LATEST NEWS
ಫೇಸ್ ಬುಕ್ ಪೋಸ್ಟ್ ಗೆ ಯುವಕನ ಬಂಧಿಸಿ ಕಿರುಕುಳ ನೀಡಿದ ಪೊಲೀಸರು

ಫೇಸ್ ಬುಕ್ ಪೋಸ್ಟ್ ಗೆ ಯುವಕನ ಬಂಧಿಸಿ ಕಿರುಕುಳ ನೀಡಿದ ಪೊಲೀಸರು
ಮಂಗಳೂರು ಸೆಪ್ಟೆಂಬರ್ 7: ಕೇರಳದಲ್ಲಿನ ಪ್ರವಾಹ ಸ್ಥಿತಿ ಕುರಿತು ಮೂಢನಂಬಿಕೆಯಿಂದ ಕೂಡಿದ ಹೇಳಿಕೆಯನ್ನು ಫೇಸ್ ಬುಕ್ನಲ್ಲಿ ಪ್ರಶ್ನಿಸಿದ್ದಕ್ಕೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಮುಸ್ಲಿಂ ಯುವಕನೊಬ್ಬನನ್ನು ಬಂಧಿಸಿ ಕಿರುಕುಳ ನೀಡಿದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಬಂಧಿತ ವ್ಯಕ್ತಿಯನ್ನು ಬಂಟ್ವಾಳ ತಾಲ್ಲೂಕಿನ ಸಾಲೆತ್ತೂರು ನಿವಾಸಿಯಾಗಿರುವ ಅಶ್ರಫ್ ಎಂ.ಸಾಲೆತ್ತೂರು ಎಂದು ಗುರುತಿಸಲಾಗಿದೆ. ಮಂಗಳೂರಿನ ಬಂದರು ಠಾಣೆ ಪೊಲೀಸರು ಅಶ್ರಫ್ ಎಂ.ಸಾಲೆತ್ತೂರು ಬಂಧಿಸಿದ ನಂತರ ಅನಧಿಕೃತವಾಗಿ ಲಾಕಪ್ನಲ್ಲಿ ಇರಿಸಿ ಐದು ದಿನಗಳ ಕಾಲ ಜೈಲಿಗೆ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಋತುಮತಿಯಾದ ಮಹಿಳೆಯರನ್ನು ಶಬರಿಮಲೆ ಪ್ರವೇಶಿಸಲು ಕೋರ್ಟು ಅವಕಾಶ ನೀಡಿದ್ದೇ ಕೇರಳದಲ್ಲಿ ನೆರೆ ಬರಲು ಕಾರಣ. ಹಾಗಾದರೆ ಪರಶುರಾಮನ ಸೃಷ್ಟಿ ತುಳು ನಾಡಿನಲ್ಲಿ ನೆರೆ ಬರಲು ಕಾರಣವೇನು’ ಎಂದು ಪ್ರಶ್ನಿಸಿ ಅಶ್ರಫ್ ಆಗಸ್ಟ್ 19ರ ಸಂಜೆ ತನ್ನ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಈ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅಗಸ್ಟ್ 21ರಂದು ಎಫ್ಐಆರ್ ದಾಖಲು ಮಾಡಲಾಗಿತ್ತು. ಈ ಪ್ರಕರಣದಲ್ಲಿ ಠಾಣೆಯ ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಎಂ.ಸುಂದರ ಅವರೇ ದೂರುದಾರರು. ಬರಹದ ಮೂಲಕ ಶಾಂತಿ ಕದಡಲು ಮತ್ತು ಗಲಭೆ ಸೃಷ್ಟಿಸಲು ಯತ್ನ, ಕೋಮು ಗಲಭೆ ಸೃಷ್ಟಿಸಲು ಯತ್ನ ಮತ್ತು ಕ್ರಿಮಿನಲ್ ಮಧ್ಯಪ್ರವೇಶ ಮಾಡಿದ ಆರೋಪದಡಿ ಅಶ್ರಫ್ ವಿರುದ್ಧ ಪ್ರಕರಣ ದಾಖಲು ಮಾಡಿ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿದೆ.
ಮಂಗಳೂರಿನ ಬಂದರು ಠಾಣೆ ಪೊಲೀಸರ ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅಶ್ರಫ್ ಎಂ.ಸಾಲೆತ್ತೂರು ಈಗ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದು, ಇವರು ಮತ್ತೆ ಫೇಸ್ ಬುಕ್ನಲ್ಲಿ ಅಭಿಪ್ರಾಯ ಪ್ರಕಟಿಸುತ್ತಿರುವುದಕ್ಕೆ ನೋಟಿಸ್ ಜಾರಿ ಮಾಡಿರುವ ಪೊಲೀಸರು, ಜಾಮೀನು ರದ್ಧುಗೊಳಿಸುವಂತೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.
ಈ ನಡುವೆ ಪೊಲಿಸರ ಈ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಈ ಕ್ರಮದ ವಿರುದ್ಧ ಹಲವರು ಫೇಸ್ ಬುಕ್, ವಾಟ್ಸ್ ಆ್ಯಪ್ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ‘ಜಸ್ಟೀಸ್ ಫಾರ್ ಅಶ್ರಫ್’ ಎಂಬ ಅಭಿಯಾನ ಆರಂಭಿಸಿದ್ದಾರೆ.