LATEST NEWS
ಉಡುಪಿ – ಅಕ್ರಮ ಮರಳುಗಾರಿಕೆ ನಡೆದರೂ..ಸೈಲೆಂಟ್ ಆದ ಅಧಿಕಾರಿಗಳು…!!

ಉಡುಪಿ ನವೆಂಬರ್ 25: ಉಡುಪಿ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ದೊರಕಿದ್ದು, ಅಕ್ರಮವಾಗಿ ಮರಳು ಸಾಗಾಟಕ್ಕೆ ಲಾರಿಗೆ 2 ನಂಬರ್ ಪ್ಲೇಟ್ ಆಳವಡಿಸಿ ಅಕ್ರಮ ಮಾಡುತ್ತಿರುವುದನ್ನು ಉಡುಪಿ ಜಿಲ್ಲಾ ಲಾರಿ ಮಾಲಕರ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಪತ್ತೆ ಹಚ್ಚಿ ದೂರು ನೀಡಿದರೂ, ಪೊಲೀಸ್ ಇಲಾಖೆ ಹಾಗೂ ಗಣಿ ಇಲಾಖಾಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದ ಮೌನಕ್ಕೆ ಜಾರಿದ್ದಾರೆ.
ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಯೊಂದನ್ನು ಲಾರಿ ಮಾಲಕರ ಒಕ್ಕೂಟ ಪದಾಧಿಕಾರಿಗಳು ತಡೆ ಹಿಡಿದು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನಲೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಲಾರಿಯನ್ನು ಠಾಣೆಗೆ ಕೊಂಡೊಯ್ಯಲು ಲಾರಿ ಡ್ರೈವರ್ ಸೂಚಿಸಿದ್ದರು. ಆದರೆ ಲಾರಿ ಡ್ರೈವರ್ ಮರಳನ್ನು ಅನ್ಲೋಡ್ ಮಾಡಿ ಪೊಲೀಸ್ ಠಾಣೆಗೆ ತೆರಳದೇ ಲಾರಿ ಸಮೇತ ಪರಾರಿಯಾಗಿದ್ದಾನೆ.

ಲಾರಿ ಹೋದ ಮೇಲೆ ಸ್ಥಳಕ್ಕೆ ಬಂದ ಗಣಿ ಇಲಾಖಾ ಅಧಿಕಾರಿಗಳು ಘಟನಾ ಸ್ಥಳದಲ್ಲಿ ಲಾರಿ ಇಲ್ಲದಿರುವುದನ್ನು ಕಂಡು ವಾಹನದಲ್ಲಿಯೇ ಕುಳಿತು ಪರಿವೀಕ್ಷಣೆ ನಡೆಸಿ ಬಂದ ಹಾಗೆ ವಾಪಾಸ್ ತೆರಳಿದ್ದಾರೆ. ಲಾರಿಗೆ ಕಾನೂನು ಬಾಹಿರವಾಗಿ ಎರಡು ನಂಬರ್ ಪ್ಲೇಟ್ ಆಳವಡಿಸಿದಲ್ಲದೇ..ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದರೂ ಅಧಿಕಾರಿಗಳು ಮಾತ್ರ ಸುಮ್ಮನಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.