LATEST NEWS
ಹಿಂದೂ ಜಾಗರಣ ವೇದಿಕೆಯ ಮುಖಂಡ ಶ್ರೀಕಾಂತ ಶೆಟ್ಟಿಗೆ ಬಾಗಲಕೋಟೆ ಜಿಲ್ಲೆ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ

ಬಾಗಲಕೋಟೆ ಜೂನ್ 21: ಹಿಂದೂ ಜಾಗರಣವೇದಿಕೆಯ ಮುಖಂಡ ಶ್ರೀಕಾಂತ ಶೆಟ್ಟಿ ಅವರಿಗೆ ಮೂರು ತಿಂಗಳು ಬಾಗಲಕೋಟೆ ಜಿಲ್ಲೆ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಮುಧೋಳದಲ್ಲಿರುವ ಶಿವಾಜಿ ನಗರದಲ್ಲಿ ಇಂದು ಹಿಂದೂ ಹೃದಯ ಸಾಮ್ರಾಟ ಶ್ರೀ ಛತ್ರಪತಿ ಶಿವಾಜಿ ಕಂಚಿನ ಮೂರ್ತಿ ಉದ್ಘಾಟನಾ ಕಾರ್ಯಕ್ರಮ ಆಯೋಜನೆಗೊಂಡಿದೆ. ಈ ಕಾರ್ಯಕ್ರಮ ಮುಖ್ಯ ಭಾಷಣಕಾರರಾಗಿ ಶ್ರೀಕಾಂತ ಶೆಟ್ಟಿ ಅವರನ್ನು ಆಹ್ವಾನಿಸಲಾಗಿತ್ತು.
ಭಾಷಣ ಮೂಲಕ ಕೋಮು ಸಾಮರಸ್ಯ ಕದಡುವ ಸಾಧ್ಯತೆ ಇರುವ ಕಾರಣ ನೀಡಿ ಜಿಲ್ಲಾಡಳಿತ ಶ್ರೀಕಾಂತ ಶೆಟ್ಟಿ ಅವರಿಗೆ 3 ತಿಂಗಳು ಬಾಗಲಕೋಟೆ ಪ್ರವೇಶಕ್ಕೆ ನಿರ್ಬಂಧ ಹೇರಿ ಆದೇಶ ಪ್ರಕಟಿಸಿದೆ.
ಮುಧೋಳ ಶಹರವು ಮತೀಯವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು ಇಲ್ಲಿ ಮತೀಯವಾಗಿ ಸಣ್ಣ ಘಟನೆಗಳು ಸಂಭವಿಸಿದ್ದಲ್ಲಿ ರಾಜ್ಯ ಮತ್ತು ರಾಷ್ಟ್ರ ವ್ಯಾಪ್ತಿಯಲ್ಲಿ ಪ್ರಚಾರ ಪಡೆದು ವಿವಿಧ ಅನ್ಯ ಧರ್ಮಿಯ ರಾಜ್ಯ ಮತ್ತು ರಾಷ್ಟ್ರ ನಾಯಕರು ಭೇಟಿ ನೀಡಿ ಭಾಷಣವನ್ನು ಮಾಡುವುದರಿಂದ ಸಾಮರಸ್ಯದ ಜೀವನಕ್ಕೆ ಅಡೆತಡೆ ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಂಭವ ಇರುತ್ತದೆ.

ಸೆಪ್ಟೆಂಬರ್ 09, 2015 ರಂದು ಗಣೇಶ ವಿಸರ್ಜನೆ ಕಾರ್ಯಕ್ರಮದ ಕಾಲಕ್ಕೆ ಜರುಗಿದ ಕೋಮು ಗಲಭೆಗೆ ಸಂಬಂಧಿಸಿದಂತೆ ಒಟ್ಟು 28 ಪ್ರಕರಣಗಳು ಮುಧೋಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಒಟ್ಟು 9.46 ಕೋಟಿ ರೂ. ಮೌಲ್ಯದ ಆಸ್ತಿ ಪಾಸ್ತಿ ಸುಟ್ಟು ಹಾನಿಯಾಗಿತ್ತು. ಮುಧೋಳ ನಗರದಲ್ಲಿ ಇಲ್ಲಿಯವರೆಗೆ ಇದ್ದ ದ್ವೇಷಮಯ ವಾತಾವರಣವು ಸ್ವಲ್ಪ ತಿಳಿಯಾಗುತ್ತಿದ್ದು, ಉಭಯ ಕೋಮಿನ ಜನರು ಹಿಂದಿನ ಕಹಿ ಘಟನೆಗಳನ್ನು ಮರೆತು ಸಾಮರಸ್ಯದತ್ತ ವಾಲುತ್ತಿದ್ದಾರೆ.
ಶ್ರೀಕಾಂತ ಶೆಟ್ಟಿ ಇವರು ಈ ಮೊದಲು ಯಾವುದೇ ಕಾರ್ಯಕ್ರಮಕ್ಕೆ ಹೋದಲ್ಲಿ ಪ್ರಚೋದನಕಾರಿ ಭಾಷಣ ಮಾಡುತ್ತಾ ಕೋಮು ಸಾಮರಸ್ಯವನ್ನು ಹದಗೆಡಿಸುತ್ತಾ ಬಂದಿದ್ದು ಅವರ ಮೇಲೆ ದ್ವೇಷ ಭಾಷಣ ಮತ್ತು ಅನ್ಯಧರ್ಮಿಯರ ವಿರುದ್ದ ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯದ ಹಲವೆಡೆ ಶ್ರೀಕಾಂತ್ ಶೆಟ್ಟಿ ಮೇಲೆ ಪ್ರಕರಣಗಳು ದಾಖಲಾಗಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದಕ್ಕೆ ಶ್ರೀಕಾಂತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಹಿಂದೂಪರ ಸಂಘಟನೆಗಳಿಗೆ ಮತ್ತು ಹಿಂದೂ ಪರ ಹೋರಾಟ ನಡೆಸುವುವರಿಗೆ ರಾಜ್ಯ ಸರಕಾರ ಒಂದು ರೀತಿಯ ತುರ್ತು ಪರಿಸ್ಥಿತಿ ಹೇರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.