Connect with us

National

ಫೇಸ್‌ಬುಕ್‌ ಬೇಕಾದರೆ ಸೇನೆಗೆ ರಾಜೀನಾಮೆ ನೀಡಿ…!!

ನವದೆಹಲಿ: ಭಾರತೀಯ ಸೇನೆ ತನ್ನ ಸಿಬ್ಬಂದಿಗಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಹೇರಿರುವುದರ ವಿರುದ್ದ ಹೈಕೋರ್ಟ್ ಮೆಟ್ಟಿಲೆರಿದ ಸೇನೆಯ ಅಧಿಕಾರಿಯೊಬ್ಬರಿಗೆ ದೆಹಲಿ ಹೈಕೋರ್ಟ್ ಸೇನೆಗೆ ರಾಜೀನಾಮೆ ನೀಡಿ ಇಲ್ಲವೇ ಫೇಸ್‌ಬುಕ್‌ನಿಂದ ಹೊರಬನ್ನಿ, ಆಯ್ಕೆ ನಿಮ್ಮದು ಎಂದು ಖಡಕ್‌ ಆಗಿ ಸೂಚಿಸಿದೆ.


ಕೇಂದ್ರ ಸರಕಾರ ದೇಶದ ಭದ್ರತೆ ಹಿನ್ನಲೆ ಈಗಾಗಲೇ ಚೀನಾ ಆ್ಯಪ್ ಗಳನ್ನು ನಿರ್ಬಂಧಿಸಿದೆ. ಈ ಹಿನ್ನಲೆ ಭಾರತೀಯ ಸೇನೆ ಕೂಡ ತನ್ನ ಸಿಬ್ಬಂದಿಗಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ. ಆದರೆ ಈ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲೆಫ್ಟಿನೆಂಟ್ ಕರ್ನಲ್ ಪಿ.ಕೆ.ಚೌಧರಿ ಅವರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಾಜೀವ್ ಸಹೈ ಎಂಡ್ಲಾ ಮತ್ತು ಆಶಾ ಮೆನನ್ ಅವರಿದ್ದ ದ್ವಿಸದಸ್ಯ ಪೀಠ ಯಾವುದೇ ಮಧ್ಯಂತರ ತಡೆ ನೀಡಲು ನಿರಾಕರಿಸಿತು. ವಿಶೇಷವಾಗಿ ಈ ವಿಷಯವು ದೇಶದ ಭದ್ರತೆಗೆ ಸಂಬಂಧಿಸಿದ ಕಾರಣ ಅರ್ಜಿಗೆ ಯಾವುದೇ ಮಧ್ಯಂತರ ತಡೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು. ನನ್ನ ಕುಟುಂಬದ ಸದಸ್ಯರು ಸ್ನೇಹಿತರು ವಿದೇಶದಲ್ಲಿದ್ದಾರೆ. ಇವರ ಜೊತೆ ಮಾತನಾಡಲು ಫೇಸ್‌ಬುಕ್‌ ಬೇಕು. ಈ ಆದೇಶದಿಂದಾಗಿ ವಾಕ್‌ ಸ್ವಾತಂತ್ರ್ಯದ ಹಕ್ಕು, ವೈಯಕ್ತಿಕ ಜೀವನದ ಹಕ್ಕು, ಖಾಸಗಿತನದ ಹಕ್ಕು ಉಲ್ಲಂಘನೆಯಾಗಿದೆ ಎಂದು ಸೇನಾಧಿಕಾರಿ ಮನವಿ ಮಾಡಿದರು.


ಒಮ್ಮೆ ಖಾತೆಯನ್ನು ಡಿಲೀಟ್‌ ಮಾಡಿದ ಬಳಿಕ ಮತ್ತೆ ಅದರಲ್ಲಿರುವ ಡೇಟಾಗಳನ್ನು ಪಡೆಯಲು ಸಾಧ್ಯವಿಲ್ಲ. ವ್ಯಕ್ತಿಗಳನ್ನು ಸಂರ್ಪಕಿಸಲು ಆಗುವುದಿಲ್ಲ. ಇದರಿಂದಾಗುವ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ಈ ರೀತಿಯ ಆದೇಶದಿಂದ ಪ್ರಕಟಿಸುವ ಮೂಲಕ ನನ್ನ ಕಕ್ಷಿದಾರರ ಖಾಸಗಿತನದ ಹಕ್ಕನ್ನು ಕಸಿಯಲಾಗಿದೆ. ಹೀಗಾಗಿ ಆದೇಶಕ್ಕೆ ತಡೆ ನೀಡಬೇಕೆಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ಕೋರ್ಟ್‌ ನೀವು ದೇಶದ ಮುಖ್ಯ ಸಂಸ್ಥೆಯ ಭಾಗವಾಗಿದ್ದೀರಿ. ಮತ್ತು ಸಂಸ್ಥೆಯ ಆದೇಶಕ್ಕೆ ಬದ್ಧರಾಗಿರಬೇಕು. ನಿಮಗೆ ಫೇಸ್‌ಬುಕ್‌ ಮುಖ್ಯವಾಗಿದ್ದರೆ ನೀವು ಸೇನೆಗೆ ರಾಜೀನಾಮೆ ನೀಡಿ ಖಾತೆಯನ್ನು ಉಳಿಸಿಕೊಳ್ಳಬಹುದು. ಆಯ್ಕೆ ನಿಮ್ಮದು. ಯಾವ ಆಯ್ಕೆಯನ್ನು ಆರಿಸಿಕೊಳ್ಳುತ್ತೀರಿ ಎಂದು ಪ್ರಶ್ನಿಸಿತು.

ಈ ವಿಚಾರಣೆಗೆ ಕೇಂದ್ರದ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌(ಎಎಸ್‌ಜಿ) ಚೇತನ್‌ ಶರ್ಮಾ ಹಾಜರಾಗಿ ಫೇಸ್‌ಬುಕ್‌ ಮೂಲಕ ನಮ್ಮ ಸಿಬ್ಬಂದಿಯನ್ನು ಗುರಿಯಾಗಿಸಿ ಸೈಬರ್‌ ದಾಳಿಯಾಗುವ ಸಾಧ್ಯತೆಯಿದೆ. ಅವರಿಗೆ ಸಂವಹನ ಮಾಡ ಬೇಕಿದ್ದರೆ ವಾಟ್ಸಪ್‌, ಸ್ಕೈಪ್‌, ಟ್ವಿಟ್ಟರ್‌ ಇದೆ ಎಂದು ಕೋರ್ಟ್‌ ಗಮನಕ್ಕೆ ತಂದರು. ಎರಡು ಕಡೆಯ ವಾದ ಆಲಿಸಿದ ಬಳಿಕ, ಯಾವ ಆಧಾರದ ಮೇರೆಗೆ ಭಾರತೀಯ ಸೇನೆ ಸಾಮಾಜಿಕ ಜಾಲತಾಣ ಬಳಕೆಗೆ ನಿಷೇಧ ಹೇರಿದೆ? ಇದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸಬೇಕೇಂದು ಎಎಸ್‌ಜಿಗೆ ಸೂಚಿಸಿ ಅರ್ಜಿ ವಿಚಾರಣೆಯನ್ನು ಜುಲೈ 21ಕ್ಕೆ ಮುಂದೂಡಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *