LATEST NEWS
ಕೇರಳದಲ್ಲಿ ಭಾರೀ ಮಳೆ ರೆಡ್ ಅಲರ್ಟ್ ಘೋಷಣೆ – ಇಡುಕ್ಕಿಯಲ್ಲಿ ರಾತ್ರಿ ಪ್ರಯಾಣ ನಿಷೇಧ – ಗುಡ್ಡಗಾಡು ಮತ್ತು ಕರಾವಳಿ ಪ್ರದೇಶಗಳ ಜನರಿಗೆ ಎಚ್ಚರಿಕೆ
ತಿರುವನಂತಪುರ ಮೇ 19 :ಕೇರಳದಲ್ಲಿ ಮುಂಗಾರು ಪೂರ್ವ ಮಳೆ ಎಡೆಬಿಡದೆ ಸುರಿಯುತ್ತಿದ್ದು, ಕೇರಳದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಕೆಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ನ್ನು ಹವಮಾನ ಇಲಾಖೆ ಘೋಷಿಸಿದೆ. ಹವಾಮಾನ ಇಲಾಖೆಯು, ಪತ್ತನಂತಿಟ್ಟ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ಸೋಮವಾರವು ‘ರೆಡ್ ಅಲರ್ಟ್’ ಘೋಷಿಸಿದ್ದು, ತಿರುವನಂತಪುರ, ಕೊಲ್ಲಂ, ಆಲಪ್ಪುಳ ಮತ್ತು ಎರ್ನಾಕುಳಂ ಸೇರಿ ಇತರ ನಾಲ್ಕು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.
ತಿರುವನಂತಪುರದಲ್ಲಿ ಶನಿವಾರ ರಾತ್ರಿ ಭಾರಿ ಮಳೆಯಾಗಿದೆ. ನಗರ ಮತ್ತು ಅದರ ಉಪನಗರಗಳ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಕೆಲವೆಡೆ ಮನೆ, ಅಂಗಡಿಗಳು ಜಲಾವೃತಗೊಂಡಿವೆ. ಇಡುಕ್ಕಿ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ರಾತ್ರಿ ಪ್ರಯಾಣವನ್ನು ಭಾನುವಾರದಿಂದ, ರೆಡ್ ಅಲರ್ಟ್ ಮತ್ತು ಆರೆಂಜ್ ಅಲರ್ಟ್ ಹಿಂಪಡೆಯುವವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಐಎಂಡಿ ಮುನ್ಸೂಚನೆಯನ್ನು ಅನುಸರಿಸಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮುಂದಿನ ಐದು ದಿನಗಳವರೆಗೆ ರಾಜ್ಯದಲ್ಲಿ ಭಾರೀ ಮಳೆ ಮುಂದುವರಿಯುವ ನಿರೀಕ್ಷೆಯಿದೆ, ಇದು ಹಠಾತ್ ಪ್ರವಾಹ, ಜಲಪಾತ, ಭೂಕುಸಿತ ಮತ್ತು ಮಣ್ಣು ಕುಸಿತಕ್ಕೆ ಕಾರಣವಾಗಬಹುದು ಎಂದು ಹೇಳಿದರು. ಗುಡ್ಡಗಾಡು ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವವರು ಸುರಕ್ಷಿತ ಸ್ಥಳಗಳಿಗೆ ಅಥವಾ ಪುನರ್ವಸತಿ ಶಿಬಿರಗಳಿಗೆ ತೆರಳಲು ಸಿದ್ಧರಾಗಿರಬೇಕು ಎಂದು ಫೇಸ್ಬುಕ್ ಪೋಸ್ಟ್ನಲ್ಲಿ ಸಿಎಂ ಹೇಳಿದ್ದಾರೆ. ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಅಪಾಯ ತಂದೊಡ್ಡುವ ಮರಗಳನ್ನು ಕಡಿಯಬೇಕು ಮತ್ತು ಪೋಸ್ಟ್ಗಳು, ಬೋರ್ಡ್ಗಳು ಇತ್ಯಾದಿಗಳನ್ನು ಭದ್ರಪಡಿಸಬೇಕು ಎಂದು ಅವರು ನಿರ್ದೇಶನ ನೀಡಿದರು. ಮಳೆಗಾಲದಲ್ಲಿ ಸ್ನಾನ, ಮೀನುಗಾರಿಕೆ ಅಥವಾ ಇತರ ಉದ್ದೇಶಗಳಿಗಾಗಿ ನದಿಗಳು ಅಥವಾ ಇತರ ಜಲಮೂಲಗಳಿಗೆ ಪ್ರವೇಶಿಸದಂತೆ ಮತ್ತು ರಾತ್ರಿಯಲ್ಲಿ ಗುಡ್ಡಗಾಡು ಪ್ರದೇಶಗಳಿಗೆ ಪ್ರಯಾಣಿಸದಂತೆ ಸಲಹೆ ನೀಡಿದರು. ಮಳೆಗಾಲದಲ್ಲಿ ರಸ್ತೆ ಅಪಘಾತಗಳ ಸಾಧ್ಯತೆ ಹೆಚ್ಚಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಸಿಎಂ ಸಲಹೆ ನೀಡಿದರು.
You must be logged in to post a comment Login