Connect with us

    DAKSHINA KANNADA

    ಶ್ರಮಜೀವಿಗಳ ವಿಮೋಚನೆಗೆ ಇರುವ ಸಿದ್ದಾಂತವೇ ಕಮ್ಯೂನಿಸಂ- ಸುನೀಲ್ ಕುಮಾರ್ ಬಜಾಲ್

    ಮಂಗಳೂರು : ಕಮ್ಯೂನಿಷ್ಟ್ ಪಕ್ಷಕ್ಕೆ ಈ ಜಗತ್ತಿನ ಸಮಸ್ತ ಶ್ರಮಜೀವಿಗಳ ಹಿತಗಳಿಗಿಂತ ಪ್ರತ್ಯೇಕವಾದ ಮತ್ತು ಹೊರತಾದ ಯಾವುದೇ ಹಿತಾಸಕ್ತಿಯನ್ನು ಹೊಂದಿಲ್ಲ.‌ ಶತಮಾನಗಳಿಂದ ತೀರಾ ತುಳಿತಕ್ಕೊಳಗಾದ ಶ್ರಮಜೀವಿ ವರ್ಗಗಳು ವಿಮೋಚನೆಗೊಳ್ಳಬೇಕಾದರೆ, ವರ್ಗ ಶೋಷಣೆ ಕೊನೆಗೊಳ್ಳಬೇಕಾದರೆ ಅದಕ್ಕಿರುವ ಸಿದ್ದಾಂತವೇ ಕಮ್ಯೂನಿಸಂ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನೀಲ್ ಕುಮಾರ್ ಬಜಾಲ್  ಭಾನುವಾರ ಸಿಪಿಐಎಂ ಪಕ್ಷದ ಶಾಖಾ ಮಟ್ಟದಿಂದ ಹಿಡಿದು ರಾಷ್ಟ್ರೀಯ ಮಟ್ಟದ ವರೆಗೂ ನಡೆಯುವ ಸಮ್ಮೇಳನದ ಪ್ರಚಾರದ ಭಾಗವಾಗಿ ಜಲ್ಲಿಗುಡ್ಡೆ ಜಂಕ್ಷನ್ ನಲ್ಲಿ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

     

    ಆಳುವ ಸರಕಾರಗಳ ತಪ್ಪಾದ ಧೋರಣೆಗಳಿಂದ ದೇಶದ ಕಾರ್ಮಿಕ ವರ್ಗದ ಮೇಲಾದ ಪರಿಣಾಮವನ್ನು ಜನ ಅನುಭವಿಸುವಂತಾಗಿದೆ. ಬಂಡವಾಳಶಾಹಿ ವರ್ಗದ ರಕ್ಷಣೆಗೆ ದೇಶದ ಆಸ್ತಿ ,ಸಾರ್ವಜನಿಕ ಸಂಪತ್ತುಗಳನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಮಾರಾಟ ಮಾಡಲಾಗಿದ್ದು ನೀರು, ಶಿಕ್ಷಣ, ಆರೋಗ್ಯ ಸೇರಿ ಎಲ್ಲವೂ ಸಂಪೂರ್ಣ ಖಾಸಗೀಕರಣಗೊಂಡಿದೆ. ಸಿಪಿಐಎಂ ಪಕ್ಷ ಪ್ರಾರಂಭದ ದಿನದಿಂದಲೂ ದೇಶದ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಕಾರ್ಮಿಕ ವರ್ಗ ಅನುಭವಿಸುತ್ತಿರುವ ಅಸಮಾನತೆಯ ವಿರುದ್ದ ಧೀರೋಧತ್ತ ಹೋರಾಟ ಚಳುವಳಿಗಳನ್ನು ಸಂಘಟಿಸುತ್ತಾ ಬಂದಿದೆ ಎಂದರು.

    ಸಿಪಿಐಎಂ ಪಕ್ಷದ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಮಾತನಾಡಿ ಮಾನವ ವರ್ಗಕ್ಕೆ ಇರುವ ನಿಜವಾದ ಶೋಷಣೆಯೇ ವರ್ಗ ಶೋಷಣೆ ಅದು ಹೋದರೆ ನಿರ್ಮಾಣವಾಗುವ ಸಮಾಜವೇ ಸಮಾಜವಾದ. ಅಂತಹ ಸಮಾಜವನ್ನು ನಿರ್ಮಿಸುವುದೇ ಕಮ್ಯೂನಿಷ್ಟರ ಗುರಿ. ಆದರೆ ಇಂದು ಜನರ ಬದುಕುವ ರಾಜಕಾರಣಕ್ಕಿಂತ ಮತೀಯ ರಾಜಕಾರಣಗಳು ರಾರಾಜಿಸುತ್ತಿವೆ. ಜಿಲ್ಲೆಯ ಸಂಸದರಾದ ಬ್ರಿಜೇಶ್ ಚೌಟ
    ನಾಗಮಂಗಲದಲ್ಲಿ ಗಲಭೆಯ ವೇಳೆ ಬಿಟ್ಟು ಓಡಿರುವ ವೇಳೆ ಸಿಕ್ಕಿರುವ ಗಣಪತಿ ವಿಗ್ರಹವನ್ನು ಪೊಲೀಸರು ಇನ್ಯಾವುದೇ ಅಹಿತಕರ ಘಟನೆ ನಡೆಯುವುದು ಬೇಡವೆಂದು ತಮ್ಮ ಬಸ್ಸಿನಲ್ಲಿ ಇರಿಸಿರುವ ಚಿತ್ರವನ್ನು ತನ್ನ ಫೇಸ್ ಬುಕ್ ಮುಖಪುಟದಲ್ಲಿ ಕರ್ನಾಟಕ ರಾಜ್ಯದ ಪೊಲೀಸರು ಗಣಪತಿಯನ್ನೂ ಬಂಧಿಸಿದ್ದಾರೆ ಎಂಬ ಬರಹ ಬರೆದಿರುವುದನ್ನು ನೋಡಿದರೆ ಅವರ ಬಗ್ಗೆ ಖೇದ ಉಂಟಾಗುತ್ತಿದೆ. ಒಬ್ಬ ಸಂಸದರಾಗಿ ಸತ್ಯವನ್ನು ಮರೆಮಾಚಿ ಸಣ್ಣತನವನ್ನು ಪ್ರದರ್ಶಿಸಿ ಇಲ್ಲೂ ದ್ವೇಷ ರಾಜಕಾರಣಕ್ಕೆ ಯುವಜನರನ್ನು ಬಲಿ ಪಡೆಯಲು ಯತ್ನಿಸುತ್ತಿದ್ದಾರೆ. ಇವರ ಮತೀಯ ದ್ರುವೀಕರಣದ ರಾಜಕಾರಣಕ್ಕೆ ಇಲ್ಲೂ ಅಲ್ಲೂ ಬಲಿಯಾದದ್ದು ಯಾರು ಬಡವರ ಮನೆಯ ಮಕ್ಕಳು. ಕೈಯಲ್ಲಿ ಉದ್ಯೋಗ ಇಲ್ಲದೆ ಹತಾಶರಾಗಿರುವ ಯುವಜನರಿಗೆ ಸರಕಾರದಲ್ಲಿ, ಸ್ಥಳೀಯ ಕೈಗಾರಿಕೆಗಳಲ್ಲಿ ಖಾಲೀ ಇರುವ ಉದ್ಯೋಗ ಭರ್ತಿಗಾಗಿ ಇವರಲ್ಲಿ ಯಾವೊಂದು ಕಾರ್ಯಕ್ರಮಗಳೂ ಇಲ್ಲ. ಒಟ್ಟು ಈ ದೇಶದ ಜನರನ್ನು ಕಾಡುವ ಸಮಸ್ಯೆಗಳಿಗೆ ಪರಿಹಾರ ಇರೋದು ಕಮ್ಯೂನಿಷ್ಟ್ ಸಿದ್ದಾಂತದಲ್ಲಿ ಮಾತ್ರ ಅಂತಹ ಸಿದ್ದಾಂತವನ್ನು ಬಲಿಷ್ಟಗೊಳಿಸಬೇಕೆಂದು ಕರೆ ನೀಡಿದರು.

    ಸಭೆಯನ್ನು ಉದ್ದೇಶಿಸಿ ಸಿಪಿಐಎಂ ಪಕ್ಷದ ಜಿಲ್ಲಾ ಮುಖಂಡರಾದ ಜೆ ಬಾಲಕೃಷ್ಣ ಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಸಿಪಿಐಎಂ ನಗರ ಸಮಿತಿ ಸದಸ್ಯರಾದ ದೀಪಕ್ ಬಜಾಲ್ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಸಿಪಿಐಎಂ ಮಹಿಳಾ ಶಾಖೆಯ ಕಾರ್ಯದರ್ಶಿ ಗೀತಾ ನಾಯಕ್ ಜಲ್ಲಿಗುಡ್ಡೆ ವಹಿಸಿದ್ದರು. ಕಾರ್ಯಕ್ರಮದ ನೇತೃತ್ವವನ್ನು ಸ್ಥಳೀಯ ಮುಖಂಡರಾದ ರೋಹಿಣಿ ಜಲ್ಲಿಗುಡ್ಡೆ, ಮೋಹನ್ ಜಲ್ಲಿಗುಡ್ಡೆ, ಕೇಶವ ಚೌಟ, ಪ್ರೇಮನಾಥ್ ಜಲ್ಲಿಗುಡ್ಡೆ, ವಸಂತ ಜಲ್ಲಿಗುಡ್ಡೆ, ಮಮತಾ ಕುಲಾಲ್ ಮುಂತಾದವರು ವಹಿಸಿದ್ದರು.ಸಿಪಿಐಎಂ ಜಲ್ಲಿಗುಡ್ಡೆ ಶಾಖಾ ಕಾರ್ಯದರ್ಶಿ ಜಯಪ್ರಕಾಶ್ ಜಲ್ಲಿಗುಡ್ಡೆ ಸ್ವಾಗತಿಸಿದರು ಮೋಹನ್ ಜಲ್ಲಿಗುಡ್ಡೆ ವಂದಿಸಿದರು.

     

    Share Information
    Advertisement
    Click to comment

    You must be logged in to post a comment Login

    Leave a Reply