ಕೊಯಮತ್ತೂರು ಎಪ್ರಿಲ್ 26: ಸಿರುಮುಗೈ ಅರಣ್ಯ ವ್ಯಾಪ್ತಿಯ ಲಿಂಗಾಪುರಂ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ತಾಯಿಯಿಂದ ಬೇರ್ಪಟ್ಟ ಆನೆ ಮರಿಯೊಂದು ರಸ್ತೆಯಲ್ಲಿ ಅಲೆದಾಡುತ್ತಿದ್ದು, ಅದನ್ನು ಮರಳಿ ತಾಯಿಯ ಬಳಿ ಸೇರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಕೆಲವೇ ತಿಂಗಳುಗಳ ಪ್ರಾಯದ ಆನೆ ಮರಿಯು ಶನಿವಾರ (ಏಪ್ರಿಲ್ 25) ಬೆಳಿಗ್ಗೆ ಸಿರುಮುಗೈ-ಲಿಂಗಾಪುರಂ ರಸ್ತೆಯಲ್ಲಿ ಒಂಟಿಯಾಗಿ ಓಡಾಡುತ್ತಿರುವುದು ಗ್ರಾಮಸ್ಥರ ಗಮನಕ್ಕೆ ಬಂದಿದೆ. ಭವಾನಿ ನದಿಯ ಹಿನ್ನೀರಿನ ಕಡೆಗೆ ಆನೆಗಳ ಹಿಂಡು ಸಾಗುತ್ತಿದ್ದ ವೇಳೆ ಬೆಳಿಗ್ಗೆ 7.30ರ ಸುಮಾರಿಗೆ ಈ ಮರಿಯು ದಾರಿ ತಪ್ಪಿ ಮಾನವ ವಾಸಸ್ಥಳಕ್ಕೆ ಪ್ರವೇಶಿಸಿದೆ ಎನ್ನಲಾಗಿದೆ.
ಗ್ರಾಮಸ್ಥರು ನೀಡಿದ ಮಾಹಿತಿಯ ಮೇರೆಗೆ ಸಿರುಮುಗೈ ಅರಣ್ಯ ಶ್ರೇಣಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಹೆಜ್ಜೆಗುರುತುಗಳನ್ನು ಅನುಸರಿಸಿ ತಾಯಿ ಆನೆ ಇರುವ ಹಿಂಡನ್ನು ಪತ್ತೆಹಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಮತ್ತೊಂದೆಡೆ ಅರಣ್ಯದ ಅಂಚಿನಲ್ಲಿ ಅಲೆದಾಡುತ್ತಿರುವ ಮರಿಯ ಮೇಲೆ ಅರಣ್ಯ ಇಲಾಖೆಯ ಪ್ರತ್ಯೇಕ ತಂಡವು ನಿಗಾ ಇಟ್ಟಿದೆ. ಆನೆ ಮರಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.