LATEST NEWS
ಕುಡುಪು ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸುವುದನ್ನು ನಿಲ್ಲಿಸದಿದ್ದರೆ ಪೊಲೀಸ್ ಠಾಣೆಗೆ ಮುತ್ತಿಗೆ – ಭರತ್ ಶೆಟ್ಟಿ ಎಚ್ಚರಿಕೆ

ಮಂಗಳೂರು ಮೇ 01: ಕುಡುಪುವಿನಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಕ್ಕೆ ಆಕ್ರೋಶಗೊಂಡ ಗುಂಪು ಯುವಕನನ್ನು ಕೊಂದಿದೆ ಎಂದು ಎಫ್ಐಆರ್ನಲ್ಲೇ ದಾಖಲಾಗಿದೆ. ಆದರೆ ಘೋಷಣೆ ಕೂಗಿದವ ಮಾನಸಿಕ ಅಸ್ವಸ್ಥ ಎಂದು ಹೇಳುವುದು ನೆಪ. ದೇಶದ್ರೋಹದ ಕೃತ್ಯ ಎಸಗಿದವರನ್ನು ಮತ್ತು ವಿಕೃತಿ ಮೆರೆದವರನ್ನು ಈ ಹಿಂದೆಯೂ ಮಾನಸಿಕ ಅಸ್ವಸ್ಥರು ಎಂದು ಹೇಳಿದ ಉದಾಹರಣೆಗಳು ಇವೆ. ಬೆಂಗಳೂರಿನಲ್ಲಿ ದನದ ಕೆಚ್ಚಲು ಕುಯ್ದವರು, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಯುವತಿಯರ ಮೇಲೆ ದೌರ್ಜನ್ಯ ಎಸಗಿದವರು ಎಲ್ಲರೂ ಮಾನಸಿಕ ಅಸ್ವಸ್ಥರು ಹೇಗಾಗುತ್ತಾರೆ ಎಂದು ಶಾಸಕರು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಭರತ್ ಶೆಟ್ಟಿ ನಗರ ಹೊರವಲಯದ ಕುಡುಪುವಿನಲ್ಲಿ ನಡೆದ ಗುಂಪು ಹಲ್ಲೆ ಮತ್ತು ಹತ್ಯೆಯ ರಾಜಕೀಯ ಲಾಭಪಡೆಯಲು ಕಾಂಗ್ರೆಸ್ ಹಾಗೂ ಎಸ್ಡಿಪಿಐ ಪ್ರಯತ್ನಿಸುತ್ತಿದ್ದು ತಮಗೆ ಆಗದವರನ್ನು ಬೊಟ್ಟು ಮಾಡಿ ಆರೋಪಿಗಳೆಂದು ಬಿಂಬಿಸುತ್ತಿದ್ದಾರೆ. ಇದಕ್ಕೆ ಮಣಿದು ಅಮಾಯಕರನ್ನು ಬಂಧಿಸುವುದನ್ನು ನಿಲ್ಲಿಸದಿದ್ದರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ, ಬಿಜೆಪಿಯ ಡಾ.ವೈ.ಭರತ್ ಶೆಟ್ಟಿ ಎಚ್ಚರಿಕೆ ನೀಡಿದರು.

ಪಹಲ್ಗಾಮ್ ಘಟನೆ ನಡೆದ ನಂತರ ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು ದೇಶವಿರೋಧಿ ಚಟುವಟಿಕೆ ಕಂಡುಬಂದರೆ ಜನರು ಆಕ್ರೋಶಗೊಳ್ಳುವ ಪರಿಸ್ಥಿತಿ ಇದೆ. ನನ್ನ ಕ್ಷೇತ್ರದಲ್ಲಿ ಆಗಿರುವ ಗುಂಪು ಹಲ್ಲೆ ಮತ್ತು ಕೊಲೆ ಕೂಡ ಇದೇ ರೀತಿ ಉದ್ವೇಗದಿಂದ ಆಗಿರುವ ಸಾಧ್ಯತೆ ಇದೆ. ಅದನ್ನು ಅಪರಾಧ ಪ್ರಕರಣವಾಗಿ ನೋಡಬೇಕೇ ಹೊರತು ಧರ್ಮ ಮತ್ತು ರಾಜಕೀಯ ಬಣ್ಣ ಕೊಡುವುದು ಸರಿಯಲ್ಲ’ ಎಂದರು.