LATEST NEWS
ಕಾಂಗ್ರೆಸ್ ಕಾರ್ಯಕರ್ತ ಯಶವಂತ ಪ್ರಭು ಅವರಿಗೆ ಒಬ್ಬ ಶಾಸಕನಾದ ವ್ಯಕ್ತಿ ಹೇಳುವ ಮಾತೇ ಇದು..? ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಪ್ರಶ್ನೆ

ಮಂಗಳೂರು ಮಾರ್ಚ್ 03: ಕುಲಶೇಖರದ ಕೃಷ್ಣ ಭಜನಾ ಮಂದಿರದ ಧಾರ್ಮಿಕ ಕಾರ್ಯಕ್ರಮದ ವೇಳೆ ಕಾಂಗ್ರೆಸ್ ಕಾರ್ಯಕರ್ತ ಯಶವಂತ ಪ್ರಭು ಎಂಬವರಿಗೆ ನೀನು ಸಾಬರಿಗೆ ಹುಟ್ಟಿದ್ದಾ ಎಂದು ಶಾಸಕರು ಕೇಳಿದ್ದಾರೆ. ಒಬ್ಬ ಶಾಸಕನಾದ ವ್ಯಕ್ತಿ ಹೇಳುವ ಮಾತೇ ಇದು..? ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜವಾಬ್ದಾರಿಯುತ ಶಾಸಕರಾಗಿರುವ ವೇದವ್ಯಾಸ ಕಾಮತ್ ರವರು ಅವಾಚ್ಯವಾಗಿ ಮಾತನಾಡಿ ಆಕ್ಷೇಪ ಮಾಡಿರುವುದು ಮಾತ್ರವಲ್ಲದೆ, ಕಾಂಗ್ರೆಸ್ ಕಾರ್ಯಕರ್ತನ ಹುಟ್ಟಿನ ಬಗ್ಗೆಯೂ ಕೀಳಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದರು. ಶಕ್ತಿನಗರದ ಶ್ರೀಕೃಷ್ಣ ಮಂದಿರದ ಬ್ರಹ್ಮಕಲಶಕ್ಕೆ ಹೋಗಿ ಶಾಸಕ ವೇದವ್ಯಾಸ ಕಾಮತ್, ಇಲ್ಲಿ ದೇವಸ್ಥಾನಕ್ಕೆ ಕಲ್ಲು ಹೊಡೆದವರನ್ನು ಯಾಕೆ ಕರೆದಿದ್ದೀರಿ ಅಂತ ಹೇಳಿ ಹಿಂದುಗಳನ್ನೇ ಎತ್ತಿಕಟ್ಟುವ ಯತ್ನ ಮಾಡಿದ್ದಾರೆ. ಶಾಸಕರನ್ನು ಪ್ರಶ್ನೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಸೇರಿ ಹಲ್ಲೆ ನಡೆಸಿ ಗೂಂಡಾಗಿರಿ ತೋರಿಸಿದ್ದಾರೆ. ಪ್ರಶ್ನಿಸಿದ ಯಶವಂತ ಪ್ರಭು ಎಂಬ ನಮ್ಮ ಕಾರ್ಯಕರ್ತರನ್ನು ನೀನು ಸಾಬರಿಗೆ ಹುಟ್ಟಿದ್ದಾ ಎಂದು ಶಾಸಕರು ಕೇಳಿದ್ದಾರೆ. ಒಬ್ಬ ಶಾಸಕನಾದ ವ್ಯಕ್ತಿ ಹೇಳುವ ಮಾತೇ ಇದು..? ಇವರ ನಕಲಿ ಹಿಂದುತ್ವ ಬೆಲೆ ಕಳಕೊಂಡಿದೆ ಅಂತ ಶಾಸಕರು ಹತಾಶರಾಗಿದ್ದಾರೆಯೇ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.

ರಾತ್ರಿ 8 ಗಂಟೆ ವೇಳೆಗೆ ಶಾಸಕ ವೇದವ್ಯಾಸ ಕಾಮತ್ ಬಂದಾಗ, ಸಹಜವಾಗಿಯೇ ಸ್ಥಳೀಯರೆಲ್ಲ ಜೊತೆಗೆ ಸ್ವಾಗತಿಸಿದ್ದಾರೆ. ಆದರೆ ಈ ಶಾಸಕರು, ಅಲ್ಲಿದ್ದ ಕಾಂಗ್ರೆಸಿಗರನ್ನು ನೋಡಿ ನೀವು ದೇವಸ್ಥಾನಕ್ಕೆ ಕಲ್ಲು ಹೊಡೆದವರಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಆನಂತರ, ವೇದಿಕೆಯಲ್ಲೂ ಇಂತಹದ್ದೇ ಪ್ರಶ್ನೆಯನ್ನು ಮುಂದಿಟ್ಟು ಭಾಷಣ ಮಾಡಿದ್ದಾರೆ. ಇದರಿಂದ ಮುಜುಗರಕ್ಕೀಡಾದ ಜಿಲ್ಲಾ ಕಾಂಗ್ರೆಸ್ ಸದಸ್ಯರೂ ಆದ ಯಶವಂತ ಪ್ರಭು ಮತ್ತು ಇತರರು ಶಾಸಕರನ್ನು ಹಿಂತಿರುಗುವ ಸಂದರ್ಭದಲ್ಲಿ ಪ್ರಶ್ನೆ ಮಾಡಿದ್ದಾರೆ. ಅಷ್ಟಕ್ಕೇ ಶಾಸಕರ ಜೊತೆಗಿದ್ದ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ.
ಗ್ಯಾರಂಟಿ ಯೋಜನೆಯ ಬಳಿಕ ಜನಸಾಮಾನ್ಯರ ಭಾವನೆ ಬದಲಾಗಿದ್ದು, ಹಿಂದುತ್ವ ಹೊಟ್ಟೆ ತುಂಬಿಸುವುದಿಲ್ಲ, ಅಕ್ಕಿಯಿಂದ ಹೊಟ್ಟೆ ತುಂಬುತ್ತದೆ ಎನ್ನುವುದು ಅರಿವಿಗೆ ಬರುತ್ತಿದೆ. ಇದರಿಂದಾಗಿ ರಾಮಮಂದಿರ, ಗೋಮಾಂಸ, ಗೋಹತ್ಯೆ ಎಲ್ಲ ಇವರ ನಕಲಿ ಹಿಂದುತ್ವ ಅಸ್ತಿತ್ವ ಕಳಕೊಂಡಿದೆ. ಇದರಿಂದಾಗಿ ಶಾಸಕರು ಈ ರೀತಿ ವರ್ತಿಸಿದ್ದಾರೆ. ಘಟನೆ ಬಳಿಕ ಯಶವಂತ ಪ್ರಭು ಆಸ್ಪತ್ರೆಗೆ ದಾಖಲಾಗಿದ್ದು ಅಲ್ಲಿಗೂ ಮಾಜಿ ಮೇಯರ್ ದಿವಾಕರ ಪಾಂಡೇಶ್ವರ ತನ್ನ ಪಟಾಲಂ ಕರೆದುಕೊಂಡು ಬಂದು ಹಲ್ಲೆಗೆ ಯತ್ನಿಸಿದ್ದಾರೆ. ಹಾಗಂತ, ಕಾಂಗ್ರೆಸ್ ಕಾರ್ಯಕರ್ತರು ಕೈಗೆ ಬಳೆ ಹಾಕ್ಕೊಂಡು ಕುಳಿತಿದ್ದಾರೆ, ಸುಮ್ಮನಿರುವುದು ದೌರ್ಬಲ್ಯ ಅಂತ ತಿಳ್ಕೊಳ್ಳುವುದು ಬೇಡ ಎಂದರು.