KARNATAKA
ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಧಾವಿಸಿದ ಸಂಸದ ಕೋಟ, ಮಹತ್ವದ ತುರ್ತು ಸಭೆ, ಕಾಫಿ ಬೆಳೆಗಾರರ ಭೂಮಿ ಹರಾಜು ಮುಂದೂಡಿಕೆ..!
ಚಿಕ್ಕಮಗಳೂರು : ಚಿಕ್ಕಮಗಳೂರು, ಹಾಸನ, ಸಕಲೇಶಪುರ, ಮಡಿಕೇರಿ ಮುಂತಾದ ಜಿಲ್ಲೆಗಳ ಕಾಫಿ ಬೆಳೆಗಾರರ ಸಾಲ ವಸೂಲಾತಿಗೆ ಸಂಬಂಧಪಟ್ಟಂತೆ ಆನ್ಲೈನ್ ಹರಾಜು ಮೂಲಕ ಕಾಫಿ ಭೂಮಿಯನ್ನು ಹರಾಜು ಮಾಡುತ್ತಿರುವ ರಾಷ್ಟ್ರೀಕೃತ ಬ್ಯಾಂಕುಗಳ ಧೋರಣೆಯನ್ನು ವಿರೋಧಿಸಿ ಮಂಗಳೂರಿನ ಕ್ಲಾಕ್ ಟವರ್ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ನೀಡಿದ ಭರವಸೆಗೆ ಪೂರಕವಾಗಿ ಇಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾಫಿ ಬೆಳಗಾರರ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಮತ್ತು ಜನಪ್ರತಿನಿಧಿಗಳ ಮಹತ್ವದ ಸಭೆ ನಡೆಸಲಾಯಿತು.
ಕಾಫಿ ಬೆಳೆಗಾರರ ಭೂಮಿಯನ್ನು ರಾಷ್ಟ್ರೀಕೃತ ಬ್ಯಾಂಕುಗಳು ಆನ್ಲೈನ್ ಮೂಲಕ ಹರಾಜು ಮಾಡುವುದನ್ನು ವಿರೋಧಿಸಿ ಸಂಸದರ ನೇತೃತ್ವದ ಸಭೆಯ ನಿರ್ಣಯದಂತೆ ಹರಾಜು ಪ್ರಕ್ರಿಯೆಯನ್ನು ಮುಂದೂಡಲು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಹಾಗೂ ಈಗಾಗಲೇ ಬ್ಯಾಂಕುಗಳು ನಿರ್ಧರಿಸಿರುವ ಕಾಫಿ ಬೆಳೆಗಾರರ ಭೂಮಿಯ ಹರಾಜು ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಲು ಸಂಸದರು ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಾಫಿ ಬೆಳೆಗಾರರು ಕೆನರಾ ಬ್ಯಾಂಕ್ ಸೇರಿದಂತೆ ಹಲವು ರಾಷ್ಟ್ರೀಕೃತ ಬ್ಯಾಂಕುಗಳು ತಮ್ಮ ಭೂಮಿಯನ್ನು ಆನ್ಲೈನ್ ಮೂಲಕ ಸರ್ಫೇಸ್ ಕಾಯಿದೆಯಂತೆ ಹರಾಜು ಹಾಕುವುದನ್ನು ವಿರೋಧಿಸಿ ನಿರ್ಣಯಿಸಲಾಯಿತು. ಮತ್ತು ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚಿಸಿತು.
ಸರ್ಫೇಸ್ ಕಾಯ್ದೆಯಿಂದ ಆಗುವ ಸಮಸ್ಯೆಗಳ ಬಗ್ಗೆ ರಾಜ್ಯ ಮತ್ತು ಕೇಂದ್ರಗಳಲ್ಲಿ ಜನಪ್ರತಿನಿಧಿಗಳಾದ ನಾವುಗಳು ಚರ್ಚಿಸುತ್ತೇವೆಂದು ಮತ್ತು ಕಾಫಿ ಬೆಳೆಗಾರರು ಸಂಕಷ್ಟದಲ್ಲಿರುವಾಗ ಅವರ ಭೂಮಿಯನ್ನು ಹರಾಜು ಮಾಡಿದರೆ ರೈತರಿಗೆ ಬಹುದೊಡ್ಡ ಸಮಸ್ಯೆಗಳು ಆಗುತ್ತದೆ ಎಂದು ವಿವರಿಸಿದ ಸಂಸದರು ಭೂ ಹರಾಜು ಮಾಡುವುದನ್ನು ನಿಗದಿಪಡಿಸಿದ ದಿನಾಂಕವನ್ನು ಅನಿರ್ದಿಷ್ಟಾವಧಿಯ ವರೆಗೆ ಮುಂದೂಡಲು ನಿರ್ದೇಶಿಸಿದರು.
ಸಭೆಯಲ್ಲಿ ಸ್ಥಳೀಯ ಶಾಸಕ ತಮ್ಮಯ್ಯ, ವಿಧಾನ ಪರಿಷತ್ ಶಾಸಕರಾದ ಸಿಟಿ ರವಿ, ವಿಧಾನ ಪರಿಷತ್ತಿನ ಉಪ ಸಭಾಪತಿ ಪ್ರಾಣೇಶ್, ರಾಷ್ಟ್ರೀಯ ಕಾಫಿ ಬೋರ್ಡ್ ಚೇರ್ಮನ್ ದಿನೇಶ್, ಲೀಡ್ ಬ್ಯಾಂಕ್ ಮ್ಯಾನೇಜರ್ ಸುರೇಶ್, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸುಜೇಂದ್ರ, ಜಿಲ್ಲಾಧಿಕಾರಿಗಳಾದ ಶ್ರೀಮತಿ ಮೀನಾ ನಾಗರಾಜ್, ಜಿಲ್ಲಾ ಪಂಚಾಯತಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀಮತಿ ಕೀರ್ತನ, ವಿವಿಧ ಬ್ಯಾಂಕುಗಳ ಹಿರಿಯ ಅಧಿಕಾರಿಗಳು, ಕಾಫಿ ಬೆಳೆಗಾರರ ವಿವಿಧ ಸಂಘಗಳ ಅಧ್ಯಕ್ಷರು, ಮುಖಂಡರಾದ ದೀಪಕ್ ದೊಡ್ಡಯ್ಯ ಮುಂತಾದವರು ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡಿದರು.
You must be logged in to post a comment Login