ಕಡಬ, ಮೇ 15: ಸಹೋದರರ ನಡುವೆ ಜಗಳ ನಡೆದು ಅಣ್ಣನಿಗೆ ಸ್ವಂತ ತಮ್ಮನೇ ಚಾಕುವಿನಿಂದ ಇರಿದ ಘಟನೆ ಕಡಬ ತಾಲೂಕಿನ ಮೂಜೂರು ಎಂಬಲ್ಲಿ ಇಂದು ಸಂಜೆ ನಡೆದಿದೆ.
ಗಾಯಗೊಂಡ ವ್ಯಕ್ತಿಯನ್ನು ಕಡಬ ತಾಲೂಕಿನ ಐತ್ತೂರು ಗ್ರಾಮದ ಮೂಜೂರು ಸಮೀಪದ ಮುಂಡಡ್ಕ ನಿವಾಸಿ ಧ್ರುವ ಕುಮಾರ್(35) ಎಂದು ಗುರುತಿಸಲಾಗಿದೆ. ಸಹೋದರರ ನಡುವೆ ಇಂದು ಸಂಜೆ ಜಗಳವುಂಟಾಗಿ ತಮ್ಮ ಪ್ರೀತಮ್ ಅಣ್ಣನಿಗೆ ಚಾಕುವಿನಿಂದ ಇರಿದಿರುವುದಾಗಿ ತಿಳಿದುಬಂದಿದೆ.
ಗಂಭೀರ ಗಾಯಗೊಂಡ ಅಣ್ಣನನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.