DAKSHINA KANNADA
ರೈಲ್ವೆ ಹಳಿ ಮೇಲೆ ಭೂ ಕುಸಿತ ಬೆಂಗಳೂರು ಮಂಗಳೂರು ರೈಲು ಸಂಚಾರ ರದ್ದು
ರೈಲ್ವೆ ಹಳಿ ಮೇಲೆ ಭೂ ಕುಸಿತ ಬೆಂಗಳೂರು ಮಂಗಳೂರು ರೈಲು ಸಂಚಾರ ರದ್ದು
ಮಂಗಳೂರು ಜೂನ್ 14: ಕರಾವಳಿಯಲ್ಲಿ ಸುರಿಯುತ್ತಿರುಮ ಮಳೆಗೆ ರೈಲ್ವೆ ಹಳಿ ಮೇಲೆ ಭೂ ಕುಸಿತ ಉಂಟಾದ ಪರಿಣಾಮ ಬೆಂಗಳೂರು ಮತ್ತು ಮಂಗಳೂರು ಮಧ್ಯೆ ರೈಲು ಸಂಚಾರ ರದ್ದುಗೊಂಡಿದೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ ಪರಿಸರದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಬುಧವಾರ ಮತ್ತು ಗುರುವಾರ ಎಡೆಬಿಡದೆ ಮಳೆಯಾಗಿದ್ದು ಸುಬ್ರಹ್ಮಣ್ಯ-ಸಿರಿಬಾಗಿಲು ಮಧ್ಯಭಾಗದಲ್ಲಿ ಹಠಾತ್ ಭೂಕುಸಿತ ಉಂಟಾಗಿ ರೈಲ್ವೆ ಹಳಿಯ ಮೇಲೆ ಮಣ್ಣು ಬಿದ್ದಿದೆ.
ಇದರಿಂದ 10.50ಕ್ಕೆ ಮಂಗಳೂರಿನಿಂದ ಹೊರಟಿದ್ದ ಕಾರವಾರ-ಬೆಂಗಳೂರು ರೈಲ್ವೆ ಸುಬ್ರಹ್ಮಣ್ಯವರೆಗೆ ಸಂಚರಿಸಿ ಬಳಿಕ ತುರ್ತು ಸೂಚನೆ ಹಿನ್ನೆಲೆಯಲ್ಲಿ ಮುಂದಿನ ಪ್ರಯಾಣ ರದ್ದುಗೊಳಿಸಿ ಮರಳಿ ಮಂಗಳೂರಿಗೆ ಪ್ರಯಾಣ ಹಿಂದಿರುಗಿದೆ. ಅದೇ ರೀತಿ ಬೆಳಗ್ಗೆ ಬೆಂಗಳೂರಿನಿಂದ ಮಂಗಳೂರಿನತ್ತ ಹೊರಟಿದ್ದ ರೈಲು ಸಕಲೇಶಪುರ ತನಕ ಬಂದು ಪ್ರಯಾಣ ಮೊಟಕುಗೊಳಿಸಿ ಮರಳಿ ಬೆಂಗಳೂರಿಗೆ ತೆರಳುವ ಸಾಧ್ಯತೆಯಿದೆ.
ಭೂಕುಸಿತದಿಂದ ರೈಲ್ವೆ ಹಳಿಯ ಮೇಲೆ ಮಣ್ಣು ಬಿದ್ದಿದ್ದು ಜೆಸಿಬಿ ಮುಖೇನ ತೆರವು ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ. ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು ಮುಂದಿನ ಕ್ರಮದ ಪರಿಶೀಲನೆ ನಡೆಸುತ್ತಿದ್ದಾರೆ.
You must be logged in to post a comment Login