ಗೋವಾ ಡಿಸೆಂಬರ್ 02: ಗೋವಾದಲ್ಲಿ ನಡೆದ 56ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ದೈವವನ್ನು ದೆವ್ವ ಎಂದು ಹೇಳಿದಲ್ಲದೇ ವೇದಿಕೆಯ ಮೇಲೆ ಅದನ್ನು ಅವಮಾನಕಾರಿಯಾಗಿ ಅನುಕರಣೆ ಮಾಡಿದ್ದು, ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಚಾಮುಂಡಿ ದೈವವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಹಿಂದೂ ಜನಜಾಗೃತಿ ಸಮಿತಿ (HJS) ಪಣಜಿಯಲ್ಲಿ ದೂರು ದಾಖಲಿಸಿದೆ .

ದೂರಿನ ಪ್ರಕಾರ, ಸಿಂಗ್ ಅವರು ರಿಷಬ್ ಶೆಟ್ಟಿ ಅಭಿನಯದ ಕನ್ನಡ ಚಿತ್ರ ಕಾಂತಾರ – ಅಧ್ಯಾಯ 1 ರಲ್ಲಿ ಚಿತ್ರಿಸಲಾದ ದೇವತೆಯ ದೈವಿಕ ರೂಪವನ್ನು ವೇದಿಕೆಯ ಮೇಲೆ ಅನುಕರಣೆ ಮಾಡಿದ್ದಾರೆ. ಅಲ್ಲದೆ ಚಾಮುಂಡಿ ದೈವವನ್ನು “ಸ್ತ್ರೀ ದೆವ್ವ” ಎಂದು ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದೆ.
ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ, HJS ಸದಸ್ಯರಾದ ಪ್ರಮೋದ್ ತುಯೇಕರ್ ಮತ್ತು ದಿಲೀಪ್ ಶೆಟ್ಯೆ ಅವರು ಪಣಜಿ ಪೊಲೀಸ್ ಠಾಣೆಯ ಸಬ್-ಇನ್ಸ್ಪೆಕ್ಟರ್ ಸಾಹಿನ್ ಶೆಟ್ಯೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಚಾಮುಂಡಿ ದೈವವನ್ನು ತುಳು ಸಮುದಾಯದ ಪವಿತ್ರ ಕುಟುಂಬ ದೇವತೆ ಎಂದು ಪರಿಗಣಿಸಲಾಗುತ್ತದೆ ಮತ್ತು ದೇವರನ್ನು ಅವಹೇಳನಕಾರಿ ರೀತಿಯಲ್ಲಿ ಚಿತ್ರಿಸುವುದು ಅಥವಾ ವಿವರಿಸುವುದು ಅಗೌರವಕ್ಕೆ ಸಮಾನವಾಗಿದೆ. ಇಂತಹ ಕೃತ್ಯಗಳು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಬಹುದು ಮತ್ತು ಶಾಂತಿ ಕದಡಬಹುದು” ಎಂದು HJS ಹೇಳಿದೆ ಎಂದು ಪಿಟಿಐ ವರದಿ ಮಾಡಿದೆ.
ಬಾಲಿವುಡ್ ನಟ ರಣವೀರ್ ಸಿಂಗ್ ಸಾರ್ವಜನಿಕ ಕ್ಷಮೆಯಾಚಿಸಬೇಕು ಮತ್ತು ಭವಿಷ್ಯದಲ್ಲಿ ಅಂತಹ ಹೇಳಿಕೆಗಳು ಅಥವಾ ಪ್ರದರ್ಶನಗಳನ್ನು ನೀಡುವುದಿಲ್ಲ ಎಂದು ಭರವಸೆ ನೀಡಬೇಕು” ಎಂದು ಅದು ಹೇಳಿದ್ದು, ಬೆಂಬಲಿಗರು ಶಾಂತಿಯುತವಾಗಿ ಮತ್ತು ಕಾನೂನಿನೊಳಗೆ ಪ್ರತಿಭಟಿಸಬೇಕು ಎಂದು ವಿನಂತಿಸಿದೆ.
ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್ ನಟ ರಿಷಬ್ ಶೆಟ್ಟಿ ಅವರನ್ನು ಶ್ಲಾಘಿಸುತ್ತಾ, “ನಾನು ಥಿಯೇಟರ್ನಲ್ಲಿ ‘ಕಾಂತಾರ ಚಾಪ್ಟರ್ 1’ ನೋಡಿದೆ. ನಿಮ್ಮ ಅಭಿನಯ ಅದ್ಭುತವಾಗಿತ್ತು, ವಿಶೇಷವಾಗಿ ಹೆಣ್ಣು ದೆವ್ವ ನಿಮ್ಮ ಮೈಸೇರುವ ದೃಶ್ಯವಂತೂ ಅತ್ಯದ್ಭುತವಾಗಿತ್ತು” ಎಂದು ಹೇಳಿ, ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ರಣವೀರ್ ಸಿಂಗ್ ಅನುಕರಣೆ ಮಾಡಿದ್ದಾರೆ. ಆದರೆ ಹಾಗೆ ಮಾಡುವಾಗ ತಮಾಷೆಯ ರೀತಿಯಲ್ಲಿ ರಣವೀರ್ ಸಿಂಗ್ ಅನುಕರಣೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಈಗಾಗಲೇ ರಣವೀರ್ ಸಿಂಗ್ ವರ್ತನೆಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದರೂ, ಕರಾವಳಿಯಲ್ಲಿ ಮಾತ್ರ ಯಾವುದೇ ಸಂಘಟನೆಗಳು ರಣವೀರ್ ಸಿಂಗ್ ಅನುಕರಣೆಗೆ ಖಂಡನೆ ವ್ಯಕ್ತಮಾಡಿಲ್ಲ ಎನ್ನುವುದು ವಿಪರ್ಯಾಸ.



