ಕೊಯಮತ್ತೂರು ಮೇ 25: ಸುಲೂರಿನಲ್ಲಿ 10 ವರ್ಷದ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣವನ್ನು ತಮಿಳುನಾಡು ಸರ್ಕಾರ ನಿರ್ವಹಿಸಿದ ರೀತಿಗೆ ಸಂಬಂಧಿಸಿದಂತೆ ಎರಡು ದೊಡ್ಡ ವಿವಾದಗಳು ಮುನ್ನೆಲೆಗೆ ಬಂದಿದ್ದು, ಹೊಸದಾಗಿ ಆಯ್ಕೆಯಾಗಿರುವ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿವೆ.

ಮಗುವಿನ ಹತ್ಯೆಯ ಇಂತಹ ಸೂಕ್ಷ್ಮ ಪ್ರಕರಣದ ಕುರಿತು ಮಾತನಾಡುವಾಗ ಕೈಗಾರಿಕಾ ಸಚಿವೆ ಎಸ್. ಕೀರ್ತನಾ ಹಾಗೂ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಜಂಟಿ ಪತ್ರಿಕಾಗೋಷ್ಠಿಯಲ್ಲಿ ನಗುತ್ತಾ ಬೇಜವಾಬ್ದಾರಿತನ ಪ್ರದರ್ಶಿಸಿರುವುದು ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸಚಿವೆ ಮತ್ತು ಐಪಿಎಸ್ ಅಧಿಕಾರಿಗಳ ನಗು ಸೋಷಿಯಲ್ ಮೀಡಿಯಾದಲ್ಲಿ ವೈರಲ್:
ಮೊದಲನೆಯದಾಗಿ, ಬಾಲಕಿಯ ಕೊಲೆ ಪ್ರಕರಣದ ಬಗ್ಗೆ ಪ್ರಶ್ನಿಸಿದಾಗ ತಮಿಳುನಾಡು ಕೈಗಾರಿಕಾ ಸಚಿವೆ ಎಸ್. ಕೀರ್ತನಾ ಅವರು ನಗುತ್ತಿರುವುದು ಮಾಧ್ಯಮಗಳಲ್ಲಿ ಪ್ರಸಾರವಾಗಿ ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ತದನಂತರ, ಮಾಧ್ಯಮ ಸಂವಾದ ಮುಗಿದ ಬಳಿಕ ತಾನು ನಕ್ಕಿದ್ದಾಗಿ ಸಚಿವೆ ಸ್ಪಷ್ಟನೆ ನೀಡಿದ್ದಾರೆ. ಆದರೆ, ವಿವಾದ ಇಲ್ಲಿಗೆ ನಿಲ್ಲದೆ, ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಗಳದ್ದೇ ಮತ್ತೊಂದು ವೀಡಿಯೊ ಲೀಕ್ ಆಗಿ ಆಕ್ರೋಶದ ಬೆಂಕಿ ಹೆಚ್ಚಿಸಿದೆ.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುವ ಮುನ್ನ, ಪಶ್ಚಿಮ ವಲಯದ ಪೊಲೀಸ್ ಮಹಾನಿರ್ದೇಶಕಿ (IGP) ಆರ್.ವಿ. ರಮ್ಯಾ ಭಾರತಿ ಅವರು ಕೊಯಮತ್ತೂರು ರೇಂಜ್ ಡಿಐಜಿ ಪಿ. ಸಾಮಿನಾಥನ್ ಮತ್ತು ಕೊಯಮತ್ತೂರು ಎಸ್ಪಿ ಅಲ್ಲತಿಪಲ್ಲಿ ಪವನ್ ಕುಮಾರ್ ರೆಡ್ಡಿ ಅವರೊಂದಿಗೆ ನಗುತ್ತಾ, ಬೆರಳುಗಳನ್ನು ಉಜ್ಜುತ್ತಾ ತಮಾಷೆ ಮಾಡುತ್ತಿರುವ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ. ಈ ಐಪಿಎಸ್ ಅಧಿಕಾರಿಗಳ ವರ್ತನೆಗೆ ಸೋಷಿಯಲ್ ಮೀಡಿಯಾದಲ್ಲಿ ಜನ ಉಗಿಯುತ್ತಿದ್ದರೂ, ಪೊಲೀಸ್ ಇಲಾಖೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಘಟನೆಯ ಹಿನ್ನೆಲೆ ಮತ್ತು ಆರೋಪಿಯ ಬಂಧನ:
ಮೇ 21 ರಂದು ಸಂಜೆ 5 ಗಂಟೆ ಸುಮಾರಿಗೆ ಸುಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 10 ವರ್ಷದ ಹೆಣ್ಣು ಮಗು ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ನಾಪತ್ತೆಯಾಗಿತ್ತು. ಅಂದೇ ರಾತ್ರಿ ಪೋಷಕರು ದೂರು ನೀಡಿದ್ದರು. ಪ್ರಕರಣದ ತನಿಖೆಗಾಗಿ ಐದು ವಿಶೇಷ ತಂಡಗಳನ್ನು ರಚಿಸಿದ್ದ ಪೊಲೀಸರು ಸಿಸಿಟಿವಿ ಮತ್ತು ತಾಂತ್ರಿಕ ಕಣ್ಗಾವಲು ಮೂಲಕ ತನಿಖೆ ನಡೆಸಿ, ನಾಗಪಟ್ಟಣಂ ಜಿಲ್ಲೆಯ ಮೂಲದ, ಬಲಿಪಶುವಿನ ಕುಟುಂಬದ ಪರಿಚಯಸ್ಥನಾಗಿದ್ದ 33 ವರ್ಷದ ಕೆ. ಕಾರ್ತಿ ಎಂಬಾತನನ್ನು ಅಪಾರ್ಟ್ಮೆಂಟ್ ಒಂದರ ಅಡಗುತಾಣದಿಂದ ಬಂಧಿಸಿದ್ದಾರೆ. ಮಗುವನ್ನು ಆಮಿಷವೊಡ್ಡಿ ಕರೆದೊಯ್ದು ಈತ ಕ್ರೂರ ಕೃತ್ಯ ಎಸಗಿದ್ದಾನೆ. ಇವನಿಗೆ ಸಾಥ್ ನೀಡಿದ ಮತ್ತೊಬ್ಬ ಆರೋಪಿಯನ್ನೂ ಕ್ರಿಮಿನಲ್ ಪಿತೂರಿ ಅಡಿಯಲ್ಲಿ ಅರೆಸ್ಟ್ ಮಾಡಲಾಗಿದೆ.
ಈ ಘಟನೆಯನ್ನು “ಅತ್ಯಂತ ಭಯಾನಕ” ಎಂದು ಬಣ್ಣಿಸಿರುವ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು, ಇಂತಹ ಅಮಾನವೀಯ ಮತ್ತು ಕ್ಷಮಿಸಲಾಗದ ಅಪರಾಧ ಕೃತ್ಯಗಳನ್ನು ಸೌಜನ್ಯಕ್ಕೂ ಸಹಿಸುವುದಿಲ್ಲ. ಇಲಾಖೆಯ ನಿರ್ಲಕ್ಷ್ಯ ಹಾಗೂ ಆರೋಪಿಗಳಿಗೆ ಕಾನೂನಿನಡಿಯಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.