ಮುಂಬೈ : ಅರಬ್ಬಿ ಸಮುದ್ರದ ನಡು ಮಧ್ಯ ಭಾಗದಲ್ಲಿ ವಾಯು ಭಾರ ಕುಸಿತ ಉಂಟಾಗಿರುವ ಪರಿಣಾಮ ಚಂಡಮಾರುತ ಸೃಷ್ಟಿಯಾಗಿದೆ. (Tej cyclone) ‘ತೇಜ್’ ಹೆಸರಿನ ಈ ಚಂಡ ಮಾರುತ ಆರಂಭಿಕ ಮಾಹಿತಿಗಳ ಪ್ರಕಾರ ಯೆಮನ್ ಹಾಗೂ ಒಮನ್ ದೇಶಗಳ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ.

ಒಂದು ವೇಳೆ ವಿರುದ್ದ ದಿಕ್ಕಿನಲ್ಲಿ ಸಾಗಿದರೆ ಮುಂಬೈ, ಗುಜರಾತ್ ಸೇರಿದಂತೆ ಪಶ್ಚಿಮ ಕರಾವಳಿಗೆ ಭಾರಿ ಹಾನಿಯುಂಟು ಮಾಡುವ ಬಗ್ಗೆ ವಿಶ್ಲೇಶಿಸಲಾಗಿದೆ. ಇಂದು ಶನಿವಾರ ಚಂಡಮಾರುತದ ರೂಪ ತಾಳಿ ತೀವ್ರಗೊಳ್ಳುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಈ ವರ್ಷ ಅರಬ್ಬಿ ಸಮುದ್ರದಲ್ಲಿ ಇದು 2ನೇ ಚಂಡಮಾರುತವಾಗಿದೆ. ಸದ್ಯ ಒಮಾನ್ ಮತ್ತು ಪಕ್ಕದ ಯೆಮೆನ್ನ ದಕ್ಷಿಣ ಕರಾವಳಿಯ ಕಡೆಗೆ ಇದು ಚಲಿಸುತ್ತದೆ. ಆದರೆ ಭಾರತದ ಗುಜರಾತ್ ಕರಾವಳಿಯಲ್ಲಿ ಸಾಕಷ್ಟು ವಿನಾಶ ಉಂಟು ಮಾಡಿದ ಬಿಪೊರ್ಜೊಯ್ ಚಂಡಮಾರುತದ ರೀತಿ ಈ ಚಂಡಮಾರುತ ಕೂಡ ಪಥ ಬದಲಿಸಿ ಸಾಗಬಹುದು. ಆಗ ಇದು ಭಾರತದ ಕರಾವಳಿಗೂ ಅಪಾಯವಾಗಬಲ್ಲದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕಳೆದ ಜೂನ್ನಲ್ಲೂ ಇದೇ ಸನ್ನಿವೇಶ ನಿರ್ಮಾಣವಾಗಿತ್ತು. ಅರಬ್ಬಿ ಸಮುದ್ರದಲ್ಲಿ ವಾಯು ಭಾರ ಕುಸಿತ ಉಂಟಾಗಿದ್ದ ಕಾರಣ ಬಿಪರ್ಜಾಯ್ ಚಂಡ ಮಾರುತ ಸೃಷ್ಟಿಯಾಗಿತ್ತು. ಈ ಚಂಡ ಮಾರುತ ಅರಬ್ಬಿ ಸಮುದ್ರದ ಉತ್ತರ ಹಾಗೂ ವಾಯುವ್ಯ ದಿಕ್ಕಿನತ್ತ ಸಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಚಂಡ ಮಾರುತದ ದಿಕ್ಕು ಬದಲಾವಣೆ ಕಂಡಿತ್ತು. ಗುಜರಾತ್ ರಾಜ್ಯದ ಮಾದ್ವಿ ಹಾಗೂ ಪಾಕಿಸ್ತಾನದ ಕರಾಚಿ ನಡುವೆ ಈ ಚಂಡಮಾರುತ ಅಪ್ಪಳಿಸಿತ್ತು. ಹೀಗಾಗಿ, ಪಾಕಿಸ್ತಾನದ ಕರಾಚಿ, ಭಾರತದ ಗುಜರಾತ್, ರಾಜಸ್ಥಾನ ರಾಜ್ಯಗಳಲ್ಲಿ ಭಾರೀ ಮಳೆ ಆಗಿತ್ತು.