ಧರ್ಮಸ್ಥಳ ಅಗಸ್ಟ್ 04: ಅನಾಮಿಕ ವ್ಯಕ್ತಿ ನೀಡಿದ ದೂರಿನ ಮೇರೆಗೆ ಆತ ತೋರಿಸಿದ ಜಾಗದಲ್ಲಿನ ಶವಗಳ ಉತ್ಘನನ ಕಾರ್ಯ ಇಂದು ಅಂತಿಮ ಘಟ್ಟಕ್ಕೆ ತಲುಪಿದೆ. ಉಳಿದ 3 ಜಾಗಗಳಲ್ಲಿ ಉತ್ಖನನ ಕಾರ್ಯ ಇಂದು ನಡೆಯುವ ಸಾಧ್ಯತೆ ಇದೆ.
ಈಗಾಗಲೇ ದೂರುದಾರ ಅನಧಿಕೃತವಾಗಿ ಶವ ಹೂತಿದ್ದೇನೆಂದು ದೂರುಕೊಟ್ಟ 10 ಸ್ಥಳಗಳಲ್ಲಿ ಶೋಧಕಾರ್ಯ ಮುಗಿದಿದೆ. ಇಂದಿನಿಂದ 11, 12 ಹಾಗೂ 13 ನೇ ಸ್ಥಳದ ಶೋಧಕಾರ್ಯ ನಡೆಯಲಿದೆ. ಬೆಳ್ತಂಗಡಿಯ ಎಸ್ ಐಟಿ ಕಚೇರಿಗೆ ಬಂದು ಎಸ್ ಐಟಿ ಅಧಿಕಾರಿಗಳು ಹಾಗೂ ದೂರುದಾರ ಬರಲಿದ್ದಾನೆ. ಧರ್ಮಸ್ಥಳ ಹಾಗೂ ಉಜಿರೆ ಮಾರ್ಗದ ಪಕ್ಕದಲ್ಲಿಯೇ ಇನ್ನು ಮುಂದಿನ 3 ಜಾಗಗಳು ಇವೆ.
ಈ ವರೆಗೆ ದೂರುದಾರ ತೋರಿಸಿದ 6 ನೇ ಸ್ಥಳದಲ್ಲಿಮಾತ್ರ ಮೂಳೆಗಳು ಸಿಕ್ಕಿದ್ದವು. ಹೊರತಾಗಿ ಯಾವ ಸ್ಥಳದಲ್ಲಿಯೂ ಅಸ್ಥಿಪಂಜರದ ಕುರುಹು ಸಿಕ್ಕಿರಲಿಲ್ಲ. ಇದೀಗ 13 ನೇ ಜಾಗದಲ್ಲಿ ಬಹಳ ಹೆಣ ಹೂತಿದ್ದೇನೆ, ಅಸ್ಥಿ ಪಂಜರ ಸಿಕ್ಕೇಸಿಗುತ್ತದೆ ಎಂಬ ಆತ್ಮವಿಶ್ವಾಸದಲ್ಲಿ ದೂರುದಾರ ಇದ್ದಾನೆಂದು ಹೇಳಲಾಗಿದೆ. ಹೀಗಾಗಿ ಕೊನೆ ಸ್ಪಾಟ್ ಬಗ್ಗೆ ಎಲ್ಲರಿಗೂ ಕುತೂಹಲ ಹೆಚ್ಚಿದೆ.
ಗ್ರೌಂಡ್ ಪೆನೆಟ್ರೇಟಿಂಗ್ ರೇಡಾರ್ ಬಳಸಿ, ಅಸ್ಥಿಪಂಜರ ಹುಡುಕಾಟ ನಡೆಸಲು ಬೇಡಿಕೆ ಹೆಚ್ಚಾಗಿದೆ.
ದೂರುದಾರ ತೋರಿಸಿದ ಸ್ಥಳಗಳಾದ 9 , 7 ಹಾಗೂ 5 ನೇ ಜಾಗಗಳಲ್ಲಿ ಬಹಳ ನಿರೀಕ್ಷೆ ಇಡಲಾಗಿತ್ತು. ಆದರೆ ಯಾವುದೇ ಕುರುಹು ಸಿಗದ ಕಾರಣ ಜಿಪಿಆರ್ ಬಳಕೆ ಮಾಡಲು ದೂರುದಾರ ಹಾಗೂ ಆತನ ಪರ ವಕೀಲರು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಕಲ್ಲೇರಿಯ 10 ರಿಂದ 15 ವರ್ಷದ ಬಾಲಕಿಯನ್ನು ಹೂತುಹಾಕಿದ್ದಾನೆ ಎನ್ನಲಾಗಿರುವ ಕಲ್ಲೇರಿಯ ಸ್ಥಳ ಕೂಡಾ ಅಗೆಯುವ ಸಾಧ್ಯತೆ ಇದೆ.