DAKSHINA KANNADA
ಬಾಡಿಗೆ ಓಡಿಸಲು ಲಾರಿ ಕೊಟ್ಟರೆ ಅದನ್ನು ಅಡವಿಟ್ಟ ಚಾಲಕ

ಪುತ್ತೂರು ಜೂನ್ 18: ಲಾರಿಯನ್ನು ಬಾಡಿಗೆ ಓಡಿಸಲು ನೀಡಿದರೆ ಡ್ರೈವರ್ ಮಾತ್ರ ಅದನ್ನು ತೆಗೆದುಕೊಂಡು ಹೋಗಿ ಅಡವಿಟ್ಟ ಘಟನೆ ಪುತ್ತೂರಿನಲ್ಲಿ ನಡೆದಿದ್ದು, ಇದೀಗ ಈ ಬಗ್ಗೆ ವಿಚಾರಿಸಲು ಹೋದ ಮಾಲಕನಿಗೆ ಜೀವ ಬೆದರಿಕೆ ಹಾಕಿರುವುದಾಗಿ ಸೋಮವಾರ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ನಿವಾಸಿ ಫರ್ವೀಝ್ ಎಂ. ಎಂಬವರು ದೂರು ನೀಡಿದ್ದು, ಲಾರಿ ಚಾಲಕ ಅಸಾಸುದ್ದೀನ್ ಫೈರೋಝ್ ಮತ್ತು ಮಂಗಳೂರಿನ ಕಿರಣ್ ಪ್ರಕರಣದ ಆರೋಪಿಗಳು ಎಂದು ತಿಳಿದುಬಂದಿದೆ.
ಕಳೆದ ಮಾರ್ಚ್ನಲ್ಲಿ ಲಾರಿ ಮಾಲೀಕರು ಚಾಲಕನ್ನು ನೇಮಿಸಿ ಲಾರಿಯನ್ನು ಆತನ ಕೈಗೆ ಕೊಟ್ಟಿದ್ದರು. ದಿನ ಉರುಳಿದರೂ ಚಾಲಕ ಬಾಡಿಗೆ ಹಣ ಮಾಲೀಕರಿಗೆ ನೀಡದೆ ಮುಂದೂಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ವಿಚಾರಿಸಿದ ಮಾಲೀಕರು ಲಾರಿಯನ್ನು ಮರಳಿಸುವಂತೆ ಕೇಳಿದಾಗ ಲಾರಿಯನ್ನೂ ನೀಡದೆ ದಬಾಯಿಸಿದ ಎನ್ನಲಾಗಿದೆ. ಕೆಲ ದಿನಗಳ ಬಳಿಕ ಮತ್ತೆ ವಿಚಾರಿಸಿದಾಗ ಲಾರಿಯನ್ನು ಮಂಗಳೂರಿನ ವ್ಯಕ್ತಿಯೊಬ್ಬರ ಬಳಿ ಇಟ್ಟಿದ್ದೇನೆ. ಬೇಕಿದ್ದರೆ ನೀವೇ ಪಡೆದುಕೊಳ್ಳಿ ಎಂಬ ಹಾರಿಕೆ ಉತ್ತರ ನೀಡಿದ್ದಾನೆ.

ಇದರಂತೆ ಲಾರಿ ಮಾಲೀಕ ತನ್ನ ಗಾಡಿಗೆ ಲೋನ್ ನೀಡಿದ ಸಂಸ್ಥೆಯ ಪ್ರತಿನಿಧಿಯ ಜತೆಗೂಡಿ ಮಂಗಳೂರಿನ ವ್ಯಕ್ತಿಯ ಬಳಿಗೆ ತೆರಳಿ ವಿಚಾರಿಸಿದಾಗ ಆತ ಲಾರಿ ತನ್ನ ಬಳಿ ಇರುವುದನ್ನು ಒಪ್ಪಿಕೊಂಡಿದ್ದಾನಾದರೂ ಲಾರಿಯನ್ನು ಮರಳಿಸಲು ನಿರಾಕರಿಸಿದ್ದಾನೆ ಮತ್ತು ಗಾಡಿ ಕೇಳಿದ ಮಾಲೀಕರುಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಬಗ್ಗೆ ಲಾರಿ ಮಾಲೀಕರು ತಾನು ನೇಮಿಸಿದ್ದ ಚಾಲಕ ಮತ್ತು ಲಾರಿಯನ್ನು ಇಟ್ಟುಕೊಂಡಿರುವ ವ್ಯಕ್ತಿಯ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.