DAKSHINA KANNADA
ಓರ್ವ ಹಿಂದೂ ಹೆಣ್ಣು ಮಗಳಿಗೆ ಅನ್ಯಾಯವಾದರೂ ಯಾವ ಹಿಂದೂ ಮುಖಂಡ, ಬಿಜೆಪಿಗರು ಧ್ವನಿ ಎತ್ತಿಲ್ಲ – ಕಾಂಗ್ರೇಸ್ ಮುಖಂಡ ಹೆಚ್. ಮಹಮ್ಮದ್ ಆಲಿ

ಪುತ್ತೂರು ಜೂನ್ 30: ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ ಮಗುವಿಗೆ ಜನ್ಮ ನೀಡಿ ಪ್ರಕರಣದಲ್ಲಿ ಯಾರೆಲ್ಲಾ ಮಾತುಕತೆಗೆ ಪ್ರಯತ್ನಿಸಿದರೋ ಅವರಿಗೆ ಶಾಪ ತಟ್ಟಲಿದೆ ಎಂದು ಕಾಂಗ್ರೇಸ್ ಮುಖಂಡ ಹೆಚ್. ಮಹಮ್ಮದ್ ಆಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತನಗೆ ನ್ಯಾಯ ಕೊಡಬೇಕೆಂದು ಬಂದ ಮಹಿಳೆಗೆ ನ್ಯಾಯ ಕೊಡೋದು ಬಿಟ್ಟು ಪೋಲೀಸ್ ಠಾಣೆಯಲ್ಲಿ ರಾಜಿ ಸಂಧಾನ ಮಾಡಲಾಗಿದೆ. ಪೋಲೀಸರಿಗೆ ರಾಜಿ ಸಂಧಾನ ಮಾಡಲು ಯಾರು ಅಧಿಕಾರ ನೀಡಿದರು, ಈ ವಿಚಾರದಲ್ಲಿ ಪೋಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಣ್ಣ ವಿಚಾರಕ್ಕೆ ಹಿಂದುತ್ವದ ಬಗ್ಗೆ ಮಾತನಾಡುವ ಮುಖಂಡರು ಎಲ್ಲಿ ಅಡಗಿ ಕುಳಿತಿದ್ದಾರೆ ಎಂದು ಪ್ರಶ್ನಿಸಿದ ಅವರು ಓರ್ವ ಹಿಂದೂ ಹೆಣ್ಣು ಮಗಳಿಗೆ ಅನ್ಯಾಯವಾದರೂ ಯಾವ ಹಿಂದೂ ಮುಖಂಡ, ಬಿಜೆಪಿಗರು ಧ್ವನಿ ಎತ್ತಿಲ್ಲ, ಅದೇ ಈ ಪ್ರಕರಣದಲ್ಲಿ ಮುಸ್ಲಿಂ ಆರೋಪಿಯಾಗಿದ್ದರೆ ಇಡೀ ಪುತ್ತೂರಿಗೆ ಬೆಂಕಿ ಕೊಡುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುತ್ತೂರಿನಲ್ಲಿ ಯಾವುದೇ ಪ್ರಕರಣ ನಡೆದರೂ ಮೊದಲು ಹೋಗುತ್ತಿದ್ದ ಅರುಣ್ ಕುಮಾರ್ ಪುತ್ತಿಲ ಈಗ ಎಲ್ಲಿ ಹೋಗಿದ್ದಾರೆ. ಈ ಪ್ರಕರಣದಲ್ಲಿ ಯಾರೆಲ್ಲಾ ಮಧ್ಯಸ್ತಿಗೆ ವಹಿಸಲು ಹೋಗಿದ್ದಾರೋ ಅವರೆಲ್ಲರ ಹೆಸರು ಬಹಿರಂಗವಾಗಬೇಕು, ಮಗ ಹೆಣ್ಣು ಮಗಳಿಗೆ ಅನ್ಯಾಯ ಮಾಡಿದ್ದರೂ, ಆತನ ಅಪ್ಪ ಆರಾಮವಾಗಿ ತಿರುಗಾಡುತ್ತಿದ್ದಾನೆ. ಯುವತಿಗೆ ಆರೋಪಿ ಆತನ ಮನೆಯಲ್ಲೇ ಅತ್ಯಾಚಾರ ನಡೆಸಿದ್ದು, ಈ ನೆಲೆಯಲ್ಲಿ ಆರೋಪಿಯ ಅಪ್ಪನನ್ನೂ ಬಂಧಿಸಬೇಕು, ಪೋಲಿಸರು ಆರೋಪಿಯ ಮನೆಯಲ್ಲೂ ತನಿಖೆ ನಡೆಸಬೇಕು. ಈ ಪ್ರಕರಣ ಮಾತ್ರವಲ್ಲದೆ ಆ ಮನೆಯಲ್ಲಿ ಬೇರೆ ಪ್ರಕರಣಗಳು ನಡೆದಿದೆಯೋ ಅನ್ನೋದನ್ನೂ ಪತ್ತೆ ಹಚ್ಚಬೇಕು ಎಂದು ಕಾಂಗ್ರೇಸ್ ಮುಖಂಡ ಹೆಚ್. ಮಹಮ್ಮದ್ ಆಲಿ ಆಗ್ರಹಿಸಿದ್ದಾರೆ.