ಬೆಳ್ತಂಗಡಿ ಡಿಸೆಂಬರ್ 10: ಶ್ರೀಧರ್ಮಸ್ಥಳ ಕ್ಷೇತ್ರದಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವ ಇಂದಿನಿಂದ ಪ್ರಾರಂಭವಾಗಲಿದೆ. ಇಂದು ರಾತ್ರಿ ಹೊಸಕಟ್ಟೆ ಉತ್ಸವದೊಂದಿಗೆ ಆರಂಭಗೊಂಡು ಐದು ದಿನಗಳ ಲಕ್ಷ ದಿಪೋತ್ಸವ ಸಂಭ್ರಮ ನಡೆಯಲಿದ್ದು, ಕೊರೊನಾ ಹಿನ್ನಲೆ ಈ ಬಾರಿ ಸಾಮಾಜಿಕ ಜಾಲತಾಣಗಳ ಹಾಗೂ ಸ್ಥಳೀಯ ಟಿವಿ ವಾಹಿನಿಗಳ ಮೂಲಕ ಮನೆಯಲ್ಲೇ ಕುಳಿದು ಲಕ್ಷದೀಪೋತ್ಸವ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.


ಡಿಸೆಂಬರ್ 10ರಂದು ರಾತ್ರಿ 9ಕ್ಕೆ ಹೊಸಕಟ್ಟೆ ಉತ್ಸವ, 11ರಂದು ಕೆರೆಕಟ್ಟೆ ಉತ್ಸವ, 12ರಂದು ಲಲಿತೋದ್ಯಾನ ಉತ್ಸವ, 13ರಂದು ಕಂಚಿಮಾರುಕಟ್ಟೆ ಉತ್ಸವ, 14ರಂದು ಗೌರಿಮಾರುಕಟ್ಟೆ ಉತ್ಸವಗಳು ನಡೆಯಲಿವೆ. ದೀಪೋತ್ಸವ ಪ್ರಯುಕ್ತ 13 ಮತ್ತು 14ರಂದು 88ನೇ ವರ್ಷದ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನಗಳು, 15ರಂದು ಸಂಜೆ 6.30ರಿಂದ ಮಹೋತ್ಸವ ಸಭಾಭವನದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜಾ ಕಾರ್ಯಕ್ರಮಗಳಿರುತ್ತವೆ.  ಧರ್ಮಸ್ಥಳ ಲಕ್ಷದೀಪೋತ್ಸವದ ಎಲ್ಲ ಧಾರ್ವಿುಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆನ್​ಲೈನ್ (ನಮ್ಮ ಕುಡ್ಲ, ಶ್ರೀಶಂಕರ ಟಿವಿ, ಯೂಟ್ಯೂಬ್ ಮತ್ತು ಫೇಸ್​ಬುಕ್) ಮೂಲಕ ನೇರ ವೀಕ್ಷಣೆ ಮಾಡಬಹುದಾಗಿದೆ.


ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ಸರಳ ದೀಪೋತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ. ಅದರಂತೆ ವಸ್ತು ಪ್ರದರ್ಶನ, ಮಾರಾಟ ಮಳಿಗೆಗಳು ಈ ಬಾರಿ ಇರುವುದಿಲ್ಲ. ಆದರೆ ಧಾರ್ವಿುಕ ಆಚರಣೆಗಳನ್ನು ಯಥಾ ಪ್ರಕಾರ ನಡೆಸಲಾಗುತ್ತಿದೆ. ಕ್ಷೇತ್ರದ ಮಹಾದ್ವಾರ, ದೇವಸ್ಥಾನ ಸಹಿತ ಪ್ರಮುಖ ಕಟ್ಟಡಗಳನ್ನು ವಿದ್ಯುದ್ದೀಪಾಲಂಕಾರ ಮಾಡಲಾಗಿದ್ದು, ಲಕ್ಷದೀಪೋತ್ಸವ ಆಚರಣೆಗೆ ಸಕಲ ಸಿದ್ಧತೆ ನಡೆದಿದೆ.

Share Information