LATEST NEWS
ಮತದಾರರ ಜಾಗೃತಿಯಲ್ಲಿ ಸ್ವಚ್ಚ ಭಾರತ್ ನ್ನು ಮರೆತ ಚುನಾವಣಾ ಆಯೋಗ

ಮತದಾರರ ಜಾಗೃತಿಯಲ್ಲಿ ಸ್ವಚ್ಚ ಭಾರತ್ ನ್ನು ಮರೆತ ಚುನಾವಣಾ ಆಯೋಗ
ಉಡುಪಿ ಮಾರ್ಚ್ 24: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾರರಿಗೆ ಅನುಕೂಲವಾಗುವಂತೆ ಕೇಂದ್ರ ಚುನಾವಣಾ ಆಯೋಗ ಪ್ಯಾರಾಗ್ಲೈಡಿಂಗ್ ಮೂಲಕ ಕರಪತ್ರ ಎಸೆದಿರುವ ಈಗ ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಸ್ವೀಪ್ ಸಮಿತಿ ಜಿಲ್ಲಾಡಳಿತ ” ಇವಿಎಂ ಮತ್ತು ವಿವಿಪಿಎಟಿ ಬಳಸಿ ನಮ್ಮ ಮತ ಚಲಾಯಿಸುವುದು ಹೇಗೆ ? ” ಎಂಬ ಮಾಹಿತಿಯುಳ್ಳ ಕರಪತ್ರಗಳನ್ನು ಪ್ಯಾರಾಗ್ಲೈಡಿಂಗ್ ಮೂಲಕ ಕೆಳಗೆಸೆಯಲಾಗಿತ್ತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಚಭಾರತ್ ಕಲ್ಪನೆಯನ್ನು ಚುನಾವಣಾ ಆಯೋಗ ನಿರ್ಲಕ್ಷಿಸಿದ್ದು,

ಈ ರೀತಿಯಾಗಿ ಕರಪತ್ರಗಳನ್ನು ಬಾನೆತ್ತರದಿಂದ ಕೆಳಗೆ ಎಸೆಯುವುದರಿಂದ ಕರಪತ್ರಗಳು ಮತದಾರರ ಕೈ ಸೇರುವ ಬದಲು ವಾಣಿಜ್ಯ ಸಂಕೀರ್ಣ, ಮನೆಗಳ ಮೇಲೆ , ಮರದ ಕೊಂಬೆಗಳ ಮೇಲೆ , ಅಲ್ಲದೆ ರಸ್ತೆಗಳ ಮೇಲೆ ಬಿದ್ದಿವೆ. ಕೌತುಕ ದಿಂದ ಕೆಲಸ ಸಾರ್ವಜನಿಕರು ಕರಪತ್ರಗಳನ್ನು ಕೈಗೆತ್ತಿಕೊಂಡರೆ, ಕೆಲವರು ಅದರ ಗೋಜಿಗೆ ಹೋಗಲಿಲ್ಲ. ಈ ಹಿನ್ನಲೆಯಲ್ಲಿ ರಸ್ತೆಯ ಮೇಲೆ ಬಿದ್ದ ಕರಪತ್ರಗಳನ್ನು ಗುಡಿಸಿ ಸ್ವಚ್ಚ ಮಾಡುವವರು ಯಾರು ಎನ್ನುವುದು ಈಗ ಪ್ರಶ್ನೆಯಾಗಿದೆ.
ಕೇಂದ್ರ ಚುನಾವಣಾ ಆಯೋಗವೇ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯನ್ನು ಮರೆತು ರಸ್ತೆ ಮೇಲೆಲ್ಲ ಚುನಾವಣಾ ಮಾಹಿತಿ ಕರಪತ್ರಗಳನ್ನು ಬಿಸಾಕುವುದರ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಕರಪತ್ರಗಳನ್ನು ಪ್ಯಾರಾಗ್ಲೈಡಿಂಗ್ ಬದಲು ಕಾಲೇಜು ವಿಧ್ಯಾರ್ಥಿಗಳ ಹಾಗೂ ಸಾರ್ವಜನಿಕರ ಕೈಗೆ ನೇರವಾಗಿ ಕೊಡುವ ಮೂಲಕ ಸ್ವಚ್ಚಭಾರತ್ ಯೋಜನೆಗೆ ತಮ್ಮ ಸಹಯೋಗ ನೀಡಬಹುದಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.