LATEST NEWS
ಶಬರಿಮಲೆಯಲ್ಲಿ ಜರುಗುವ ಮಂಡಲ-ಮಕರವಿಳಕ್ಕು ಪರ್ವದ ಕಾರ್ಯಕ್ರಮಕ್ಕೆ ಮಾರ್ಗಸೂಚಿ ಕಡ್ಡಾಯ

ಮಂಗಳೂರು, ಡಿಸೆಂಬರ್ 15 : ಪ್ರಸ್ತುತ ಸಾಲಿನಲ್ಲಿ ಕೇರಳ ರಾಜ್ಯದ ಶಬರಿಮಲೆಯಲ್ಲಿ ಜರುಗುವ ಮಂಡಲ-ಮಕರವಿಳಕ್ಕು ಪರ್ವದ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದಿಂದ ಆಗಮಿಸುವ ಭಕ್ತಾದಿಗಳ ಆರೋಗ್ಯ ರಕ್ಷಣೆ ಹಾಗೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳು ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರ ಮತ್ತು ಸೂಚನೆಗಳಂತೆ ಈ ಕೆಳಗಿನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಲು ತಿಳಿಸಲಾಗಿದೆ.
ಯಾತ್ರಾರ್ಥಿಗಳು ಕಡ್ಡಾಯವಾಗಿ (https://sabarimalaonline.org/) ವೆಬ್ಸೈಟ್ನ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗಿದ್ದು, ತಮ್ಮ ಯಾತ್ರೆ ಬಗ್ಗೆ ಅನುಮತಿಸಿದ ನಂತರದಲ್ಲಿ ಮಾತ್ರ ಶಬರಿಮಲೆಯಲ್ಲಿ ದೇವರ ದರ್ಶನಕ್ಕೆ ಅವಕಾಶ ಇರಲಿದೆ.
ಪ್ರಥಮವಾಗಿ ಪ್ರತಿ ದಿನ ಒಂದು ಸಾವಿರ ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ವಾರಾಂತ್ಯದಲ್ಲಿ ಪ್ರತಿ ದಿನ ಎರಡು ಸಾವಿರ ಯಾತ್ರಾರ್ಥಿಗಳಿಗೆ ಅವಕಾಶ ಇರುತ್ತದೆ. ಅದರಂತೆ ಮೊದಲು ನೋಂದಣಿ ಮಾಡಿಕೊಂಡವರಿಗೆ ಮೊದಲು ಆದ್ಯತೆ ಇರುತ್ತದೆ.

ಭೇಟಿ ನೀಡುವ 48 ಗಂಟೆ ಅವಧಿಯ ಮೊದಲು ಕೋವಿಡ್-19 ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ. ಪ್ರವೇಶ ಸ್ಥಳದಲ್ಲಿ ಆಂಟಿಜೆನ್ಟೆಸ್ಟ್ ಗೆ ಅವಕಾಶ ಕಲ್ಪಿಸಲಾಗಿದ್ದು, ಅದರ ವೆಚ್ಚವನ್ನು ಯಾತ್ರಾರ್ಥಿಗಳೇ ಭರಿಸಬೇಕಾಗುತ್ತದೆ. ಹತ್ತು ವರ್ಷಗಳ ಒಳಪಟ್ಟು ಮತ್ತು 60-65 ವರ್ಷಗಳಿಗೆ ಮೇಲ್ಪಟ್ಟವರಿಗೆ ಹಾಗೂ ಅನಾರೋಗ್ಯದ/ಕಾಯಿಲೆಯ ಲಕ್ಷಣಗಳು ಇರುವಂತಹವರಿಗೆ ಯಾತ್ರಾ ಪ್ರದೇಶಕ್ಕೆ ಅನುಮತಿ ಇರುವುದಿಲ್ಲ. ಬಿಪಿಎಲ್ ಕಾರ್ಡ್, ಆಯುಪ್ಮಾನ್ ಕಾರ್ಡ್ ಇತ್ಯಾದಿ ಕಾರ್ಡ್ ಹೊಂದಿರುವವರು ಯಾತ್ರೆಗೆ ತೆರಳುವ ಸಮಯದಲ್ಲಿ ಅದನ್ನು ಹೊಂದಿರಬೇಕು.
ತುಪ್ಪದ ಅಭಿಷೇಕ, ಪಂಪಾನದಿ ಸ್ನಾನ, ಸನ್ನಿಧಾನಂನಲ್ಲಿ ರಾತ್ರಿ ತಂಗಬೇಕು ಹಾಗೂ ಪಂಪಾ ಮತ್ತು ಗಣಪತಿ ಕೋವಿಲ್ಗೆ ಅವಕಾಶವಿರುವುದಿಲ್ಲ. ಯಾತ್ರಾರ್ಥಿಗಳ ಪ್ರಯಾಣಕ್ಕೆ ಎರುಮೆಲು ಮತ್ತು ವೇದಸಾರಿಕ್ಕರ ಮಾರ್ಗದಲ್ಲಿ ಮಾತ್ರ ಅವಕಾಶ ಇರುತ್ತದೆ. ಎಂದು ಹಿಂ.ಧಾ.ಸಂ.ಮತ್ತು ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.