LATEST NEWS
ಪತ್ನಿ ಕೊಲ್ಲಲು ಹಾವಾಡಿಗನಿಗೆ ಸುಪಾರಿ ಕೊಟ್ಟ ಕಾನ್ಸ್ಟೆಬಲ್!

ಕಾನ್ಪುರ, ಮಾರ್ಚ್ 25: ಗಂಡ ಹೆಂಡತಿ ನಡುವಿನ ಸಂಬಂಧ ಹಳಸಿತ್ತು, ಇಬ್ಬರೂ ದೂರವಾಗುವ ಬದಲು ಆಕೆಯನ್ನು ಹತ್ಯೆ ಮಾಡಲು ಕಾನ್ಸ್ಟೆಬಲ್ ಆಲೋಚಿಸಿದ್ದ, ಹಾಗಾಗಿ ಕೊಲೆ ಮಾಡಿದರೆ ಅನುಮಾನ ಬರಬಹುದೆಂದು ಹಾವಿನಿಂದ ಕಚ್ಚಿಸಿ ಹತ್ಯೆ ಮಾಡಬೇಕೆಂದುಕೊಂಡಿದ್ದ, ಆತನ ಆಲೋಚನೆ ಪ್ರಕಾರ ಹಾವು ಕೂಡ ಕಚ್ಚಿದೆ, ಆದರೂ ಆಕೆ ಬದುಕುಳಿದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಅಂಶಿಕಾ ಎಂಬ ಮಹಿಳೆ ದೂರು ನೀಡಿದ್ದು, ನಾಲ್ಕು ವರ್ಷಗಳ ಹಿಂದೆ ಕಾನ್ಸ್ಟೆಬಲ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ, ಆಗ ಅನಿವಾರ್ಯವಾಗಿ ಆಕೆಯನ್ನು ಮದುವೆಯಾಗಬೇಕಾಯಿತು ಇದು ಒತ್ತಡದ ಸಂಬಂಧವಾಗಿತ್ತು ಎಂಬುದನ್ನು ತಿಳಿಸಿದ್ದಾಳೆ.

ಕಾನೂನಿಂದ ತಪ್ಪಿಸಿಕೊಳ್ಳಲು ಆತ ದೇವಸ್ಥಾನಕ್ಕೆ ಆಕೆಯನ್ನು ಕರೆದುಕೊಂಡು ಹೋಗಿ ಮದುವೆಯಾಗಿದ್ದ, ಆರಂಭದಲ್ಲಿ ತನ್ನ ಸಹೋದರಿ ಮನೆಯಲ್ಲಿ ಆಕೆಯನ್ನು ಇರಿಸಿದ್ದ. ಬಳಿಕ ಆತ ಉತ್ತರ ಪ್ರದೇಶದಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಲು ಆರಂಭಿಸಿದ ಬಳಿಕ ಆಕೆಯನ್ನು ಪತ್ನಿ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ್ದ.
ಈ ಕುರಿತು ಅಂಶಿಕಾ ದೂರು ನೀಡಿದ ಬಳಿಕ ಆತ ಆಕೆಯನ್ನು ಒಪ್ಪಿಕೊಂಡಿದ್ದ, ತನ್ನ ಮನೆಗೂ ಕರೆದುಕೊಂಡು ಹೋಗಿದ್ದ, ಅದಾದ ಬಳಿಕ ದೈಹಿಕ ಕಿರುಕುಳ, ಬೆದರಿಕೆಗಳು ಆರಂಭವಾಗಿದ್ದವು. ಫೆಬ್ರವರಿ 19ರಂದು ಅನುಜ್ ಇಬ್ಬರು ಹಾವಾಡಿಗರನ್ನು ನೇಮಿಸಿ ಆಕೆಗೆ ಹಾವು ಕಚ್ಚಿಸಿದ್ದಾನೆ. ಬಳಿಕ ಆಕೆ ಪ್ರಜ್ಞೆ ತಪ್ಪಿದ್ದಾಳೆ, ಸತ್ತಿದ್ದಾಳೆ ಎಂದು ತಿಳಿದು ಅಲ್ಲಿಂದ ಹೋಗಿದ್ದಾನೆ.
ಅಂಶಿಕಾಗೆ ಪ್ರಜ್ಞೆ ಬಂದು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು, ಕೋಣೆಯನ್ನು ಹೊರಗಿನಿಂದ ಲಾಕ್ ಮಾಡಿ ತನ್ನ ಹೆತ್ತವರ ಮನೆಗೆ ಓಡಿಹೋಗಿದ್ದಳು. ಆದರೆ, ಪೊಲೀಸರು ಆರಂಭದಲ್ಲಿ ದೂರನ್ನು ಸ್ವೀಕರಿಸಲು ಸಿದ್ಧರಿರಲಿಲ್ಲ ಎಂದು ಆಕೆಯ ಕುಟುಂಬದವರು ಹೇಳಿದ್ದಾರೆ.
ಅಂಶಿಕಾಳ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಬಿಡುಗಡೆಯ ನಂತರ, ಅವರು ಮತ್ತು ಅವರ ತಂದೆ ಕಾನ್ಪುರದ ಉಪ ಪೊಲೀಸ್ ಆಯುಕ್ತರನ್ನು (ಡಿಸಿಪಿ) ಸಂಪರ್ಕಿಸಿದರು, ಅವರು ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು, (ಎಫ್ಐಆರ್) ದಾಖಲಿಸಲು ಆದೇಶಿಸಿದರು.