತ್ತಿದ್ದ ರಾಕೇಶ್ ಪೂಜಾರಿ ಹೃದಯಾಘಾತದಿಂದ ಹಠಾತ್ ಸಾವನ್ನಪ್ಪಿದರು. ಕಾಂತಾರ’ ಚಿತ್ರದಲ್ಲಿ ನಟಿಸಲು ಬಂದಿದ್ದ ಮಿಮಿಕ್ರಿ ಕಲಾವಿದ ನಿಜು ವಿ ಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇದೆಲ್ಲದರ ನಡುವೆ ರಿಷಬ್ ಶೆಟ್ಟಿ ದೈವದ ಮೊರೆ ಹೋಗಿದ್ದರು. ಈ ವೇಳೆ ದೈವವೂ ನಿನಗೆ ದುಶ್ಮನ್ಗಳಿದ್ದಾರೆ, ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಸಂಚು ನಡೆದಿದೆ. ಗಂಡಾಂತರ ಬಂದಿದೆಯೆಂದು ಬಂದಿದ್ದೀಯಾ, ನಂಬಿದ ದೈವ ಕೈಬಿಡಲ್ಲ ಎಂದಿತ್ತು.