KARNATAKA
ಮಾಟ-ಮಂತ್ರದ ಹೆಸರಿನಲ್ಲಿ ಮಹಿಳೆ ಜತೆ ನಗ್ನ ವಿಡಿಯೋ ಕಾಲ್ ಮಾಡಿ ಬ್ಲ್ಯಾಕ್ಮೇಲ್: ಪೆರಿಂಗೋಟ್ಟುಕ್ಕಾರ ದೇವಸ್ಥಾನದ ಅರ್ಚಕ ಅಂದರ್

ಬೆಂಗಳೂರು, ಜೂನ್ 16: ಬೆಂಗಳೂರಿನ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಲ್ಲದೆ, ಬೆತ್ತಲೆ ವಿಡಿಯೋ ಮಾಡಿ ಬ್ಲ್ಯಾಕ್ಮೇಲ್ ಮಾಡಿದ ಆರೋಪದಲ್ಲಿ ಕೇರಳದ ಪೆರಿಂಗೋಟ್ಟುಕ್ಕಾರ ದೇವಸ್ಥಾನದ ಅರ್ಚಕ ಅರುಣ್ ಎಂಬಾತನನ್ನು ಬೆಂಗಳೂರಿನ ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ, ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.
ಪೂಜೆ ಮಾಡಿಸಲೆಂದು ಕೇರಳದ ಪೆರಿಂಗೋಟ್ಟುಕ್ಕಾರ ದೇವಸ್ಥಾನಕ್ಕೆ ತೆರಳಿದ್ದ ಮಹಿಳೆಗೆ ಮಾಟ ಮಾಂತ್ರದ ಬೆದರಿಕೆಯೊಡ್ಡಿ ಮುಖ್ಯ ಅರ್ಚಕ ಹಾಗೂ ಅರ್ಚಕ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ಕೇರಳದ ಪೆರಿಂಗೋಟ್ಟುಕ್ಕಾರ ದೇಗುಲದ ಬಗ್ಗೆ ಕೇಳಿತಿಳಿದಿದ್ದರು. ಹೀಗಾಗಿ ಅಲ್ಲಿಗೆ ಪೂಜೆ ಮಾಡಿಸಲೆಂದು ತೆರಳಿದ್ದರು. ಆ ವೇಳೆ ಪರಿಚಯವಾಗಿದ್ದ ಅರ್ಚಕರು, ಪೂಜೆಯ ಹೆಸರಿನಲ್ಲಿ ಮತ್ತು ಮಾಟ-ಮಂತ್ರ ಹೆಸರಿನಲ್ಲಿ ಮಹಿಳೆ ಜತೆ ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮೂಲಕ ಅಸಭ್ಯವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೆ, ಮತ್ತೊಂದು ಪೂಜೆ ಮಾಡಿಸುವುದಾಗಿ ಕರೆಸಿಕೊಂಡು ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ ಎಂದು ಬೆಳ್ಳಂದೂರು ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂತ್ರಸ್ತೆ ಮಹಿಳೆ ಉಲ್ಲೇಖಿಸಿದ್ದಾರೆ.

ಕುಟುಂಬದಲ್ಲಿ ಕೆಲವೊಂದು ಸಮಸ್ಯೆಗಳಿಂದ ಬಳಲುತ್ತಿದ್ದ ಬೆಂಗಳೂರಿನ ಮಹಿಳೆಗೆ ಕೇರಳದ ಪೆರಿಂಗೋಟ್ಟುಕ್ಕಾರ ದೇವಸ್ಥಾನದ ಬಗ್ಗೆ ಸ್ನೇಹಿತರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೋದಿಂದ ಮಾಹಿತಿ ದೊರೆತಿತ್ತು. ಅಲ್ಲಿಗೆ ಹೋಗಿ ಪೂಜೆ ಮಾಡಿಸಿಕೊಂಡರೆ ಪರಿಹಾರ ದೊರೆಯುತ್ತದೆ ಎಂಬ ಭರವಸೆ ಬಂದಿತ್ತು. ಹೀಗಾಗಿ ಅಲ್ಲಿಗೆ ತೆರಳಿದ್ದರು. ಆ ಸಂದರ್ಭದಲ್ಲಿ, ಸಂತ್ರಸ್ತೆಗೆ ಅರ್ಚಕರ ಜತೆ ಮಲಯಾಳಂ ಭಾಷೆಯಲ್ಲಿ ಮಾತನಾಡಲು ಸಾಧ್ಯವಾಗಲಿಲ್ಲ. ತಮಿಳು ಮತ್ತು ಕನ್ನಡವಷ್ಟೇ ಬರುತ್ತಿದ್ದ ಸಂತ್ರಸ್ತೆಗೆ ಅರ್ಚಕ ಅರುಣ್ ಎಂಬಾತ ಪರಿಚಯವಾಗಿದ್ದಾನೆ. ಆತ ತಮಿಳಿನಲ್ಲಿ ಮಾತನಾಡಿ ಅದನ್ನು ಅರ್ಚಕರಿಗೆ ತಿಳಿಸಿದ್ದ. ನಂತರ 24 ಸಾವಿ ರೂ. ಕೊಟ್ಟರೆ ಪೂಜೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾನೆ. ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದ ಆತ, ಸಂತ್ರಸ್ತೆ ಬೆಂಗಳೂರಿಗೆ ಬಂದ ನಂತರ ಹಲವು ಬಾರಿ ಕರೆ ಮಾಡಿದ್ದ.
ಸಂತ್ರಸ್ತೆಗೆ ಕರೆ ಮಾಡಿದ್ದ ಅರುಣ್, ‘ನಿಮ್ಮ ಮೇಲೆ ಮಾಟ-ಮಂತ್ರ ಆಗಿದೆ. ಅದನ್ನು ಹೋಗಲಾಡಿಸಲು ಪೂಜೆ ಮಾಡುತ್ತೇನೆ. ಹೇಳಿದಂತೆ ನೀವು ಮಾಡಬೇಕು’ ಎಂದಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಂತರ ವಾಟ್ಸ್ಆ್ಯಪ್ ವಿಡಿಯೋ ಕಾಲ್ನಲ್ಲಿ ನಗ್ನನಾಗಿದ್ದಲ್ಲದೆ, ಮಹಿಳೆಗೂ ಬಲವಂತ ಮಾಡಿದ್ದಾನೆ. ಆದರೆ ಸಂತ್ರಸ್ತೆ ಅದಕ್ಕೆ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡಿದ್ದ ಆತ, ಮಕ್ಕಳ ಮೇಳೆ ಮಾಟ ಮಂತ್ರ ಮಾಡಿಸುವೆ ಎಂದು ಬೆದರಿಕೆ ಹಾಕಿ, ಮಹಿಳೆ ನಗ್ನಳಾಗುವಂತೆ ಮಾಡಿದ್ದ.
ಅದಾದ ನಂತರ ಮತ್ತೆ ವಿಶೇಷ ಪೊಜೆಗೆಂದು ದೇವಸ್ಥಾನಕ್ಕೆ ಬರುವಂತೆ ತಿಳಿಸಿದ್ದ. ಬ್ಲ್ಯಾಕ್ಮೇಲ್ಗೆ ಹೆದರಿ ಮಹಿಳೆ ದೇಗುಲಕ್ಕೆ ತೆರಳಿದ್ದರು. ಆಕೆಯ ಬಳಿ ಪೂಜೆ ಮಾಡಿಸಿದ್ದ ಅರುಣ್ ಹಾಗೂ ಮುಖ್ಯ ಅರ್ಚಕ, ಧಾರ್ಮಿಕ ಕ್ರಿಯೆ ಇದೆ ಎಂದು ಬಲವಂತವಾಗಿ ಕಾರಿನಲ್ಲಿ ಕಾಡಿಗೆ ಕರೆದುಕೊಂಡು ಹೋಗಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಮುಂದಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದ ಮಹಿಳೆ ಅಲ್ಲಿಂದ ಬೆಂಗಳೂರಿಗೆ ವಾಪಸಾಗಿದ್ದು, ನಂತರ ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದಾರೆ. ಬಂಧಿತನ ವಿರುದ್ಧ ಬಿಎನ್ಎಸ್ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಲಾಗಿದೆ.