LATEST NEWS
ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ – ಆರೋಪಿ ಮುರುಗನ್ ದೇವರ್ ಮನೆಯಿಂದ ಚಿನ್ನಾಭರಣ ವಶಕ್ಕೆ

ತಮಿಳುನಾಡು ಜನವರಿ 24: ಉಳ್ಳಾಲದ ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂದಿಸಿದಂತೆ ಬಂಧಿತ ಆರೋಪಿ ಮುರುಗನ್ ದೇವರ್ ಮನೆಯಿಂದ ಚಿನ್ನಾಭರಣಗಳನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದರೋಡೆ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಮುರುಗಂಡಿ ದೇವರ್ ಮನೆಯಲ್ಲಿ ಶೋಧ ನಡೆಸಿದ್ದು 16.250 ಕೆ.ಜಿ ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ. ಷಣ್ಮುಗಂ ಈಗಾಗಲೇ ಬಂಧಿತನಾಗಿರುವ ಮುರುಗಂಡಿ ದೇವರ್ ತಂದೆಯಾಗಿದ್ದು ಮನೆಯಲ್ಲಿ ಬಚ್ಚಿಟ್ಟಿದ್ದ ಚಿನ್ನವನ್ನು ಪೊಲೀಸರು ವಶಪಡಿಸಿರುವುದಾಗಿ ತಿಳಿದುಬಂದಿದೆ. ಷಣ್ಮುಗಂ ಸುಂದರಮ್ ದರೋಡೆ ಪ್ರಕರಣದಲ್ಲಿ ನೇರವಾಗಿ ಭಾಗವಹಿಸದೆ ಆರೋಪಿಗಳಿಗೆ ಸಹಕರಿಸಿರುವುದಾಗಿ ಹೇಳಲಾಗಿದೆ.

ಈ ಮೊದಲು ಮುರುಗನ್ ದೇವರ್, ಯೋಸುವಾ ರಾಜೇಂದ್ರನ್, ಕಣ್ಣನ್ ಮಣಿಯನ್ನು ತಿರುನೆಲ್ವೇಲಿ ಯಲ್ಲಿ ಬಂಧಿಸಿ ಅವರಿಂದ 2 ಕೆ.ಜಿ. ಚಿನ್ನಾಭರಣ ವಶಪಡಿಸಿಕೊಳ್ಳಲಾಗಿತ್ತು. ಶುಕ್ರವಾರ ಉಳಿದ ಚಿನ್ನಾಭರಣ ವಶಪಡಿಸಿ ಕೊಂಡಿದ್ದು, ದರೋಡೆಯಾದ ಎಲ್ಲ ಚಿನ್ನ ಸಿಕ್ಕಂತಾಗಿದೆ.
ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕೆ. ಸಿ ರೋಡ್ನಲ್ಲಿರುವ ಕೃಷಿ ಸಹಕಾರಿ ಬ್ಯಾಂಕ್ಗೆ ಇದೇ ತಿಂಗಳ 17ರಂದು ಬೆಳಗ್ಗೆ 11.30ರ ಸುಮಾರಿಗೆ ಮುಸುಕುಧಾರಿ ತಂಡವೊಂದು ಪಿಸ್ತೂಲ್ ಹಾಗೂ ಚಾಕುಗಳೊಂದಿಗೆ ನುಗ್ಗಿತ್ತು. ಅಲ್ಲಿದ್ದ ಬ್ಯಾಂಕ್ ನೌಕರರನ್ನು ಬೆದರಿಸಿ ಸುಮಾರು 4 ಕೋಟಿ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ನಂತರ ಆರೋಪಿಗಳ ಬಂಧನಕ್ಕೆ 6ಕ್ಕೂ ಹೆಚ್ಚು ವಿಶೇಷ ತಂಡಗಳನ್ನು ರಚಿಸಿ ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಈಗಾಗಲೇ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಉಳಿದವರ ಬಂಧನಕ್ಕೆ ಶೋಧಕಾರ್ಯ ಮುಂದುವರೆಸಿದ್ದಾರೆ.
ಗುರುವಾರ ಕೋರ್ಟ್ಗೆ ಹಾಜರುಪಡಿಸಲಾಗಿದ್ದ ಮುರುಗೆಂಡಿ ಥೇವರ್, ಯೋಸುವಾ ರಾಜೇಂದ್ರನ್ನನ್ನು ಪೊಲೀಸರು ಶುಕ್ರವಾರ ಸ್ಥಳ ಮಹಜರು ನಡೆಸಿದರು. ಕೆ.ಸಿರೋಡ್ ಬ್ಯಾಂಕ್ ಶಾಖೆಯಿಂದ 1.5 ಕಿ. ಮೀ. ದೂರದ ಅಲಂಕಾರಗುಡ್ಡೆ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದಿದ್ದು ಅಲ್ಲಿ ಸ್ಥಳ ಮಹಜರು ನಡೆಸಿದರು. ಬುಧವಾರ ಇದೇ ಪ್ರದೇಶದಲ್ಲಿ ಸ್ಥಳ ಮಹಜರು ಮಾಡುವಾಗ ಕಣ್ಣ ಮಣಿ ಪರಾರಿಯಾಗಲು ಯತ್ನಿಸಿ ಗುಂಡೇಟಿಗೆ ಒಳಗಾಗಿದ್ದ. ದರೋಡೆಗೆ ಕೆಲವೇ ನಿಮಿಷಗಳ ಮೊದಲು ಈ ಪ್ರದೇಶದಲ್ಲಿ ಕುಳಿತು ಯೋಜನೆ ರೂಪಿಸಿದ್ದರು. ಬಳಿಕ ತಲಪಾಡಿ ಟೋಲ್ ಫ್ಲಾಝಾಕ್ಕೆ ಕರೆದೊಯ್ದು ಅಲ್ಲಿಯೂ ಸ್ಥಳ ಮಹಜರು ಮಾಡಲಾಯಿತು. ಇನ್ನು ಕೋಟೆಕಾರು ಬ್ಯಾಂಕ್ನ ದರೋಡೆ ಪ್ರಕರಣದ ಪ್ರಮುಖ ಸೂತ್ರಧಾರ ಮತ್ತು ಸಂಚುಕೋರನನ್ನು ಮಂಗಳೂರು ಪೊಲೀಸರು ಶೋಧದಲ್ಲಿದ್ದಾರೆ.
2 Comments