LATEST NEWS
ಧರ್ಮಸ್ಥಳ ಪ್ರಕರಣ – ಮಾಧ್ಯಮಗಳ ನಿರ್ಬಂಧ ಪ್ರಶ್ನಿಸಿ ಅರ್ಜಿ ಮೊದಲು ಹೈಕೋರ್ಟ್ ಗೆ ಸಲ್ಲಿಸಿ ಎಂದ ಸುಪ್ರೀಂಕೋರ್ಟ್

ನವದೆಹಲಿ ಜುಲೈ 23: ಧರ್ಮಸ್ಥಳದ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಶವಹೂತ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಡಿಲೀಟ್ ಮಾಡಲು ಬೆಂಗಳೂರಿನ ಸೆಶನ್ಸ್ ಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಥರ್ಡ್ ಐ ಯೂಟ್ಯೂಬ್ ಚಾನೆಲ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಮೊದಲು ಅರ್ಜಿಯನ್ನು ಹೈಕೋರ್ಟ್ ನಲ್ಲಿ ಸಲ್ಲಿಸಲು ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಧರ್ಮಸ್ಥಳದಲ್ಲಿ ಕೊಲೆಯಾದ ನೂರಾರು ಶವಗಳನ್ನು ಹೂತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಡಿ ಅವರ ವಿರುದ್ಧ ಯಾವುದೇ ಮಾನಹಾನಿ ವಿಷಯ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ವಿಧಿಸಿದ್ದ ನಿರ್ಬಂಧ ಪ್ರಶ್ನಿಸಿ ಥರ್ಡ್ ಐ ಯೂಟ್ಯೂಬ್ ಚಾನೆಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿಗಳಾದ ವಿನೋದ್ ಚಂದ್ರನ್ ಮತ್ತು ಜೊಯಮಲ್ಯ ಬಾಗ್ಚಿ ಅವರ ಪೀಠವು ಈ ವಿಷಯವನ್ನು ಮೊದಲಿಗೆ ಕರ್ನಾಟಕ ಹೈಕೋರ್ಟ್ ಮುಂದಿರಿಸಲು ವಾಹಿನಿಗೆ ಸೂಚಿಸಿತು.

ವಿಚಾರಣೆ ವೇಳೆ, ಥರ್ಡ್ ಐ ಪರ ವಕೀಲರು, “9,000 ವೀಡಿಯೊ ಲಿಂಕ್ಗಳನ್ನು ತೆಗೆದುಹಾಕಲು ಹೇಳಲಾಗಿದೆ. ಇದು ಮಾಧ್ಯಮ ನಿರ್ಬಂಧಕ ಆದೇಶ” ಎಂದು ವಾದಿಸಿದರು. ಆಗ ಸಿಜೆಐ ಗವಾಯಿ ಅವರು, “ಮೊದಲು ಹೈಕೋರ್ಟ್ಗೆ ಹೋಗಿ, ಆನಂತರ ಇಲ್ಲಿಗೆ ಬನ್ನಿ. ನಮ್ಮ ಹೈಕೋರ್ಟ್ಗಳನ್ನು ನಾವು ನಿರುತ್ತೇಜನಗೊಳಿಸಲಾಗದು” ಎಂದರು. ಹರ್ಷೇಂದ್ರ ಕುಮಾರ್ ಅವರು ತಪ್ಪಾಗಿ ವಿಷಯವನ್ನು ನಿರೂಪಿಸುವ ಮೂಲಕ ಹಾಗೂ ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗದ ಮೂಲಕ ಸೆಷನ್ಸ್ ನ್ಯಾಯಾಲಯದಿಂದ ಮಾಧ್ಯಮಗಳನ್ನು ನಿರ್ಬಂಧಿಸುವ ಆದೇಶ ಪಡೆದಿದ್ದಾರೆ ಎನ್ನುವುದು ಯೂಟ್ಯೂಬ್ ಚಾನೆಲ್ನ ವಾದವಾಗಿದೆ.