ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ಕಳುಹಿಸಿದವರ ವಿರುದ್ದ ಕ್ರಿಮಿನಲ್ ಪ್ರಕರಣ
ಮಂಗಳೂರು, ಡಿಸೆಂಬರ್ 30: ಪೌರತ್ವ ಕಾಯ್ದೆ ತಿದ್ದುಪಡಿ ಮಸೂದೆ ವಿರೋಧಿಸಿ ನಡೆದ ಗಲಭೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸಂದೇಶಗಳು ಪ್ರಮುಖ ಕಾರಣವಾಗಿರುವ ಹಿನ್ನಲೆ ಮಂಗಳೂರು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ಕಳುಹಿಸಿ ಕೋಮು ಸಾಮರಸ್ಯಕ್ಕೆ ದಕ್ಕೆ ಮಾಡಿದ ಆರೋಪದಲ್ಲಿ ಹಲವರ ವಿರುದ್ಧ ಮಂಗಳೂರು ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲು ಮಾಡಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಕೂಡ ಮತ್ತೆ ಮತ್ತೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶಗಳು ಹರಿದಾಡುತ್ತಿದ್ದು, ಈ ಹಿನ್ನಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಡಾ.ಪಿ.ಎಸ್. ಹರ್ಷ ಸೈಬರ್ ಪೊಲೀಸರಿಗೆ ತನಿಖೆ ಆದೇಶ ಮಾಡಿದ್ದರು.
ಈ ಕುರಿತಂತೆ ತನಿಖೆ ಆರಂಭಿಸಿರುವ ಸೈಬರ್ ಪೊಲೀಸರು ಕೆಲವು ಸಾಮಾಜಿಕ ಜಾಲತಾಣದ ಗ್ರೂಪ್ಗಳಲ್ಲೂ ಪ್ರಚೋದನಕಾರಿ ಸಂದೇಶಗಳು ಹಾಗೂ ಸುಳ್ಳು ಸುದ್ದಿಗಳು ಹರಡುತ್ತಿದ್ದರಿಂದ ಅಂತಹ ಗ್ರೂಪ್ ಅಡ್ಮಿನ್ಗಳ ವಿರುದ್ಧ ಕೋಮು ಸಾಮರಸ್ಯಕ್ಕೆ ದಕ್ಕೆ ತಂದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿ ನೋಟಿಸ್ ಕಳುಹಿಸಲಾಗಿದೆ.