ಕಡಬ, ಮೇ 02: ಮಾಂಸಕ್ಕಾಗಿ ದನ ವಧೆ ಮಾಡುತ್ತಿದ್ದ ಅಡ್ಡೆ ಮೇಲೆ ಕಡಬ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭ ಆರೋಪಿಗಳು ಪರಾರಿಯಾಗಿದ್ದಾರೆ.
ಕಡಬ ಸಮೀಪದ ಕಳಾರ ಸಮೀಪದ ತಿಮರಡ್ಡ ಎಂಬಲ್ಲಿ ಮಾಂಸಕ್ಕಾಗಿ ದನ ಕಡಿಯುತ್ತಿದ್ದ ಸಂದರ್ಭ ಕಡಬ ಎಸ್.ಐ. ಆಂಜನೇಯ ರೆಡ್ಡಿ, ಎ.ಎಸ್.ಐ.ಸುರೇಶ್, ಭವಿತ್ ರೈ, ಶ್ರೀ ಶೈಲ, ಮಹೇಶ್ ಅವರು ದಾಳಿ ನಡೆಸಿದ್ದಾರೆ. ಈ ವೇಳೆ ಪ್ರಮುಖ ಫಾರೂಕ್ ಸಹಿತ ಮೂವರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಆರೋಪಿಗಳು ಅರ್ಧ ತಲೆ ಕಡಿದ ಸ್ಥಿತಿಯಲ್ಲಿ ಜಾನುವಾರೊಂದು ಪತ್ತೆಯಾಗಿದ್ದು,
ಪರಾರಿಯಾಗುವ ಭರದಲ್ಲಿ 2 ಮೊಬೈಲ್ ಬಿಟ್ಟು ಹೋಗಿದ್ದು, ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಗಾಗಿ ತೀವ್ರ ಶೋಧ ನಡೆಯುತ್ತಿದೆ. ಇದೇ ಸ್ಥಳದಲ್ಲಿ ಕಟ್ಟಿ ಹಾಕಿದ್ದ ಇದ್ದ ನಾಲ್ಕು ಜಾನುವಾರುಗಳು ಸ್ಥಳೀಯರೆದ್ದೆಂದು ದಾಖಲೆ ನೀಡಿ ಕೊಂಡೊಯ್ದಿದ್ದಾರೆ.
ಘಟನೆ ಸಂದರ್ಭ ಎರಡು ಕೋಮಿನ ಜನ ಸೇರಿದ್ದು, ಜೊತೆಗೆ ಸ್ಥಳೀಯರು ಮತ್ತು ಪೊಲೀಸರ ಜತೆ ಮಾತಿನ ಚಕಮಕಿ ನಡೆದಿದೆ. ಘಟನೆ ಬಗ್ಗೆ ಹೇಳಿಕೆ ನೀಡಿರುವ ವಿ.ಹಿಂ.ಪ.ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ಹಾಗೂ ಕಾರ್ಯದರ್ಶಿ ಪ್ರಮೋದ್ ರೈಯವರು, ಕಳಾರದಲ್ಲಿ ಅವ್ಯಾಹತವಾಗಿ ಗೋವಧೆ ನಡೆಯುತ್ತಿದೆ, ಇದು ಮುಂದುವರಿಯುತ್ತಿದೆ, ಇದನ್ನು ನಿಲ್ಲಿಸದಿದ್ದರೆ ಸಮಾಜದಲ್ಲಿ ಅಶಾಂತಿ ಉಂಟಾದರೆ ನಾವು ಹೊಣೆಯಲ್ಲ,ಕಳಾರ ಘಟನೆಯ ಆರೋಪಿಗಳನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.