LATEST NEWS
ಚೆನ್ನ ಫಾರೂಕ್ ಕಲ್ಲಡ್ಕ ಹತ್ಯೆ ಪ್ರಕರಣ ಇಬ್ಬರು ಆರೋಪಿಗಳ ಬಂಧನ

ಮಂಗಳೂರು ನವೆಂಬರ್ 06: ಫಾರೂಕ್ ಯಾನೆ ಚೆನ್ನ ಫಾರೂಕ್ ಕಲ್ಲಡ್ಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಟ್ವಾಳ ಎಸ್.ಐ ಅವಿನಾಶ್ ನೇತೃತ್ವದ ತಂಡ ತೊಕ್ಕೊಟ್ಟಿನಲ್ಲಿ ಬಂಧಿಸಿದೆ. ಬಂಧಿತರನ್ನು ಮೂಲತಃ ನಂದಾವರ ನಿವಾಸಿ ಪ್ರಸ್ತುತ ತೊಕ್ಕೊಟ್ಟುವಿನಲ್ಲಿ ವಾಸವಾಗಿರುವ ಹಫೀಸ್ ಯಾನೆ ಅಪ್ಪಿ ಹಾಗೂ ಅಕ್ಕರಂಗಡಿ ನಿವಾಸಿ ಇರ್ಶಾದ್ ಎಂದು ಗುರುತಿಸಲಾಗಿದೆ.
ಅಕ್ಟೋಬರ್ 22ರಂದು ಮೆಲ್ಕಾರ್ ಸಮೀಪದ ಗುಡ್ಡೆ ಅಂಗಡಿ ಎಂಬಲ್ಲಿ ಕಲ್ಲಡ್ಕ ನಿವಾಸಿ ಫಾರೂಕ್ ಯಾನೆ ಚೆನ್ನ ಫಾರೂಕ್ ಎಂಬಾತ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಬಂದ ಸ್ನೇಹಿತ ಖಲೀಲ್ ಮತ್ತು ತಂಡ ಡಿಕ್ಕಿ ಹೊಡೆಸಿ ಅಟ್ಟಾಡಿಸಿಕೊಂಡು ಕೊಚ್ಚಿ ಕೊಲೆ ನಡೆಸಿತ್ತು. ಸ್ನೇಹಿತರ ನಡುವೆ ಹಣದ ಮತ್ತು ವೈಯಕ್ತಿಕ ವಿಚಾರದಲ್ಲಿ ಮನಸ್ತಾಪ ಉಂಟಾಗಿ ಕೊಲೆ ನಡೆಸಿದ್ದ ಎಂದು ಹೇಳಲಾಗಿತ್ತು.

ಖಲೀಲ್ ಮತ್ತು ಆತನ ಸ್ನೇಹಿತರಾದ ಹಫೀಸ್ ಯಾನೆ ಅಪ್ಪಿ ಹಾಗೂ ಇರ್ಶಾದ್ ಕೊಲೆ ನಡೆಸಿ ಪರಾರಿಯಾಗಿದ್ದನ್ನು ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದರು. ಕೊಲೆ ನಡೆಸಿದವರ ಬಗ್ಗೆ ಮಾಹಿತಿ ಪಡೆದ ಪೋಲೀಸರು ಆರೋಪಿಗಳ ಬಂಧನಕ್ಕೆ ಎರಡು ತಂಡ ರಚಿಸಿದ್ದರು. ಕೊಲೆ ನಡೆಸಿ ಬಳಿಕ ಬೆಂಗಳೂರು ಕಡೆಗೆ ಪರಾರಿಯಾಗಲು ಯತ್ನಿಸುತ್ತಿರುವ ಬಗ್ಗೆ ಪೋಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಕಾರ್ಯಪ್ರವೃತ್ತರಾದ ನಗರ ಠಾಣಾ ಎಸ್.ಐ. ಅವಿನಾಶ್ ಹಾಗೂ ಗ್ರಾಮಾಂತರ ಠಾಣಾ ಎಸ್.ಐ ಪ್ರಸನ್ನ ಬಿಸಿರೋಡಿನಿಂದ ಗುಂಡ್ಯ ವರೆಗೆ ವಾಹನವನ್ನು ಬೆನ್ನಟ್ಟಿಕೊಂಡು ಹೋಗಿ ಗುಂಡ್ಯ ತಲುಪುತ್ತಿದ್ದಂತೆ ಖಲೀಲ್ ನ ವಾಹನಕ್ಕೆ ಅಡ್ಡಲಾಗಿ ಇರಿಸಿ ಬಂಧಿಸಲು ಮುಂದಾಗುತ್ತಾರೆ. ಖಲೀಲ್ ಮತ್ತು ಆತನ ಸಹಚರರಾದ ಹಫೀಸ್ ಮತ್ತು ಇರ್ಶಾದ್ ಪೋಲೀಸರ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ಬಂಧನದ ವೇಳೆ ಪೋಲೀಸ್ ಮತ್ತು ಆರೋಪಿಗಳ ನಡುವೆ ಗಲಾಟೆ ಯಲ್ಲಿ ಗ್ರಾಮಾಂತರ ಎಸ್.ಐ. ಪ್ರಸನ್ನ ಅವರು ಗಾಯಗೊಂಡಿದ್ದರು.