ಮಹಾರಾಷ್ಟ್ರ ನವೆಂಬರ್ 29: ಕ್ರಿಕೆಟ್ ಪಂದ್ಯಾಟ ನಡೆಯುತ್ತಿರುವ ವೇಳೆಯೇ ಆಟಗಾರನೊಬ್ಬ ಹೃದಯಾಘಾತದಿಂದ ನಿಧನರಾದ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ಇಮ್ರಾನ್ ಸಿಕಂದರ್ ಪಟೇಲ್ ಎಂದು ಗುರುತಿಸಲಾಗಿದೆ. ಗರವಾಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಲಕ್ಕಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಹಾಗೂ ಯಂಗ್ ಇಲೆವೆನ್ ನಡುವಿನ ಪಂದ್ಯದಲ್ಲಿ 35 ವರ್ಷದ ಇಮ್ರಾನ್ ಆಟವಾಡುತ್ತಿದ್ದರು. ಪಂದ್ಯದ ಆರನೇ ಓವರ್‌ನಲ್ಲಿ ಅವರು ಸತತ ಎರಡು ಬೌಂಡರಿಗಳನ್ನು ಹೊಡೆದರು. ಆದರೆ ಇದಾದ ನಂತರ ಇಮ್ರಾನ್​ಗೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಇಮ್ರಾನ್, 7ನೇ ಓವರ್​ ಆರಂಭಕ್ಕೂ ಮುನ್ನ ಈ ಬಗ್ಗೆ ಅಂಪೈರ್ ಬಳಿ ಹೇಳಿಕೊಂಡಿದ್ದಾರೆ. ಅವರ ಗಂಭೀರ ಸ್ಥಿತಿಯನ್ನು ಕಂಡು ಮೈದಾನದಲ್ಲಿದ್ದ ಅಂಪೈರ್‌ಗಳು ಕೂಡಲೇ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ.

ಇದಾದ ಬಳಿಕ ಇಮ್ರಾನ್ ಮೈದಾನದಿಂದ ಹೊರಗೆ ಹೋಗಲು ಆರಂಭಿಸಿದರಾದರೂ ಬೌಂಡರಿ ತಲುಪಿದ ಕೂಡಲೇ ಏಕಾಏಕಿ ಕೆಳಗೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಇಮ್ರಾನ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. 35 ವರ್ಷದ ಇಮ್ರಾನ್​ಗೆ ಮೂವರು ಹೆಣ್ಣು ಮಕ್ಕಳಿದ್ದು, ಅವರ ಮರಣದ ನಂತರ ಇಡೀ ಕುಟುಂಬಕ್ಕೆ ದಿಕ್ಕು ತೋಚದಂತ್ತಾಗಿದೆ. ಪತ್ನಿ, ತಾಯಿ ಸೇರಿದಂತೆ ಇಡೀ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಇಮ್ರಾನ್ ಸಾವಿನಿಂದ ಸ್ಥಳೀಯ ಆಟಗಾರರು ಸಹ ಆಘಾತಕ್ಕೊಳಗಾಗಿದ್ದಾರೆ.

 

Share Information