Connect with us

    DAKSHINA KANNADA

    ಕಾಂಗ್ರೆಸ್ ಕೇವಲ ಭಾಷಣದಲ್ಲಿ ಮಾತ್ರ ಮಹಿಳೆಯರ ಸಮ್ಮಾನದ ಬಗ್ಗೆ ಮಾತನಾಡುತ್ತಿದೆ: ಡಾ. ಭಾರತಿ ಪ್ರವೀಣ್ ಪವಾರ್

    ಪುತ್ತೂರು, ಎಪ್ರಿಲ್ 26: ದೇಶದ ಪ್ರಧಾನಿ ನರೇಂದ್ ಮೋದಿ ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾತಿನಿದ್ಯ ನೀಡುವ ಮುಖಾಂತರ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಡಾ. ಭಾರತಿ ಪ್ರವೀಣ್ ಪವಾರ್ ಹೇಳಿದರು.

    ಪುತ್ತೂರಿನ ಜೈನಭವನದಲ್ಲಿ ಎಪ್ರಿಲ್ 26 ರಂದು ನಡೆದ ಬಿಜೆಪಿ ಮಹಿಳಾ ಸಮಾವೇಶವನ್ನು ಉದ್ಧೇಶಿಸಿ ಅವರು ಮಾತನಾಡಿದರು. ಕೇಂದ್ರದ ಮೋದಿ ಸರಕಾರ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಆ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಆದರೆ ಕಾಂಗ್ರೆಸ್ ಕೇವಲ ಭಾಷಣದಲ್ಲಿ ಮಾತ್ರ ಮಹಿಳೆಯರ ಸಮ್ಮಾನದ ಬಗ್ಗೆ ಮಾತನಾಡುತ್ತಿದ್ದು, ಇದಕ್ಕೆ ಒಂದು ಉದಾಹರಣೆ ದೇಶದ ರಾಷ್ಟ್ರಪತಿ ಚುನಾವಣೆಯಾಗಿದೆ ಎಂದ ಅವರು ಕೇಂದ್ರ ಸರಕಾರ ಸಮಾಜದ ಕಟ್ಟಕಡೆಯ ದಲಿತ ಮಹಿಳೆ ದ್ರೌಪದಿ ಮುರ್ಮು ಅವರನ್ನು ದೇಶದ ಅತ್ಯುನ್ನತ ರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆ ಮಾಡಿದೆ.

    ಆದರೆ ಕಾಂಗ್ರೇಸ್ ಮಹಿಳೆಯನ್ನು ರಾಷ್ಟ್ರಪತಿ ಮಾಡುವುದಕ್ಕೆ ತನ್ನ ವಿರೋಧ ವ್ಯಕ್ತಪಡಿಸಿ ತನ್ನದೇ ಇನ್ನೊಂದು ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಆದರೆ ಬಿಜೆಪಿ ಮಿತ್ರಪಕ್ಷಗಳ ಸಹಕಾರದೊಂದಿಗೆ ದ್ರೌಪದಿ ಮುರ್ಮು ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದಾರೆ. ಮಹಿಳೆಯರ ಬಗ್ಗೆ ಮಾತನಾಡುವ ಕಾಂಗ್ರೇಸ್ ನವರಿಗೆ ಮಹಿಳೆಯರು ಈ ವಿಚಾರವನ್ನು ಕೇಳಬೇಕು ಎಂದರು. ಜನಧನ್, ಜನೌಷಧಿ, ಅಂತ್ಯೋದಯ ಹಾಗು ಇತರ ಜನೋಪಕಾರಿ ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದು, ಇದರ ಸದುಪಯೋಗವನ್ನು ದೇಶದ ಜನ ಪಡೆದುಕೊಳ್ಳುತ್ತಿದ್ದಾರೆ ಎಂದರು.

    ಪುತ್ತೂರಿಗೆ ಈ ಬಾರಿ ಬಿಜೆಪಿ ಮಹಿಳೆಯನ್ನು ಕಣಕ್ಕಿಳಿಸಿದ್ದು, ಮತದಾರರು ಆಶಾ ತಿಮ್ಮಪ್ಪರನ್ನು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದರು. ಪುತ್ತೂರಿನ ಹಿಂದಿನ ಶಾಸಕರಾದ ಸಂಜೀವ ಮಠಂದೂರು ಕ್ಷೇತ್ರಗಾಗಿ ಹಲವು ಜನಪರ ಕಾರ್ಯಗಳನ್ನು ಮಾಡಿದ್ದು, 200 ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವ ಮೂಲಕ ಮಕ್ಕಳ ಆರೋಗ್ಯದ ಕಾಳಜಿಯನ್ನೂ ವಹಿಸಿದ್ದಾರೆ ಎಂದ ಅವರು ದೇಶದಲ್ಲಿ ಅತೀ ಹೆಚ್ಚು ಮಹಿಳೆಯರು ಎಂ.ಪಿ, ಎಂಎಲ್ಎ ಆಗಿ ಆಯ್ಕೆಯಾಗಿದ್ದರೆ ಅದು ಬಿಜೆಪಿ ಪಕ್ಷದಿಂದ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply