LATEST NEWS
ಮಂಗಳೂರು – ಅಕ್ರಮ ಪಿಸ್ತೂಲ್ ಪ್ರಕರಣ ಮತ್ತೊಬ್ಬ ಆರೋಪಿ ಅರೆಸ್ಟ್

ಮಂಗಳೂರು ಮಾರ್ಚ್ 16: ಇತ್ತೀಚೆಗೆ ಅಕ್ರಮ ಪಿಸ್ತೂಲ್ ನೊಂದಿಗೆ ಯಾವುದೋ ದುಷ್ಕೃತ್ಯಕ್ಕೆ ಹೊಂಚಹಾಕಿದ್ದ ತಂಡವನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದರು. ಇದೀಗ ಈ ಪ್ಪಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಕಡಂಬಾರ್ ನಿವಾಸಿ ಅಬ್ದುಲ್ ಫೈಜಲ್ ಅಲಿಯಾಸ್ ಫೈಜು (26 ವರ್ಷ) ಬಂಧಿತ ಆರೋಪಿ. ಆತನನ್ನು ಮಂಜೇಶ್ವರ ಬಳಿಯ ಮೊರ್ತಾನದಲ್ಲಿ ಶನಿವಾರ ಬಂಧಿಸಿದ್ದೇವೆ. ಆತನಿಂದ ಒಂದು ಪಿಸ್ತೂಲ್, ಒಂದು ಸಜೀವ ಗುಂಡು, ಮೊಬೈಲ್ ಸೇರಿದಂತೆ ಒಟ್ಟು ₹ 2.10 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಸುದ್ದಿಗಾರರಿಗೆ ಇಲ್ಲಿ ಭಾನುವಾರ ತಿಳಿಸಿದರು. ಈ ಪ್ರಕರಣ ಸಂಬಂಧ ಪೊಲೀಸರು ನಾಟೆಕಲ್ಪ ನೌಫಲ್ ಮತ್ತು ಪೈವಳಿಕೆ ಸುಂಕದಕಟ್ಟೆಯ ಮನ್ಸೂರ್, ಕಾಸರಗೋಡು ಮಂಗಲ್ಪಾಡಿಯ ಅಬ್ದುಲ್ ಲತೀಫ್ ಅಲಿಯಾಸ್ ತೋಕ್ ಲತೀಫ್, ತಲಪಾಡಿ ಕಡಂಬಾರ್ನ ಮೊಹಮ್ಮದ್ ಅಸ್ಲರ್ ಮತ್ತು ಮೊಹಮ್ಮದ್ ಸಾಲಿಯನ್ನು ಈಚೆಗೆ ಬಂಧಿಸಿದ್ದರು. ಆರೋಪಿಗಳಿಂದ ಮೂರು ಪಿಸ್ತೂಲು ಮತ್ತು 12.9 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದರು. ಆರೋಪಿಗಳಲ್ಲಿ ಅಬ್ದುಲ್ ಲತೀಫ್ಗೆ ಪಿಎಫ್ಐ ಜೊತೆ ನಂಟು ಇದೆ ಎಂದು ಪೊಲೀಸರು ತಿಳಿಸಿದ್ದರು.

‘ಆರೋಪಿ ಅಬ್ದುಲ್ ಫೈಜಲ್ಗೆ ಪಿಎಫ್ಐ ನಂಟು ಇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಲ್ಲೆ ಸಂಬಂಧ ಈತನ ವಿರುದ್ಧ ಈ ಹಿಂದೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ’ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.