Connect with us

LATEST NEWS

ಮಂಗಳೂರಿನಲ್ಲಿ ಸುಳ್ಳು ಸತ್ಯಕ್ಕಿಂತ ವೇಗವಾಗಿ ಹರಡುತ್ತದೆ – ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು, ಜೂನ್ 25: ಮಂಗಳೂರಿನಲ್ಲಿ ಸುಳ್ಳು ಸತ್ಯಕ್ಕಿಂತ ವೇಗವಾಗಿ ಹರಡುತ್ತದೆ. ನಿಜ ನೂರು ಜನಕ್ಕೆ ಹೋದರೆ ಸುಳ್ಳು ಸಾವಿರ ಜನಕ್ಕೆ ತಲುಪುತ್ತದೆ. ನಿಜ ಒಂದು ಗಂಟೆಯಲ್ಲಿ ಪ್ರಯಾಣಿಸಿದರೆ, ಸುಳ್ಳು ಅರ್ಧ ಸೆಕೆಂಡ್‍ನಲ್ಲಿ ರವಾನೆಯಾಗುತ್ತದೆ. ನಾವು ಮಾತನಾಡುತ್ತಿರುವಂತೆಯೇ ಅದರ ವಿರುದ್ದವಾಗಿ ಸುಳ್ಳು ಸಿದ್ಧವಾಗಿರುತ್ತದೆ. ಯಾವುದು ನಿಜ, ಸುಳ್ಳು ಎಂದು ಜನಕ್ಕೆ ಅರ್ಥವಾಗುವಂತಿರುವುದಿಲ್ಲ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.


ನಗರದ ಪ್ರೆಸ್‍ಕ್ಲಬ್‍ನಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಪತ್ರಕರ್ತ ವಿಜಯ ಕೋಟ್ಯಾನ್‍ರಿಗೆ ಪ್ರಸಕ್ತ ಸಾಲಿನ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಮಂಗಳೂರಿನಂತ ಪ್ರದೇಶದಲ್ಲಿ ನಾವು ಸಾಮಾನ್ಯವಾಗಿ ವರದಿಗಾರಿಕೆ ಮಾಡಬೇಕಾದರೆ ಏನು ಬೇಕು ಎಂಬುದನ್ನು ನಾವು ಅರಿಯಬೇಕು. ವರದಿಯನ್ನು ತಲುಪಿಸುವ ವೇಗಕ್ಕಿಂತ ನಿಖರತೆ ಮುಖ್ಯ. ಬಾಯಿಗೆ ಬಂದದ್ದನ್ನು ಹೇಳಿ ಬಿಟ್ಟು ಅದರಿಂದ ಇನ್ನೊಂದು ಅನ್ಯಾಯ ಆಗಲು ಅವಕಾಶ ನೀಡುವ ಬದಲು ಬರೆಯುವ ಸುದ್ದಿಯ ನಿಖರತೆ ಮುಖ್ಯವಾಗಿರುತ್ತದೆ. ಯಾವುದೇ ಸಮಸ್ಯೆಗಳ ಸಂದರ್ಭ ಸಮಾಜದಲ್ಲಿ ಸಮತೋಲನ ಕಾಯ್ದುಕೊಳ್ಳುವುದಕ್ಕಿಂತಲೂ ಸತ್ಯವನ್ನು ಎತ್ತಿ ತೋರಿಸುವುದು ಪ್ರಮುಖವಾಗಬೇಕು. ಸಮಾಜದಲ್ಲಿ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ ಆರೋಪಿ ಮತ್ತು ಸಂತ್ರಸ್ತರನ್ನು ಒಂದೇ ಆಗಿ ಪರಿಗಣಿಸಲಾಗದು. ಸತ್ಯದ ಬಗ್ಗೆ ಬರೆಯುವಾಗ ಸಮಸ್ಯೆ ಖಂಡಿತಾ ಬರುತ್ತದೆ. ಆದರೆ ಸತ್ಯ ಬರೆಯುವಾಗ ಯಾವುದೇ ರೀತಿಯ ಯಾವುದೇ ಭಯ ಬೇಡ. ಜತೆಗೆ ಸಹಾನುಭೂತಿ ಬರವಣಿಗೆಯಲ್ಲಿ ಇದ್ದಾಗ ಯಾರಿಗೂ ಸಮಸ್ಯೆ ಬರುವುದಿಲ್ಲ. ನಾನು ನನ್ನ ಆತ್ಮಸಾಕ್ಷಿಗೆ ಸಮಧಾನ ಹೇಳಬೇಕೆಂಬುದರ ಅರಿವಿದ್ದಾಗ ಯಾವುದೇ ಸಮಸ್ಯೆ ಎದುರಾಗದು. ಸಮಾಜವೂ ನಿಧಾನಕ್ಕೆ ಗುಣಮುಖವಾಗುತ್ತದೆ. ಬೆಳಕು ಬಂದಾಗ ಕತ್ತಲು ಮಾಯವಾಗುವಂತೆ, ಆ ಬೆಳಕು ಪತ್ರಿಕೋದ್ಯಮವಾಗಬೇಕು. ಆ ಶಕ್ತಿಯನ್ನು ಪತ್ರಕರ್ತರು ತುಂಬಿಲ್ಲವಾದರೆ, ಸಮಾಜದಲ್ಲಿನ ಕತ್ತಲು ಹೋಗದು. ಇದರಿಂದ ಶೇ. 98 ಜನ ಶೇ. 2ರಷ್ಟು ಜನರಿಂದ ತೊಂದರೆಗೆ ಒಳಗಾಗುವುದು ಮುಂದುವರಿಯುತ್ತಲೇ ಸಾಗುತ್ತದೆ ಎಂದು ಎಚ್ಚರಿಕೆಯ ನುಡಿಗನ್ನಾಡಿದರು.


ಇಲ್ಲಿನ ಶೇ. 98 ಜನರಿಗೆ ಶೇ. 2ರಷ್ಟು ಮಂದಿಯಿಂದ ಆಗುತ್ತಿರುವ ಸಮಸ್ಯೆ ಒಂದು ರೀತಿಯ ರೋಗವಾಗಿದೆ. ಇದನ್ನು ಪತ್ರಿಕೋದ್ಯಮದ ಮೂಲಕವೂ ಗುಣಪಡಿಸಬಹುದು. ಆ ನಿಟ್ಟಿನಲ್ಲಿ ಮಂಗಳೂರು ಪತ್ರಕರ್ತರು ನಡೆಸುತ್ತಿರುವ ಬ್ರಾಂಡ್ ಮಂಗಳೂರು ಕೂಡಾ ಈ ಚಿಕಿತ್ಸೆಯ ಒಂದು ಪ್ರಕ್ರಿಯೆ ಎಂದರು. ವೇದಿಕೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಷಾ, ಪತ್ರಿಕಾ ಭವನ ಟ್ರಸ್ಟ್‍ನ ಅಧ್ಯಕ್ಷ ರಾಮಕೃಷ್ಣ ಆರ್. ಉಪಸ್ಥಿತರಿದ್ದರು.

ಮಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಪ್ರಶಸ್ತಿ ವಿಜೇತರ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *