LATEST NEWS
ಅಣಬೆ ಪ್ಯಾಕ್ಟರಿ ಮಾಲೀಕರಿಗೆ ಜನರ ಹೆಣದ ಮೇಲೆ ಹಣ ಮಾಡುವ ಆಸೆ ಯಾಕೆ – ಭರತ್ ಶೆಟ್ಟಿ

ಮಂಗಳೂರು ನವೆಂಬರ್ 11: ಅಣಬೆ ಪ್ಯಾಕ್ಟರಿಯಲ್ಲಿ ಬೀರುವ ದುರ್ನಾತದಿಂದ ಮಕ್ಕಳು , ವೃದ್ದರು ಅನಾರೋಗ್ಯ ಅಸ್ತಮಾದಂತಹ ರೋಗಕ್ಕೆ ತುತ್ತಾಗುತ್ತಿದ್ದು, ತತ್ಕ್ಷಣ ಇದನ್ನು ಮುಚ್ಚುವ ಬದಲು ಜನರ ಹೆಣದ ಮೇಲೆ ಹಣ ಮಾಡುವ ಆಸೆ ಯಾಕೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಪ್ರಶ್ನಿಸಿದ್ದಾರೆ.
ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲದ ವತಿಯಿಂದ ವಾಮಂಜೂರಿನಲ್ಲಿ ಶನಿವಾರ ವೈಟ್ ಗ್ರೋ ಅಣಬೆ ಫ್ಯಾಕ್ಟರಿಯಿಂದ ಜನರಿಗೆ ಆಗುತ್ತಿರುವ ಸಮಸ್ಯೆ ವಿರುದ್ದ ಹಾಗೂ ಮುಚ್ಚುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಸಮಸ್ಯೆ ಇಲ್ಲ ಎನ್ನುವ ಜಿಲ್ಲಾಧಿಕಾರಿ,ಮನಪಾ ಆಯುಕ್ತರು,ಅಧಿಕಾರಿಗಳು ಎರಡು ದಿನ ಫ್ಯಾಕ್ಟರಿ ಬಳಿ ವಾಸ್ತವ್ಯ ಹೂಡಬೇಕು. ಮಾಲಕರಾದ ಜೆ.ಆರ್ ಲೋಬೋ ಅವರು ಮಂಗಳೂರಿನಲ್ಲಿ ವಾಸ್ತವ್ಯ ಇರುವ ಬದಲು ಜನರ ಜತೆ ಇಲ್ಲಿ ವಾಸಿಸಬೇಕು. ಆಗ ಜನ ಹೇಳುವ ಸತ್ಯ ವಿಚಾರ ಅರಿವಾಗುತ್ತದೆ ಎಂದರು.

ರಾಜಕೀಯೇತರ ಹೋರಾಟಕ್ಕೆ ನಾವು ಇಷ್ಟು ದಿನ ಒತ್ತು ನೀಡಿದ್ದೆವು. ಬಿಜೆಪಿ ಸರಕಾರದ ಅವಧಿಯಲ್ಲಿ ಜಿಲ್ಲಾಧಿಕಾರಿ ರವಿಕುಮಾರ್ ಸ್ಥಗಿತಕ್ಕೆ ಆದೇಶಿಸಿದ್ದರು. ಆದರೆ ಬದಲಾದ ಸರಕಾರದ ಈ ಅವಧಿಯಲ್ಲಿ ಮತ್ತೆ ಫ್ಯಾಕ್ಟರಿ ಆರಂಭವಾಗಿದೆ. ದುರ್ವಾಸನೆ ಬಾರದಂತೆ ಮಾಡುವುದಾಗಿ ಹೇಳಿದವರು ಮಾತನಾಡುತ್ತಿಲ್ಲ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅಜೆಂಡಾ ಇಡಲು ಆಯುಕ್ತರೇ ಅಡ್ಡಿ ಪಡಿಸಿದ್ದಾರೆ. ಕಾಂಗ್ರೆಸ್ ಸದಸ್ಯರು ಜನರ ಬೆಂಬಲಕ್ಕಿರುವ ಬದಲು ತಮ್ಮ ನಾಯಕನ ಬೆಂಬಕ್ಕೆ ನಿಂತಿದ್ದಾರೆ. ಬೇಕಾದ ಆಧಿಕಾರಿಗಳನ್ನು ಕರೆಸಿ ತಮಗೆ ಬೇಕಾದಂತೆ ನಡೆಸುಕೊಳ್ಳುತ್ತದೆ. ಹೀಗಾಗಿ ಇದೀಗ ಬಿಜೆಪಿ ಪಕ್ಷದ ವತಿಯಿಂದ ಜನರ ಪರವಾಗಿ ಈ ಫ್ಯಾಕ್ಟರಿ ಮುಚ್ಚುವವರೆಗೆ ಪ್ರತಿಭಟನೆ ನಡೆಸುತ್ತದೆ. ನಾವೇ ಮುತ್ತಿಗೆ ಹಾಕುವ ಮೂಲಕ ಮುಚ್ಚುತ್ತೇವೆ ಎಂದರು.