Connect with us

DAKSHINA KANNADA

ಕಡಬದಲ್ಲಿ ಉಂಡುಹೋದ ಕೊಂಡು ಹೋದ ಘಟನೆ – ಲಕ್ಷಾಂತರ ರೂಪಾಯಿ, ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾದ ಯುವಕ

ಮಂಗಳೂರು ಅಗಸ್ಟ್ 26: ಮೈಸೂರು ಮೂಲದ ಯುವಕನೊಬ್ಬ ಮಾತಿನ ಮೂಲಕ ಹಲವಾರು ಜನರಿಂದ ಹಣ ಪಡೆದು ವಂಚಿಸಿದ ಘಟನೆ ಕಡಬದಲ್ಲಿ ನಡೆದಿದೆ. ಈತನ ಪರಾರಿ ಬಗ್ಗೆ ಇದೀಗ ಸಾರ್ವಜನಿಕ ವಲಯದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಈತನ ವಿರುದ್ಧ ಹಣ ಕಳೆದುಕೊಂಡವರು ಈವರೆಗೂ ಪೊಲೀಸ್ ಠಾಣೆಗೆ ದೂರು ನೀಡಿಲ್ಲ ಎಂದು ತಿಳಿದು ಬಂದಿದೆ. ಕಡಬದ ಹೋಟೆಲ್ ಒಂದರಲ್ಲಿ ದೋಸೆ ಸ್ಪೆಷಲಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೈಸೂರಿನ ಹಾರನಹಳ್ಳಿಯ ನಿವಾಸಿ ಶರತ್ ಬಾಬು (30) ಎಂದು ಗುರುತಿಸಲಾಗಿದೆ.


ಈತ ಕಡಬದಲ್ಲಿ ಎರಡು ತಿಂಗಳ ಹಿಂದೆ ಪ್ರಾರಂಭವಾದ ಹೋಟೇಲ್ ಒಂದರಲ್ಲಿ ದೋಸೆ ಮಾಡುವ ಕೆಲಸಕ್ಕೆ ಸೇರಿದ್ದ, ಎರಡು ತಿಂಗಳು ಆಗುವಷ್ಟರಲ್ಲೇ ತನ್ನ ಮಾತಿನ ಮೋಡಿಯಿಂದ ಸುತ್ತಮುತ್ತಲಿನ ಜನರನ್ನು ಬುಟ್ಚಿಗೆ ಹಾಕಿಕೊಂಡ ಇತ ನಗದು ಹಾಗೂ ಇತರ ಸ್ವತ್ತುಗಳನ್ನು ಪಡೆದು ರಾತ್ರಿ ಬೆಳಗಾಗುವುದರೊಳಗೆ ಪರಾರಿಯಾಗಿದ್ದಾನೆ.

ಕಡಬದ ಎಲೆಕ್ಟ್ರಾನಿಕ್ಸ್ ಸಂಸ್ಥೆಯೊಂದರಿಂದ ಒಂದು ಲ್ಯಾಪ್‍ಟ್ಯಾಪ್, ಕಲರ್ ಟಿವಿ, ಹೋಮ್ ಥಿಯೇಟರ್ ಹೀಗೆ ಒಟ್ಟು 45 ಸಾವಿರ ರೂ. ಮೌಲ್ಯದ ಸ್ವತ್ತುಗಳನ್ನು ಪಡೆದುಕೊಂಡಿದ್ದ. ಇನ್ನೊಂದು ಎಲೆಕ್ಟ್ರಾನಿಕ್ಸ್ ಸಂಸ್ಥೆಯಿಂದ 13 ಸಾವಿರ ರೂ ನ ವಸ್ತುಗಳನ್ನು ಪಡೆದಿದ್ದನು. ಆತ ಕೆಲಸ ಮಾಡುತ್ತಿದ್ದ ಹೋಟೆಲ್‍ನ ಬಳಿ ಸರ್ವಿಸ್ ಸ್ಟೇಷನ್ ನಡೆಸುತ್ತಿರುವ ವ್ಯಕ್ತಿಯೊಬ್ಬರಿಂದ 6,500 ರೂ. ನಗದು, ಇನ್ನೊಬ್ಬ ವ್ಯಕ್ತಿಯಿಂದ 2,000 ರೂ. ನಗದು, ಕಡಬದ ತರಕಾರಿ ವ್ಯಾಪಾರಿಯೊಬ್ಬರಿಂದ 35,000 ರೂ. ನಗದು, ಜಿನಸು ವ್ಯಾಪಾಸ್ಥರೊಬ್ಬರಿಂದ 60,000 ರೂ. ನಗದು, ಆತನೊಟ್ಟಿಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಂದ ರೂ. 16,000 ನಗದು ಪಡೆದಿದ್ದ.

 

ಅಷ್ಟೇ ಅಲ್ಲ ವ್ಯಕ್ತಿಯೊಬ್ಬರಿಂದ ಮತ್ತೊಬ್ಬ ವ್ಯಕ್ತಿಯ ಚಿನ್ನದ ಸರವನ್ನೂ ಪಡೆದಿದ್ದ. ಎಲೆಕ್ಟ್ರಾನಿಕ್ಸ್ ವಸ್ತುಗಳು ಹಾಗೂ ಇತರ ವಸ್ತುಗಳೊಂದಿಗೆ ಇದೀಗ ಆರೋಪಿ ನಾಪತ್ತೆಯಾಗಿದ್ದಾನೆ. ತಾನು ಮೈಸೂರಿನಿಂದ ಬಿಳಿ ಅಕ್ಕಿ ತರಿಸಿಕೊಡುವುದಾಗಿ ಕೆಲವರಿಗೆ ವಂಚಿಸಿದ್ದಾನೆ. ಮತ್ತೆ ಕೆಲವರಿಗೆ ಉದ್ಯೋಗ ಕೊಡಿಸುವ ಆಮಿಷ ಒಡ್ಡಿ ಮೋಸ ಮಾಡಿದ್ದಾನೆ. ಇನ್ನೂ ಕೆಲವರಿಗೆ ನಾಳೆ ಹಣ ವಾಪಸ್ ಮಾಡುವುದಾಗಿ ನಾಮ ಹಾಕಿದ್ದಾನೆ. ಮತ್ತೆ ಕೆಲವರಿಗೆ ತಿಂಗಳ ಸಂಬಳವಾದಾಗ ಮರು ಪಾವತಿ ಮಾಡುವುದಾಗಿ ಹೇಳಿ ಈ ಆಸಾಮಿ ಯಾಮಾರಿಸಿದ್ದಾನೆ.

ಇಲ್ಲಿನ ಶೋ ರೂಮ್ ಒಂದರಲ್ಲಿ 45,000 ರೂ. ಡೌನ್ ಪೇಮೆಂಟ್ ಮಾಡಿ ಎರಡು ಲಕ್ಷ ರೂ. ಮೌಲ್ಯದ ಬೈಕ್ ಒಂದನ್ನು ಖರೀದಿಸಿ ರಾತ್ರೋರಾತ್ರಿ ಕಡಬದಿಂದ ಕಾಲ್ಕಿತ್ತಿದ್ದಾನೆ. ಕಡಬದ ಮೊಬೈಲ್ ಶೋ ರೂಮ್ ಒಂದರಿಂದ 40,000 ರೂ. ಮೌಲ್ಯದ ಮೊಬೈಲ್ ಒಂದನ್ನು ಸಾಲದ ರೂಪದಲ್ಲಿ ಪಡೆಯಲು ಯತ್ನಿಸಿ ವಿಫಲನಾಗಿದ್ದ ಎಂದು ತಿಳಿದುಬಂದಿದೆ. ಹೋಟೆಲ್‍ನ ಪಕ್ಕದಲ್ಲಿಯೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಶರತ್ ಬಾಬು, ಹೋಟೆಲ್‍ನಲ್ಲಿ ಇದ್ದುಕೊಂಡೇ ಇಲ್ಲಿನ ಹಲವು ಉದ್ಯಮಿಗಳ ವಿಶ್ವಾಸ ಸಂಪಾದಿಸಿ ದೋಖಾ ಎಸಗಿದ್ದಾನೆ. ಇದೀಗ ಮನೆಗೆ ಬೀಗ ಹಾಕಲಾಗಿದೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *