DAKSHINA KANNADA
ಕಡಬ – ಬಸ್ ನಲ್ಲಿ ಹಿಂದೂ ಯುವತಿಯರ ಜೊತೆ ಅನ್ಯಕೋಮಿನ ಯುವಕರು – ಬಸ್ ತಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು

ಕಡಬ ಎಪ್ರಿಲ್ 01: ರಾಜ್ಯ ಸಾರಿಗೆ ಬಸ್ ನಲ್ಲಿ ಹಿಂದೂ ಯುವತಿಯರ ಜೊತೆಗೆ ಅನ್ಯಕೋಮಿನ ಯುವಕ ಪ್ರಯಾಣ ಎನ್ನುವ ಸುದ್ಧಿ ತಿಳಿದು ಹಿಂದೂ ಪರ ಸಂಘಟನೆಗಳು ಬಸ್ ನ್ನು ತಡೆದು ವಿಚಾರಣೆ ನಡೆಸಿದ ಘಟನೆ ಕಡಬದಲ್ಲಿ ನಿನ್ನೆ ಸಂಜೆ ನಡೆದಿದೆ.
ಸುಬ್ರಹ್ಮಣ್ಯದಿಂದ ಮಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ಸಿನಲ್ಲಿ ಒಂದೇ ಸೀಟಿನಲ್ಲಿ ಅನ್ಯಕೋಮಿನ ಯುವಕರು ಹಾಗೂ ಹಿಂದೂ ಯುವತಿಯೋರ್ವಳು ಪ್ರಯಾಣಿಸುತ್ತಿರುವ ಮಾಹಿತಿ ಮೇರೆಗೆ ಹಿಂದೂ ಕಡಬದ ಪೋಲೀಸ್ ಠಾಣೆ ಮುಂಭಾಗದಲ್ಲಿ ಬಸ್ ನ್ನು ಹಿಂದೂಪರ ಸಂಘಟನೆಗಳು ತಡೆದಿದ್ದಾರೆ. ಬಳಿಕ ಬಸ್ ನಲ್ಲಿದ್ದ ಯುವಕ ಯುವತಿಯರನ್ನು ಪ್ರಶ್ನಿಸಿದ್ದಾರೆ.

ಬಸ್ಸಿನ ಹಿಂದಿನಿಂದ ಬರುತ್ತಿದ್ದ ಇನ್ನೊಂದು ಖಾಸಗಿ ವಾಹನದಲ್ಲಿದ್ದವರು ಯುವತಿಯ ಜತೆ ಇದ್ದ ಯುವಕರನ್ನು ಕರೆದೊಯ್ಯಲು ಪ್ರಯತ್ನಿಸಿದಾಗ ಗೊಂದಲದ ವಾತಾವರಣ, ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪೋಲಿಸರು ಮಧ್ಯಪ್ರವೇಶಿಸಿದ್ದು ಬಳಿಕ ಯುವಕರು, ಯುವತಿ ಹಾಗೂ ಅವರ ಜತೆಗಾರರು ಠಾಣೆಗೆ ತೆರಳಿ ಹೇಳಿಕೆ ಕೊಟ್ಟಿದ್ದು, ಪ್ರಕರಣ ಸುಖಾಂತ್ಯವಾಗಿದೆ.
ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಉದ್ಯೋಗದಲ್ಲಿರುವ ತಂಡ ಸುಬ್ರಹ್ಮಣ್ಯಕ್ಕೆ ತಮ್ಮ ಸಹೋದ್ಯೋಗಿಯ ಮದುವೆಗೆಂದು ಬಂದಿದ್ದು, ಅದರಲ್ಲಿ ಕೆಲವರು ಖಾಸಗಿ ವಾಹನದಲ್ಲಿ ತೆರಳಿದ್ದು, ಇನ್ನು ಕೆಲವರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಪೋಲಿಸ್ ವಿಚಾರಣೆಯ ವೇಳೆ ತಿಳಿದು ಬಂದಿದೆ.